RCB vs RR: ರಾಜಸ್ಥಾನ್ ಪರ ಇದ್ದ ಪಂದ್ಯ ಆರ್ಸಿಬಿ ಕೈಗೆ ಬಂದದ್ದು ಆತ ಎಸೆದ ಆ ಒಂದು ಓವರ್ನಿಂದಲೇ!

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭವಾಗಿದ್ದು, ಟೂರ್ನಿಯಲ್ಲಿ ಭಾಗವಹಿಸಿರುವ ಹತ್ತು ತಂಡಗಳ ನಡುವೆ ಅಂಕಪಟ್ಟಿಯಲ್ಲಿ ಉತ್ತಮ ಸ್ಥಾನ ತಲುಪಲು ಪೈಪೋಟಿ ಏರ್ಪಟ್ಟಿದೆ. ಒಂದೆಡೆ ಬಲಿಷ್ಠ ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಟೂರ್ನಿಯಲ್ಲಿನ ತಮ್ಮ ಮೊದಲೆರಡು ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿದ್ದರೆ, ರಾಜಸ್ಥಾನ್ ರಾಯಲ್ಸ್ ತನ್ನ ಮೊದಲೆರಡು ಪಂದ್ಯಗಳಲ್ಲಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಹೀಗೆ ಟೂರ್ನಿಯ ತನ್ನ ಮೊದಲೆರಡು ಪಂದ್ಯಗಳಲ್ಲಿ ಗೆದ್ದು ಬೀಗಿದ್ದ ರಾಜಸ್ಥಾನ್ ರಾಯಲ್ಸ್ ಮೂರನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೆಣಸಾಟ ನಡೆಸಿ ಸೋಲನ್ನು ಅನುಭವಿಸಿದ್ದು, ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಸೋಲಿನ ರುಚಿ ಕಂಡಿದೆ.
ಹೌದು, ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ಏಪ್ರಿಲ್ 5ರಂದು ಸೆಣಸಾಟ ನಡೆಸಿದವು. ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 169 ರನ್ ಕಲೆಹಾಕಿ ಎದುರಾಳಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 170 ರನ್ಗಳ ಗುರಿಯನ್ನು ನೀಡಿತು. ಇನ್ನು ಈ ಪೈಪೋಟಿಯುತ ಗುರಿಯನ್ನು ಬೆನ್ನತ್ತಿ 12.3 ಓವರ್ಗಳಲ್ಲಿ 87 ರನ್ ಗಳಿಸಿ 5 ವಿಕೆಟ್ ಕಳೆದುಕೊಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶಹಬಾಜ್ ಅಹ್ಮದ್ ಮತ್ತು ಏಳನೇ ಕ್ರಮಾಂಕದಲ್ಲಿ ಕಣಕ್ಕಿಳಿದ ದಿನೇಶ್ ಕಾರ್ತಿಕ್ ಆಸರೆಯಾದರು. 67 ರನ್ಗಳ ಜತೆಯಾಟವಾಡಿದ ಈ ಜೋಡಿ ರಾಜಸ್ಥಾನ್ ರಾಯಲ್ಸ್ ಬೌಲರ್ಗಳ ಆರ್ಭಟವನ್ನು ತಗ್ಗಿಸಿದರು. ಶಹಬಾಜ್ ಅಹ್ಮದ್ 26 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ ಸಹಿತ 45 ರನ್ ಕಲೆಹಾಕಿದರೆ, ಅಜೇಯರಾಗಿ ಉಳಿದ ದಿನೇಶ್ ಕಾರ್ತಿಕ್ 23 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 44 ರನ್ ಚಚ್ಚಿದರು. ಇನ್ನು ಶಹಬಾಜ್ ಅಹ್ಮದ್ ಔಟ್ ಆದ ಬಳಿಕ ಕಣಕ್ಕಿಳಿದ ಹರ್ಷಲ್ ಪಟೇಲ್ 4 ಎಸೆತಗಳಲ್ಲಿ 1 ಸಿಕ್ಸರ್ ಸಹಿತ 9 ರನ್ ಗಳಿಸಿ ಅಜೇಯರಾಗಿ ಉಳಿದರು.
ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು 19.1 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿ 4 ವಿಕೆಟ್ಗಳ ಜಯ ಸಾಧಿಸಿತು. ಹೀಗೆ ಸೋಲಿನತ್ತ ಮುಖ ಮಾಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ದಿನೇಶ್ ಕಾರ್ತಿಕ್ ಮತ್ತು ಶಹಬಾಜ್ ಅಹ್ಮದ್ ಅಬ್ಬರದಿಂದ ಗೆದ್ದಿದ್ದು, ಈ ಗೆಲುವಿನ ಕುರಿತು ಹಲವಾರು ಮಾಜಿ ಕ್ರಿಕೆಟಿಗರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್ ಕೂಡ ಮಾತನಾಡಿದ್ದು, ಪಂದ್ಯ ಯಾವ ಓವರ್ನಲ್ಲಿ ರಾಜಸ್ಥಾನ್ ಕೈತಪ್ಪಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತೆಕ್ಕೆಗೆ ಬಿತ್ತು ಎಂಬುದನ್ನು ಈ ಕೆಳಕಂಡಂತೆ ತಿಳಿಸಿದ್ದಾರೆ.

