
ಐಪಿಎಲ್ 15ನೇ ಆವೃತ್ತಿಯ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು ಇನ್ನು ಕೇವಲ 11 ದಿನಗಳು ಮಾತ್ರವೇ ಬಾಕಿಯಿದೆ. ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿ ಕೂಡ ಈಗಾಗಲೇ ಅಂತ್ಯವಾಗಿರುವ ಕಾರಣ ಟೀಮ್ ಇಂಡಿಯಾ ಸ್ಕ್ವಾಡ್ನಲ್ಲಿದ್ದ ಎಲ್ಲಾ ಆಟಗಾರರು ಕೂಡ ತಮ್ಮ ತಮ್ಮ ತಂಡಗಳ ಬಯೋಬಲ್ಗೆ ಸೇರ್ಪಡೆಯಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಈ ಬಾರಿಯ ಐಪಿಎಲ್ನ 2ನೇ ಪಂದ್ಯದ ಮೂಲಕ ಅಭಿಯಾನ ಆರಂಭಿಸಲಿರುವ ಮುಂಬೈ ಇಂಡಿಯನ್ಸ್ ತಂಡಕ್ಕೆ ಹಿನ್ನಡೆಯಾಗುವ ಸಾಧ್ಯತೆಯಿದೆ.
ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಆಟಗಾರ, ಈ ಬಾರಿಯ ಮೆಗಾ ಹರಾಜು ಪ್ರಕ್ರಿಯೆಗೂ ಮುನ್ನವೇ ರೀಟೈನ್ ಮಾಡಿಕೊಂಡಿದ್ದ ಸೂರ್ಯಕುಮಾರ್ ಯಾದವ್ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯುವ ಸಂಭವ ಇಲ್ಲ ಎನ್ನಲಾಗುತ್ತಿದೆ. ಶ್ರೀಲಂಕಾ ವಿರುದ್ಧದ ಟಿ20 ಸರಣಿ ಹಾಗೂ ಟೆಸ್ಟ್ ಸರಣಿಯಿಂದ ಗಾಯದ ಕಾರಣ ಹೊರಬಿದ್ದಿದ್ದ ಸೂರ್ಯಕುಮಾರ್ ಯಾದವ್ ಇನ್ನು ಕೂಡ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಶ್ರೀಲಂಕಾ ವಿರುದ್ಧದ ಟಿ20 ಸರಣಿಗೂ ಮುನ್ನ ಸೂರ್ಯಕುಮಾರ್ ಯಾದವ್ ಕೈ ಬೆರಳಿನ ಮೂಳೆಗೆ ಕೂದಲೆಳೆ ಪ್ರಮಾಣದ ಫ್ರಾಕ್ಚರ್ ಉಂಟಾಗಿತ್ತು.
ಸದ್ಯ ಬೆಂಗಳೂರಿನ ನ್ಯಾಶನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಸೂರ್ಯಕುಮಾರ್ ಯಾದವ್ ರಿಹ್ಯಾಬಿಲಿಟೇಶನ್ನಲ್ಲಿ ಭಾಗಿಯಾಗಿದ್ದು ಐಪಿಎಲ್ ಟೂರ್ನಿಗೆ ಸಿದ್ಧವಾಗುತ್ತಿದ್ದಾರೆ. ಶ್ರೀಲಂಕಾ ವಿರುದ್ಧದ ಸರಣಿಗೂ ಮುನ್ನ ವೆಸ್ಟ್ ಇಂಡೀಸ್ ವಿರುದ್ಧ ತವರಿನಲ್ಲಿ ನಡೆದಿದ್ದ ಸರಣಿಯಲ್ಲಿ ಭಾಗಿಯಾಗಿದ್ದ ಸೂರ್ಯಕುಮಾರ್ ಯಾದವ್ ಅದ್ಭುತ ಫಾರ್ಮ್ ಪ್ರದರ್ಶಿಸಿದ್ದರು.
ಹರಾಜು ಒ್
ಇನ್ನು ಸೂರ್ಯಕುಮಾರ್ ಯಾದವ್ ಗಾಯದ ವಿಚಾರವಾಗಿ ಮುಂಬೈ ಇಂಡಿಯನ್ಸ್ ಗಂಭೀರವಾಗಿದ್ದು ಆತುರದ ನಿರ್ಧಾರ ತೆಗೆದುಕೊಳ್ಳದಿರಲು ನಿರ್ಧರಿಸಿದೆ. ಹೀಗಾಗಿ ಸಂಪೂರ್ಣ ಚೇತರಿಕೆಗೆ ಕಾಲಾವಕಾಶ ನೀಡಿದ್ದು ಪೂರ್ಣ ಪ್ರಮಾಣದಲ್ಲಿ ಆಡಲು ಸಿದ್ಧರಾದ ಬಳಿಕವೇ ಕಣಕ್ಕಿಳಿಸುವ ನಿರ್ಧಾರ ತೆಗೆದುಕೊಂಡಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮುಂಬೈ ಇಂಡಿಯನ್ಸ್ 27ನೇ ತಾರೀಕಿನಂದು ತನ್ನ ಮೊದಲ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಲಿದ್ದು ಅದಾದ ಬಳಿಕ ಎರಡನೇ ಪಂದ್ಯಕ್ಕೆ ಐದು ದಿನಗಳ ವಿರಾಮವನ್ನು ಹೊಂದಿದೆ. ಎರಡನೇ ಪಂದ್ಯ ಏಪ್ರಿಲ್ 2ನೇ ತಾರೀಕು ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡಲಿದೆ. ಈ ಸಂದರ್ಭದಲ್ಲಿ ಸೂರ್ಯಕುಮಾರ್ ಯಾದವ್ ಪೂರ್ಣಪ್ರಮಾಣದಲ್ಲಿ ಆಡಲು ಸಿದ್ಧರಾಗುವ ನಿರೀಕ್ಷೆಯಿದೆ.
ಈ ಬಾರಿಯ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆಗೂ ಮುನ್ನ ರೀಟೈನ್ ಪ್ರಕ್ರಿಯೆಯಲ್ಲಿ ಮುಂಬೈ ಇಂಡಿಯನ್ಸ್ ನಾಲ್ವರು ಆಟಗಾರರನ್ನು ರೀಟೈಮ್ ಮಾಡಿಕೊಂಡಿತ್ತು. ಈ ನಾಲ್ವರಲ್ಲಿ ಸೂರ್ಯಕುಮಾರ್ ಯಾದವ್ ಕೂಡ ಒಬ್ಬರಾಗಿದ್ದಾರೆ. ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರವಾಗಿ ಸತತವಾಗಿ ಅದ್ಭುತ ಪ್ರದರ್ಶನ ನೀಡಿಕೊಂಡು ಬಂದಿರುವ ಸೂರ್ಯಕುಮಾರ್ ಯಾದವ್ ಐಪಿಎಲ್ 2022ರ ಆವೃತ್ತಿಯಲ್ಲಿಯೂ ರೋಹಿತ್ ಶರ್ಮಾ ನೇತೃತ್ವ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಆಟಗಾರನಾಗಿದ್ದಾರೆ.
ಮುಂಬೈ ಇಂಡಿಯನ್ಸ್ ಬಯೋಬಬಲ್ಗೆ ಸೇರ್ಪಡೆಯಾದ ರೋಹಿತ್, ಬೂಮ್ರಾ: ಇನ್ನು ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿ ಮುಕ್ತಾಯವಾದ ಕಾರಣ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಹಾಗೂ ಜಸ್ಪ್ರೀತ್ ಬೂಮ್ರಾ ತಂಡದ ಬಯೋಬಬಲ್ಗೆ ಸೇರ್ಪಡೆಯಾಗಿದ್ದಾರೆ. ನಾಯಕ ರೋಹಿತ್ ಶರ್ಮಾ ತಮ್ಮ ಪತ್ನಿ ರಿತಿಕಾ ಹಾಗೂ ಮಗಳು ಸಮೈರಾ ಜೊತೆಗೆ ಮುಂಬೈ ಇಂಡಿಯನ್ಸ್ ತಂಡದ ಹೋಟೆಲ್ಗೆ ಆಗಮಿಸಿದ್ದಾರೆ.
ರಾಷ್ಟ್ರೀಯ ತಂಡದ ಪರವಾಗಿ ಆಡುತ್ತಿದ್ದ ಆಟಗಾರರಿಗೆ ಬಯೋಬಬಲ್ನಿಂದ ಬಯೋಬಬಲ್ಗೆ ಸೇರ್ಪಡೆಯಾಗುವ ಕಾರಣ ಯಾವುದೇ ಕ್ವಾರಂಟೈನ್ನ ಅಗತ್ಯವಿರುವುದಿಲ್ಲ. ಇತರ ಆಟಗಾರರು ಮೂರು ದಿನಗಳ ಕಠಿಣ ಕ್ವಾರಂಟೈನ್ ಪೂರೈಸಿದ ಬಳಿಕ ಕೊರೊನಾವೈರಸ್ ನೆಗೆಟಿವ್ ವರದಿಯೊಂದಿಗೆ ನಾಲ್ಕನೇ ದಿನ ಬಯೋಬಬಲ್ಗೆ ಸೇರಿಕೊಳ್ಳಬೇಕಿದೆ.