
ಮುಂಬೈನ ಡಿ.ವೈ ಪಾಟೀಲ್ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಐಪಿಎಲ್-2022ರ 56ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕೆಕೆಆರ್ 52 ರನ್ಗಳ ಭರ್ಜರಿ ಜಯ ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ಕೆಕೆಆರ್ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 165 ರನ್ ಗಳಿಸಿತು. ನಂತರ ಬ್ಯಾಟಿಂಗ್ ಮಾಡಿದ ಮುಂಬೈ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 166 ರನ್ಗಳಿಗೆ ಆಲೌಟ್ ಆಯಿತು.
17.3 ಓವರ್ಗಳಲ್ಲಿ 113 ರನ್ಗಳಿಗೆ ಆಲೌಟ್ ಆದ ಮುಂಬೈ ಈಗಾಗಲೇ ಪ್ಲೇ ಆಫ್ನಿಂದ ಹೊರಬಿದ್ದ ಮೊದಲ ತಂಡವಾಗಿದೆ. ಆದ್ರೆ ಈ ಗೆಲುವಿನೊಂದಿಗೆ ಕೆಕೆಆರ್ ಇನ್ನೂ ಪ್ಲೇ ಆಫ್ ರೇಸ್ನಲ್ಲಿದೆ. ಆದಾಗ್ಯೂ, ಪ್ಲೇಆಫ್ ರೇಸ್ನಲ್ಲಿ ಈಗಾಗಲೇ ಮುಂದಿರುವ ತಂಡಗಳನ್ನು ಮೀರಿ ಪ್ಲೇ ಆಫ್ ತಲುಪುವುದು ಕೆಕೆಆರ್ಗೆ ಸುಲಭವಲ್ಲ. ಇತರ ತಂಡಗಳ ಗೆಲುವುಗಳು ಕೆಕೆಆರ್ ಪ್ಲೇ ಆಫ್ ರೇಸ್ ಮೇಲೆ ಗಂಭೀರವಾಗಿ ಪರಿಣಾಮ ಬೀರುತ್ತವೆ.
ಇನ್ನುಳಿದ ಎರಡು ಪಂದ್ಯಗಳಲ್ಲಿ ಒಂದನ್ನು ಸೋತರೂ ಕೆಕೆಆರ್ ಅಧಿಕೃತವಾಗಿ ಪ್ಲೇಆಫ್ ನಿಂದ ಹೊರಬೀಳಲಿದೆ. ನಿನ್ನೆಯ ಪಂದ್ಯದ ಬಳಿಕ ನಾಯಕ ಶ್ರೇಯಸ್ ಅಯ್ಯರ್ , ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ಐದು ಬದಲಾವಣೆಯೊಂದಿಗೆ ಕಣಕ್ಕಿಳಿದಿದ್ದ ಕೆಕೆಆರ್ ತಂಡವನ್ನ ನಿಜವಾಗಿಯೂ ಅಂತಿಮವಾಗಿ ಹೇಗೆ ಆಯ್ಕೆ ಮಾಡಲಾಗುತ್ತಿದೆ ಎಂದು ಕಾಮೆಂಟೇಟರ್ ಮುರಳಿ ಕಾರ್ತಿಕ್ ಕೇಳಿದ ಪ್ರಶ್ನೆಗೆ ಶ್ರೇಯಸ್ ಸ್ಫೋಟಕ ಉತ್ತರ ನೀಡಿದರು.
''ತಂಡವನ್ನು ಆಯ್ಕೆ ಮಾಡುವುದು ತುಂಬಾ ಕಠಿಣ ವಿಷಯವಾಗಿದೆ ಮತ್ತು ನಮ್ಮ ಫ್ರಾಂಚೈಸಿ ಸಿಇಒ ಕೂಡ ತಂಡದ ಆಯ್ಕೆಯಲ್ಲಿ ಹಸ್ತಕ್ಷೇಪ ಮಾಡುತ್ತಾರೆ'' ಎಂದು ಶ್ರೇಯಸ್ ಅಯ್ಯರ್ ಹೇಳಿದರು. ಅಯ್ಯರ್ ಹೀಗೆ ಹೇಳಿದ್ದೇ ತಡ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಈ ವಿಚಾರವಾಗಿ ಚರ್ಚೆ ಶುರು ಮಾಡಿದ್ದಾರೆ.
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಕೆಕೆಆರ್ ತಂಡದಲ್ಲಿ 5 ಬದಲಾವಣೆ ಮಾಡಲಾಗಿತ್ತು. ಅಜಿಂಕ್ಯ ರಹಾನೆ, ಪ್ಯಾಟ್ ಕಮಿನ್ಸ್, ವೆಂಕಟೇಶ್ ಅಯ್ಯರ್, ವರುಣ್ ಚಕ್ರವರ್ತಿ ಮತ್ತು ಶೆಲ್ಡನ್ ಜಾಕ್ಸನ್ ತಂಡದಲ್ಲಿದ್ದಾರೆ. ಇಷ್ಟೆಲ್ಲ ಬದಲಾವಣೆಗಳೊಂದಿಗೆ ಕೆಕೆಆರ್ ಕಣಕ್ಕೆ ಇಳಿದಿರುವುದು ಅಚ್ಚರಿ ಮೂಡಿಸಿದೆ. ಪಂದ್ಯವನ್ನು ಗೆದ್ದ ನಂತರ, ಮುರಳಿ ಕಾರ್ತಿಕ್ ನಾಯಕ ಶ್ರೇಯಸ್ ಅಯ್ಯರ್ ಅವರ ಅಭಿಪ್ರಾಯಗಳನ್ನು ತಿಳಿದುಕೊಂಡರು ಮತ್ತು ಅಂತಿಮ ತಂಡದಲ್ಲಿ ಹೇಗೆ ಆಟಗಾರರು ಹೊರಗುಳಿಯುತ್ತಾರೆ ಎಂದು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಶ್ರೇಯಸ್ ಅಯ್ಯರ್, ಅಂತಿಮ ತಂಡದ ಸಂಯೋಜನೆ ಸುಲಭವಲ್ಲ ಎಂದು ಒಪ್ಪಿಕೊಂಡಿದ್ದಾರೆ. ಒಂದು ಹಂತದಲ್ಲಿ ಫ್ರಾಂಚೈಸಿ ಸಿಇಒ ವೆಂಕಿ ಮೈಸೂರು ಕೂಡ ತಂಡದ ಆಯ್ಕೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಅವರು ಬಹಿರಂಗಪಡಿಸಿದರು.
ಆದ್ರೆ ಈ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ತಂಡದ ಸೆಲೆಕ್ಷನ್ನಲ್ಲಿ ಸಿಇಒಗೆ ಏನು ಕೆಲಸ ಎಂದು ಪ್ರಶ್ನಿಸಿದ್ದಾರೆ.