
ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಇದೇ ತಿಂಗಳ 26ರಂದು ನಡೆಯಲಿರುವ ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವಿನ ಉದ್ಘಾಟನಾ ಪಂದ್ಯದ ಮೂಲಕ ಆರಂಭವಾಗಲಿದೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಚೊಚ್ಚಲ ಪಂದ್ಯ ಮಾರ್ಚ್ 27ರಂದು ಪಂಜಾಬ್ ಕಿಂಗ್ಸ್ ವಿರುದ್ಧ ನಡೆಯಲಿದ್ದು ಲೀಗ್ ಹಂತದಲ್ಲಿ ಒಟ್ಟು 14 ಪಂದ್ಯಗಳಲ್ಲಿ ಸೆಣಸಾಡಲಿದೆ. ಇನ್ನು ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಅಭಿಮಾನಿಗಳು ಟೂರ್ನಿ ಆರಂಭವಾಗುವುದಕ್ಕೂ ಮುನ್ನವೇ ವಿಭಿನ್ನವಾಗಿ ಶುಭ ಕೋರಲು ಆರಂಭಿಸಿದ್ದಾರೆ.
ನಿಮಗೇ ತಿಳಿದಿರುವ ಹಾಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇರುವಷ್ಟು ಪಕ್ಕಾ ಅಭಿಮಾನಿಗಳು ಇತರೆ ಯಾವುದೇ ಫ್ರಾಂಚೈಸಿ ಕ್ರಿಕೆಟ್ ಲೀಗ್ ತಂಡಕ್ಕೂ ಕೂಡ ಇಲ್ಲ. ಹೀಗಾಗಿಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ತಮ್ಮ ನೆಚ್ಚಿನ ತಂಡ ಗೆಲ್ಲಬೇಕೆಂಬ ಆಸೆಯಿಂದ ಹಲವಾರು ದೇವರುಗಳ ಬಳಿ ಅರ್ಚನೆ, ವಿಶೇಷ ಪೂಜೆ, ಅಭಿಷೇಕ ಮತ್ತು ರಥೋತ್ಸವಕ್ಕೆ ಇಷ್ಟಾರ್ಥಗಳನ್ನು ನೆರವೇರಿಸುವಂತೆ ಕೋರಿ ಬಾಳೆಹಣ್ಣನ್ನು ಎಸೆಯುತ್ತಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳ ಈ ರೀತಿಯ ಕೋರಿಕೆಗಳನ್ನು ನೀವು ಈ ಹಿಂದಿನ ಕೆಲ ಐಪಿಎಲ್ ಆವೃತ್ತಿಗಳಲ್ಲಿಯೂ ಕೂಡ ವೀಕ್ಷಿಸಿರುತ್ತೀರಿ. ಅದರಂತೆ ಈ ಬಾರಿಯೂ ಕೂಡ ಟೂರ್ನಿ ಆರಂಭವಾಗುವುದಕ್ಕೂ ಮುನ್ನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಕ್ರೇಜ್ ಆರಂಭವಾಗಿದ್ದು ಬಳ್ಳಾರಿಯ ಅಭಿಮಾನಿಯೋರ್ವ ಅಲ್ಲಿನ ರಥೋತ್ಸವದಲ್ಲಿ ಬಾಳೆಹಣ್ಣಿನ ಮೇಲೆ "ಈ ಸಲ ಕಪ್ ನಮ್ದೇ RCB" ಎಂದು ಬರೆದು ರಥಕ್ಕೆ ಎಸೆಯುವ ಮೂಲಕ ತನ್ನ ಈ ಆಸೆಯನ್ನು ಪೂರೈಸುವಂತೆ ದೇವರ ಬಳಿ ಪ್ರಾರ್ಥಿಸಿಕೊಂಡಿದ್ದಾನೆ.
ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬಳ್ಳಾರಿಯ ಈ ಅಭಿಮಾನಿಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತಮ್ಮ ನೆಚ್ಚಿನ ತಂಡ ಗೆಲ್ಲಬೇಕೆಂಬ ಉದ್ದೇಶದಿಂದ ದೇವರಲ್ಲಿ ಪ್ರಾರ್ಥಿಸುವ ಅಭಿಮಾನಿಗಳು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೊರತುಪಡಿಸಿ ಬೇರೆ ಯಾವುದೇ ಫ್ರಾಂಚೈಸಿ ತಂಡಕ್ಕೂ ಕೂಡ ಇಲ್ಲ ಎಂಬ ಅಭಿಪ್ರಾಯಗಳನ್ನು ನೆಟ್ಟಿಗರು ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ನೂತನ ನಾಯಕ ಫಾಫ್ ಡು ಪ್ಲೆಸಿಸ್ ಮುನ್ನಡೆಸಲಿದ್ದು, ವಿಭಿನ್ನ ಆಟಗಾರರೊಂದಿಗೆ ಕಣಕ್ಕಿಳಿಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಪ್ ಗೆಲ್ಲಬಹುದಾದ ರೇಸ್ನಲ್ಲಿರುವ ತಂಡಗಳಲ್ಲೊಂದಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಕ್ವಾಡ್: ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್, ಮೊಹಮ್ಮದ್ ಸಿರಾಜ್, ಫಾಫ್ ಡು ಪ್ಲೆಸಿಸ್ ( ನಾಯಕ ), ಹರ್ಷಲ್ ಪಟೇಲ್, ವನಿಂದು ಹಸರಂಗಾ, ದಿನೇಶ್ ಕಾರ್ತಿಕ್, ಜೋಶ್ ಹೇಜಲ್ವುಡ್, ಶಹಬಾಜ್ ಅಹ್ಮದ್, ಅನುಜ್ ರಾವತ್, ಆಕಾಶ್ ದೀಪ್, ಮಹಿಪಾಲ್ ಲೊಮ್ರೋರ್, ಫಿನ್ ಅಲೆನ್, ಶೆರ್ಫಾನ್ ರುದರ್ ಫೋರ್ಡ್, ಜೇಸನ್ ಬೆಹ್ರಾಯ್, ಜೇಸನ್ ಬೆಹ್ರಾಯ್ ಮಿಲಿಂದ್, ಅನೀಶ್ವರ್ ಗೌತಮ್, ಕರ್ಣ್ ಶರ್ಮಾ, ಡೇವಿಡ್ ವಿಲ್ಲಿ, ಲುವ್ನಿತ್ ಸಿಸೋಡಿಯಾ, ಸಿದ್ಧಾರ್ಥ್ ಕೌಲ್