
ಈ ಬಾರಿಯ ಐಪಿಎಲ್ ಟೂರ್ನಿ ಆರಂಭಕ್ಕೆ ಬೆರಳೆಣಿಕೆಯ ದಿನಗಳಿದ್ದು ಎಲ್ಲಾ ಆಟಗಾರರು ಕೂಡ ಟೂರ್ನಿಯಲ್ಲಿ ಭಾಗಿಯಾಗಲು ತಮ್ಮ ತಂಡಗಳನ್ನು ಸೇರಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಿಎಎಸ್ಕೆ ತಂಡದ ಮತ್ತೋರ್ವ ಸ್ಟಾರ್ ಆಟಗಾರ ಐಪಿಎಲ್ ಆರಂಭಿಕ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ದಟ್ಟವಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿಯ ಹರಾಜಿನಲ್ಲಿ ಆಲ್ರೌಂಡರ್ ದೀಪಕ್ ಚಾಹರ್ ಅವರನ್ನು 14 ಕೋಟಿ ನೀಡಿ ಖರೀದಿಸಿತ್ತು. ಈ ಐಪಿಎಲ್ನ ಎರಡನೇ ಬೃಹತ್ ಬಿಡ್ಡಿಂಗ್ ಇದಾಗಿತ್ತು. ಆದರೆ ಟೂರ್ನಿಗೂ ಮುನ್ನ ದೀಪಕ್ ಚಾಹರ್ ಗಾಯಗೊಂಡಿರುವ ಕಾರಣ ಈ ಬಾರಿಯ ಸಂಪೂರ್ಣ ಆವೃತ್ತಿಯಿಂದ ದೀಪಕ್ ಚಾಹರ್ ಹೊರಗುಳಿಯುವ ಸಾಧ್ಯತೆಯಿದೆ. ಮತ್ತೊಂದೆಡೆ ರೀಟೈನ್ ಮಾಡಿಕೊಂಡಿದ್ದ ಯುವ ಆಟಗಾರ ಋತುರಾಜ್ ಗಾಯಕ್ವಾಡ್ ಕೂಡ ಗಾಯಗೊಂಡಿದ್ದು ಆರಂಭಿಕ ಪಂದ್ಯಗಳಿಗೆ ಅಲಭ್ಯವಾಗುವ ಸಾಧ್ಯತೆಯಿದೆ. ಈ ಮಧ್ಯೆ ತಂಡದ ಮತ್ತೋರ್ವ ಸ್ಟಾರ್ ಆಟಗಾರ ಕೂಡ ಟೂರ್ನಿಯ ಆರಂಭಿಕ ಪಂದ್ಯದಿಂದ ಹೊರಗುಳಿಯುವ ಆತಂಕವನ್ನು ಎದುರಿಸುತ್ತಿದ್ದಾರೆ. ಅದಕ್ಕೆ ಕಾರಣ ವೀಸಾ ಸಮಸ್ಯೆ.
ಆರಂಭಿಕ ಪಂದ್ಯವನ್ನು ಕಳೆದುಕೊಳ್ಳಲಿದ್ದಾರಾ ಮೊಯೀನ್ ಅಲಿ: ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿಯ ಆವೃತ್ತಿಗೂ ಮುನ್ನ ಇಂಗ್ಲೆಂಡ್ನ ಅನುಭವಿ ಆಟಗಾರ ಮೊಯೀನ್ ಅಲಿ ಅವರನ್ನು ರೀಟೈನ್ ಮಾಡಿಕೊಂಡಿತ್ತು. 2021ರ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಪಟ್ಟಕ್ಕೇರಲು ಮೊಯೀನ್ ಅಲಿ ಕೊಡುಗೆ ಕೂಡ ಮಹತ್ವದ್ದಾಗಿದ್ದು. ಆದರೆ ಈ ಬಾರಿಯ ಟೂರ್ನಿಯಲ್ಲಿ ಭಾಗವಹಿಸಲು ಮೊಯೀನ್ ಅಲಿ ವೀಸಾ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಹಾಗಾಗಿ ಆರಂಭಿಕ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆಯಿದೆ.
ವೀಸಾ ಸಮಸ್ಯೆ ಬಗ್ಗೆ ಸಿಎಸ್ಕೆ ಸಿಇಒ ಮಾಹಿತಿ: ಮೊಯೀನ್ ಅಲಿ ವೀಸಾ ಸಮಸ್ಯೆ ಎದುರಿಸುತ್ತಿರುವ ಬಗ್ಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಿಇಒ ಕಾಸಿ ವಿಶ್ವನಾಥನ್ ಕ್ರಿಕ್ ಬಜ್ಗೆ ಖಚಿತಪಡಿಸಿದ್ದಾರೆ. "ಅವರು ಫೆಬ್ರವರಿ 28ಕ್ಕೆ ವೀಸಾಗಾಗಿ ಅರ್ಜಿ ಸಲ್ಲಿಸಿದ್ದಾರೆ. ಅವರು ಅರ್ಜಿ ಸಲ್ಲಿಸಿ ಅದಾಗಲೇ 20 ದಿನಗಳು ಕಳೆದಿದೆ. ಅವರು ಭಾರತಕ್ಕೆ ಆಗಾಗ ಪ್ರಯಾಣಿಸುತ್ತಿದ್ದರು. ಆದರೆ ಅವರು ಇನ್ನೂ ವೀಸಾ ಪತ್ರಗಳನ್ನು ಸ್ವೀಕರಿಸಿಲ್ಲ. ಅವರು ಶೀಘ್ರದಲ್ಲಿ ತಂಡವನ್ನು ಸೇರಿಕೊಳ್ಳುವ ವಿಶ್ವಾಸದಲ್ಲಿ ನಾವಿದ್ದೇವೆ" ಎಂದಿದ್ದಾರೆ ಕಾಸಿ ವಿಶ್ವನಾಥನ್.
ಬಿಸಿಸಿಐ ನೆರವು ಕೇಳಿದ ಸಿಎಸ್ಕೆ: ಇನ್ನು ಮೊಯೀನ್ ಅಲಿ ವಿಸಾ ಸಮಸ್ಯೆ ಎದುರಿಸುತ್ತಿರುವ ಬಗ್ಗೆ ಈಗಾಗಲೇ ಸಿಎಸ್ಕೆ ಬಿಸಿಸಿಐ ನೆರವು ಕೇಳಿದೆ. ವಿಸಾಗೆ ಅರ್ಜಿ ಸಲ್ಲಿಸಿ 202 ದಿನಗಳು ಕಳೆದರೂ ಯುಕೆಯಲ್ಲಿರುವ ಭಾರತೀಯ ರಾಯಭಾರ ಕಚೇರಿಯಿಂದ ಪ್ರಯಾಣಕ್ಕೆ ಅನುಮತಿ ಪತ್ರಗಳನ್ನು ಸ್ವೀರಿಸಿಲ್ಲ. ಹೀಗಾಗಿ ಸಿಎಸ್ಕೆ ಫ್ರಾಂಚೈಸಿ ಬಿಸಿಸಿಐ ನೆರವು ಕೇಳಿದ್ದು ಶೀಗ್ರದಲ್ಲಿ ಭಾರತಕ್ಕೆ ಪ್ರಯಾಣಿಸಲು ಅನುವಾಗಲು ಸಹಾಯ ಮಾಡಲು ಮನವಿ ಮಾಡಿದೆ. ಮುಂದಿನ ವಾರ ಟೂರ್ನಿ ಆರಂಭವಾಗಲಿದ್ದು ಸಿಎಸ್ಕೆ ತಂಡದ ಬಹುತೇಕ ಎಲ್ಲಾ ಆಟಗಾರರು ಕೂಡ ಸೂರತ್ನಲ್ಲಿದ್ದು ಅಭ್ಯಾಸ ಶಿಬಿರದಲ್ಲಿ ಭಾಗವಹಿಸಿದ್ದಾರೆ. ಆದರೆ ಮೊಯೀನ್ ಅಲಿ ಮಾತ್ರ ಸಂಪೂರ್ಣ ಅಭ್ಯಾಸ ಶಿಬಿರಕ್ಕೆ ಅಲಭ್ಯವಾಗಿದ್ದಾರೆ.
ಸಿಎಸ್ಕೆ ಸಂಪೂರ್ಣ ಸ್ಕ್ವಾಡ್: ಎಂಎಸ್ ಧೋನಿ, ರವೀಂದ್ರ ಜಡೇಜಾ, ರುತುರಾಜ್ ಗಾಯಕ್ವಾಡ್, ಮೊಯಿನ್ ಅಲಿ, ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ದೀಪಕ್ ಚಹಾರ್, ಕೆಎಂ ಆಸಿಫ್, ತುಷಾರ್ ದೇಶಪಾಂಡೆ, ಶಿವಂ ದುಬೆ, ರಾಜವರ್ಧನ್ ಹಂಗರ್ಗೇಕರ್, ಸಿಮರ್ಜೀತ್ ಸಿಂಗ್, ಸುಭ್ರಾಂಶು ಸೇನಾಪತಿ, ಮುಖೇಶ್ ಚೌಧರಿ, ಪ್ರಶಾಂತ್ ಸೋಲಂಕಿ, ಕೆ.ಭಗತ್ ವರ್ಮಾ, ಸಿ.ಹರಿ ನಿಶಾಂತ್, ಎನ್ ಜಗದೀಸನ್, ಡ್ವೇನ್ ಬ್ರಾವೋ, ಮಹೇಶ್ ತೀಕ್ಷಣ, ಡೆವೊನ್ ಕಾನ್ವೇ, ಡ್ವೈನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ಆಡಮ್ ಮಿಲ್ನೆ, ಕ್ರಿಸ್ ಜೋರ್ಡಾನ್