ಪಂದ್ಯ ರಾಜಸ್ಥಾನ್ ರಾಯಲ್ಸ್ ಕೈತಪ್ಪಿದ್ದು ಈ ಓವರ್ನಲ್ಲಿ
ರಾಜಸ್ಥಾನ್ ರಾಯಲ್ಸ್ ವಿರುದ್ಧ ದಿನೇಶ್ ಕಾರ್ತಿಕ್ ಅಬ್ಬರಿಸಿರುವುದರ ಕುರಿತು ಟ್ವೀಟ್ ಮಾಡಿರುವ ಬ್ರಾಡ್ ಹಾಗ್ ರವಿಚಂದ್ರನ್ ಅಶ್ವಿನ್ ಮಾಡಿದ 14 ಓವರ್ನಲ್ಲಿ ದಿನೇಶ್ ಕಾರ್ತಿಕ್ ಶ್ರಮವಹಿಸಿ 20ಕ್ಕಿಂತ ಹೆಚ್ಚು ರನ್ ಗಳಿಸಿದರು ಹಾಗೂ ಈ ಸಂದರ್ಭದಲ್ಲಿಯೇ ಪಂದ್ಯ ರಾಜಸ್ಥಾನ್ ರಾಯಲ್ಸ್ ಕೈತಪ್ಪಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಾಯಿತು ಎಂದು ಬರೆದುಕೊಂಡಿದ್ದಾರೆ.

ತನ್ನ ಅಂತಿಮ ಓವರ್ನಲ್ಲಿ ದುಬಾರಿಯಾಗಿದ್ದ ಅಶ್ವಿನ್
ಮೊದಲಿಗೆ 3 ಓವರ್ ಬೌಲಿಂಗ್ ಮಾಡಿದ್ದ ಅಶ್ವಿನ್ 18 ರನ್ ನೀಡಿ ಯಾವುದೇ ವಿಕೆಟ್ ಪಡೆಯದೇ ದುಬಾರಿ ಕೂಡ ಆಗದೇ ಇದ್ದರು. ಆದರೆ, 14ನೇ ಓವರ್ ಮೂಲಕ ತನ್ನ ಅಂತಿಮ ಓವರ್ ಬೌಲಿಂಗ್ ಮಾಡಿದ ಅಶ್ವಿನ್ ಅದೊಂದೇ ಓವರ್ನಲ್ಲಿ 21 ರನ್ ನೀಡಿ ದುಬಾರಿಯಾದರು. ತಮಿಳು ನಾಡು ತಂಡದ ತನ್ನ ಸಹ ಆಟಗಾರನಾದ ಅಶ್ವಿನ್ ಎಸೆತಗಳಿಗೆ ಬೌಂಡರಿ ಸಿಕ್ಸರ್ ಬಾರಿಸಿದ ದಿನೇಶ್ ಕಾರ್ತಿಕ್ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಡೆ ತಿರುಗುವಂತೆ ಮಾಡಿದರು. ದಿನೇಶ್ ಕಾರ್ತಿಕ್ ಇದೊಂದೇ ಓವರ್ನಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸಿದ ಪರಿಣಾಮ ರಾಜಸ್ಥಾನ್ ರಾಯಲ್ಸ್ ಪಂದ್ಯದ ಮೇಲೆ ಹಿಡಿತ ಕಳೆದುಕೊಂಡಿತು. ಒಂದುವೇಳೆ ಈ ಓವರ್ನಲ್ಲಿ ರವಿಚಂದ್ರನ್ ಅಶ್ವಿನ್ ಇಷ್ಟು ರನ್ ನೀಡದೇ ಇದ್ದಿದ್ದರೆ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಒತ್ತಡಕ್ಕೆ ಸಿಲುಕಿ ಹಾಕಿಕೊಳ್ಳುತ್ತಿದ್ದದ್ದು ಮಾತ್ರ ಖಚಿತ ಎನ್ನಬಹುದು.

ಆರ್ಸಿಬಿ ಮುಂದಿನ ಪಂದ್ಯ
ಸದ್ಯ ಟೂರ್ನಿಯಲ್ಲಿ ಇಲ್ಲಿಯವರೆಗೂ ಒಟ್ಟು 3 ಪಂದ್ಯಗಳನ್ನಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು 2 ಪಂದ್ಯಗಳಲ್ಲಿ ಜಯ ಸಾಧಿಸಿದ್ದು, ಉಳಿದೊಂದು ಪಂದ್ಯದಲ್ಲಿ ಸೋತಿದೆ. ಇನ್ನು ಆರ್ಸಿಬಿ ತನ್ನ ನಾಲ್ಕನೇ ಪಂದ್ಯದಲ್ಲಿ ಏಪ್ರಿಲ್ 9ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಸೆಣಸಾಡಲಿದ್ದು ಈ ಪಂದ್ಯದಲ್ಲಿ ತಂಡದ ಪ್ರಮುಖ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್ ಕಣಕ್ಕಿಳಿಯಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications