ಅಂಪೈರ್ ನೋಬಾಲ್ ನೀಡಲಿಲ್ಲ ಎಂದು ಪಂದ್ಯದ ವೇಳೆಯೇ ಮೈದಾನಕ್ಕೆ ನುಗ್ಗಿದ ಪ್ರವೀಣ್ ಆಮ್ರೆ ಯಾರು?

ಸದ್ಯ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅಂಪೈರ್ ತೀರ್ಪಿನ ಕುರಿತ ವಿವಾದಗಳು ತುಸು ಹೆಚ್ಚೇ ಇವೆ. ವಿರಾಟ್ ಕೊಹ್ಲಿ ಔಟ್ ತೀರ್ಪು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ರಾಬಿನ್ ಉತ್ತಪ್ಪ ನಾಟ್ಔಟ್ ತೀರ್ಪುಗಳು ಸಾಕಷ್ಟು ದೊಡ್ಡ ಮಟ್ಟದಲ್ಲಿಯೇ ವಿವಾದವನ್ನು ಹುಟ್ಟುಹಾಕಿದ್ದವು. ಹೀಗೆ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅಂಪೈರ್ಗಳು ನೀಡಿದ ವಿವಾದಾತ್ಮಕ ತೀರ್ಪುಗಳ ಸಾಲಿಗೆ ಇತ್ತೀಚೆಗಷ್ಟೆ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಪಂದ್ಯದ ಒಂದು ತೀರ್ಪು ಸಹ ಸೇರ್ಪಡೆಗೊಂಡಿದೆ.
ಹೌದು, ಏಪ್ರಿಲ್ 22ರ ಶುಕ್ರವಾರದಂದು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ಜೋಸ್ ಬಟ್ಲರ್ ಅವರ ಅಮೋಘ ಶತಕದ ನೆರವಿನಿಂದ 20 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 222 ರನ್ ಕಲೆಹಾಕಿ ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 223 ರನ್ಗಳ ಬೃಹತ್ ಗುರಿಯನ್ನು ನೀಡಿತು. ಈ ಬೃಹತ್ ಗುರಿಯನ್ನು ಬೆನ್ನತ್ತಲು ಮುಂದಾದ ಡೆಲ್ಲಿ ಕ್ಯಾಪಿಟಲ್ಸ್ 19 ಓವರ್ಗಳಿಗೆ 7 ವಿಕೆಟ್ ಕಳೆದುಕೊಂಡು 187 ರನ್ ಕಲೆಹಾಕಿ ಗೆಲ್ಲಲು ಅಂತಿಮ 6 ಎಸೆತಗಳಲ್ಲಿ 36 ರನ್ ಕಲೆ ಹಾಕಬೇಕಾಗಿತ್ತು.
ಈ ಸಂದರ್ಭದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರ ರೋವ್ಮನ್ ಪೊವೆಲ್ ಕಣದಲ್ಲಿದ್ದರು ಹಾಗೂ ಅಂತಿಮ ಓವರ್ ಬೌಲಿಂಗ್ ಮಾಡಲು ಒಬೆಡ್ ಮೆಕ್ಕಾಯ್ ಕಣಕ್ಕಿಳಿದರು. ಹೀಗೆ ಒಬೆಡ್ ಮೆಕ್ಕಾಯ್ ಎಸೆದ ಮೊದಲ ಮೂರೂ ಎಸೆತಗಳಿಗೂ ಸಿಕ್ಸರ್ ಬಾರಿಸಿದ ರೋವ್ಮನ್ ಪೊವೆಲ್ ಗೆಲುವಿನ ಭರವಸೆ ಹುಟ್ಟುಹಾಕಿದ್ದರು. ಇನ್ನು ಒಬೆಡ್ ಮೆಕ್ಕಾಯ್ ಎಸೆದ ಮೂರನೇ ಎಸೆತ ಬ್ಯಾಟ್ಸ್ಮನ್ ಸೊಂಟಕ್ಕಿಂತ ಮೇಲೆ ಫುಲ್ ಟಾಸ್ ಆಗಿದ್ದ ಕಾರಣ ಈ ಎಸೆತ ನೋ ಬಾಲ್ ಎಂದು ಡೆಲ್ಲಿ ಕ್ಯಾಪಿಟಲ್ಸ್ ಪಾಳಯ ಅಂಪೈರ್ ತೀರ್ಪನ್ನು ವಿರೋಧಿಸಿತು ಹಾಗೂ ಇದನ್ನು ಮೂರನೇ ಅಂಪೈರ್ಗೆ ವರ್ಗಾಯಿಸುವಂತೆ ಬೇಡಿಕೆ ಇಟ್ಟರು. ಆದರೆ, ಮೂರನೇ ಅಂಪೈರ್ಗೆ ವರ್ಗಾಯಿಸಲು ನಿರಾಕರಿಸಿದ ಅಂಪೈರ್ ಇದು ನೋ ಬಾಲ್ ಅಲ್ಲ ಎಂದು ಪಂದ್ಯವನ್ನು ಮುಂದುವರೆಸಲು ಮುಂದಾದರು. ಈ ಸಂದರ್ಭದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರವೀಣ್ ಆಮ್ರೆ ಮೈದಾನಕ್ಕೆ ನುಗ್ಗಿ ವಿವಾದ ಸೃಷ್ಟಿಸಿದ ಘಟನೆ ನಡೆದಿದ್ದು, ಈ ಕುರಿತಾದ ವಿವರ ಈ ಕೆಳಕಂಡಂತಿದೆ..

