
ಐಪಿಎಲ್ 2021ರ ಯಶಸ್ವಿ ತಂಡಗಳಲ್ಲಿ ಒಂದಾದ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಐಪಿಎಲ್ 15ನೇ ಆವೃತ್ತಿಗಾಗಿ ಪ್ರಮುಖ ನಾಲ್ವರು ಆಟಗಾರರನ್ನ ರೀಟೈನ್ ಮಾಡಿಕೊಂಡಿದ್ದು, ಅಂದುಕೊಂಡಂತೆ ಶ್ರೇಯಸ್ ಅಯ್ಯರ್ ತಂಡದಿಂದ ಹೊರಬಿದ್ದು, ಹರಾಜಿಗೆ ಹೋಗಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ರಿಷಭ್ ಪಂತ್ ಮೊದಲ ಆಯ್ಕೆಯಾಗಿದ್ದು 16 ಕೋಟಿ ರೂಪಾಯಿಗೆ ರೀಟೈನ್ ಆಗಿದ್ದಾರೆ. ಪೃಥ್ವಿ ಶಾ 12 ಕೋಟಿ ರೂಪಾಯಿ, ಅಕ್ಷರ್ ಪಟೇಲ್ 8 ಕೋಟಿ ರೂಪಾಯಿ ಹಾಗೂ ಅನ್ರಿಕ್ ನೊರ್ಕಿಯಾ 6 ಕೋಟಿ ರೂಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್ ಪರ ರೀಟೈನ್ ಆದ ನಾಲ್ವರು ಆಟಗಾರರು.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರಮುಖ ಬೌಲರ್ ಆಗಿದ್ದ ದಕ್ಷಿಣ ಆಫ್ರಿಕಾದ ಕಗಿಸೋ ರಬಾಡರನ್ನ ಡೆಲ್ಲಿ ರೀಟೈನ್ ಮಾಡಿಕೊಳ್ಳದೇ ಇರುವುದು ಆಶ್ಚರ್ಯ ಮೂಡಿಸಿದೆ. ಇನ್ನು ಶ್ರೇಯಸ್ ಅಯ್ಯರ್ ನಾಯಕತ್ವದ ಹಿನ್ನೆಲೆಯಲ್ಲಿ ತಂಡದಿಂದ ಹೊರಬಂದು ಹರಾಜಿಗೆ ಇಳಿದಿದ್ದಾರೆ.
ಅಯ್ಯರ್ ಹೊಸ ತಂಡವನ್ನು ಇಲ್ಲವೇ ಪಂಜಾಬ್ ತಂಡವನ್ನ ಸೇರಿಕೊಂಡ್ರೆ, ತಂಡದ ಮಧ್ಯಮ ಕ್ರಮಾಂಕವನ್ನು ಬಲಪಡಿಸಬಹುದು. ಪಂಜಾಬ್ನ ಬ್ಯಾಟಿಂಗ್ ವಿಭಾಗದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳ ಕೊರತೆಯಿದೆ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಸೇರಿಸುವುದರಿಂದ ಬಲಿಷ್ಠವಾಗಲಿದೆ.
ಭುಜದ ಗಾಯದಿಂದಾಗಿ ಶ್ರೇಯಸ್ ಅಯ್ಯರ್ IPL 2021 ರ ಮೊದಲಾರ್ಧದಲ್ಲಿ ಆಡಲಿಲ್ಲ. ಆದಾಗ್ಯೂ, ಅವರು ಟೂರ್ನಿಯ ಎರಡನೇ ಹಂತದಲ್ಲಿ ಡೆಲ್ಲಿ ಪರ ಆಡಿದರು. 8 ಪಂದ್ಯಗಳಲ್ಲಿ, ಅವರು ಸರಾಸರಿ 35ರಂತೆ ಮತ್ತು 102.33 ಸ್ಟ್ರೈಕ್ ರೇಟ್ನಲ್ಲಿ 175 ರನ್ ಗಳಿಸಿದರು.
ಈಗಾಗಲೇ 8 ಹಳೆಯ ಐಪಿಎಲ್ ಫ್ರಾಂಚೈಸಿಗಳು IPL 2022 ಗಾಗಿ ರೀಟೈನ್ ಆದ ಆಟಗಾರರ ಪಟ್ಟಿಯನ್ನ ಬಿಡುಗಡೆಮಾಡಿವೆ. ಇದರ ನಡುವೆ ಆರ್ಸಿಬಿ ಸೇರಿದಂತೆ ಕೆಲ ತಂಡಗಳಷ್ಟೇ ಹೊಸ ನಾಯಕನ ಹುಡುಕಾಟದಲ್ಲಿವೆ. ಆರ್ಸಿಬಿ ಪರ ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದ ಬಳಿಕ ಕೆ.ಎಲ್ ರಾಹುಲ್ರನ್ನ ಹೇಗಾದ್ರು ಪಡೆಯಬೇಕೆಂಬ ಯೋಜನೆ ಹಾಕಿಕೊಂಡಿವೆ. ಈಗಾಗಲೇ ರಾಹುಲ್ ಲಕ್ನೋ ಫ್ರಾಂಚೈಸಿ ನಾಯಕ ಎಂದೇ ಬಿಂಬಿತವಾಗಿದೆ.
ಇನ್ನು ಡೆಲ್ಲಿ ಕ್ಯಾಪಿಟಲ್ಸ್ ಪರ ಆಡ್ತಿದ್ದ ಶ್ರೇಯಸ್ ಅಯ್ಯರ್ ನಾಯಕತ್ವದ ಸಲುವಾಗಿಯೇ ತಂಡದಿಂದ ಹೊರಬಂದು ಹರಾಜಿಗೆ ಇಳಿದಿದ್ದಾರೆ.