ಮೈದಾನಕ್ಕೆ ನುಗ್ಗಿ ವಿವಾದ ಹುಟ್ಟುಹಾಕಿದ ಪ್ರವೀಣ್ ಆಮ್ರೆ
ಅಂಪೈರ್ ನೋಬಾಲ್ ತೀರ್ಪು ನೀಡಲು ನಿರಾಕರಿಸಿದ ಕೂಡಲೇ ಕೋಪಗೊಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ತಮ್ಮ ತಂಡದ ಸಹಾಯಕ ತರಬೇತುದಾರ ಪ್ರವೀಣ್ ಆಮ್ರೆ ಅವರನ್ನು ಅಂಪೈರ್ಗಳ ಜತೆ ಚರ್ಚಿಸಲು ಕಳುಸಿದ್ದರು. ಹೀಗೆ ಏಕಾಏಕಿ ಮೈದಾನಕ್ಕೆ ಧಾವಿಸಿದ ಪ್ರವೀಣ್ ಆಮ್ರೆ ಈ ಗೊಂದಲದ ತೀರ್ಪನ್ನು ಮೂರನೇ ಅಂಪೈರ್ಗೆ ವರ್ಗಾಯಿಸಬೇಕೆಂದು ಅಂಪೈರ್ಗಳ ಬಳಿ ಮನವಿ ಮಾಡಿಕೊಂಡರು. ಆದರೆ, ಈ ಮನವಿಗೆ ಸೊಪ್ಪುಹಾಕದ ಅಂಪೈರ್ಗಳು ತಮ್ಮ ನಿರ್ಧಾರವನ್ನು ಬದಲಾಯಿಸದೇ ಉಳಿದರು.

ಪ್ರವೀಣ್ ಆಮ್ರೆ ಪರಿಚಯ
ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ನೋಬಾಲ್ಗಾಗಿ ಮೈದಾನಕ್ಕೆ ನುಗ್ಗಿದ ಪ್ರವೀಣ್ ಆಮ್ರೆ ಪೂರ್ತಿ ಹೆಸರು ಪ್ರವೀಣ್ ಕಲ್ಯಾಣ್ ಆಮ್ರೆ. ಇವರು 1991ರಿಂದ 1999ರವರೆಗೆ ಟೀಮ್ ಇಂಡಿಯಾ ಪರ 11 ಟೆಸ್ಟ್ ಮತ್ತು 37 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದ ಅನುಭವವನ್ನು ಹೊಂದಿದ್ದಾರೆ. ಇನ್ನು ಸಚಿನ್ ತೆಂಡೂಲ್ಕರ್ ಮತ್ತು ವಿನೋದ್ ಕಾಂಬ್ಳಿಯಂತಹ ಆಟಗಾರರಿಗೆ ತರಬೇತಿಯನ್ನು ನೀಡಿದ್ದ ರಮಾಕಾಂತ್ ಅರ್ಚೇಕರ್ ಅವರಿಂದ ತರಬೇತಿಯನ್ನು ಪಡೆದಿದ್ದ ಪ್ರವೀಣ್ ಆಮ್ರೆ ಕ್ರಿಕೆಟ್ನಿಂದ ನಿವೃತ್ತಿಯನ್ನು ಪಡೆದ ನಂತರ ಕೋಚ್ ಆಗಿ ಕೆಲಸ ಆರಂಭಿಸಿದರು. 2012ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಅಂಡರ್ 19 ತಂಡವನ್ನು ಪ್ರವೀಣ್ ಆಮ್ರೆ ಕೋಚ್ ಆಗಿ ಟ್ರೋಫಿ ಗೆಲ್ಲಿಸಿದ್ದರು. ಇನ್ನು ಈ ಹಿಂದೆ ಪುಣೆ ವಾರಿಯರ್ಸ್ ತಂಡಕ್ಕೆ ಸಹಾಯಕ ಕೋಚ್ ಆಗಿ ಕೆಲಸ ನಿರ್ವಹಿಸಿದ್ದ ಪ್ರವೀಣ್ ಆಮ್ರೆ ಈ ಬಾರಿಯ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹಾಯಕ ಕೋಚ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಪಂದ್ಯ ನಿಲ್ಲಿಸಲು ಮುಂದಾಗಿದ್ದ ರಿಷಭ್ ಪಂತ್
ಪ್ರವೀಣ್ ಆಮ್ರೆ ಮೈದಾನಕ್ಕೆ ನುಗ್ಗಿ ಅಂಪೈರ್ಗಳ ಜತೆ ಚರ್ಚೆಗೆ ಮುಂದಾದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಅಂಪೈರ್ ನೋಬಾಲ್ ನೀಡಲು ನಿರಾಕರಿಸಿದಾಗ ಕಣದಲ್ಲಿದ್ದ ತಮ್ಮ ತಂಡದ ಆಟಗಾರರನ್ನು ಡಗ್ಔಟ್ಗೆ ವಾಪಸ್ ಆಗುವಂತೆ ಕೈಸನ್ನೆ ಮೂಲಕ ತಿಳಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications