DC vs RR: ನೋಬಾಲ್ ಕೊಡದ ಅಂಪೈರ್ ವಿರುದ್ಧ ಸಿಟ್ಟಿಗೆದ್ದು ಪಂದ್ಯ ನಿಲ್ಲಿಸಲು ಮುಂದಾದ ಪಂತ್!

ಪ್ರಸ್ತುತ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 34ನೇ ಪಂದ್ಯ ಏಪ್ರಿಲ್ 22ರ ಶುಕ್ರವಾರದಂದು ಸಂಜೆ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವೆ ನಡೆಯಿತು. ಇತ್ತಂಡಗಳ ನಡುವಿನ ಈ ಪಂದ್ಯದಲ್ಲಿ ರನ್ ಹೊಳೆಯೇ ಹರಿದು ಬಂದಿದ್ದು, ಅಂತಿಮವಾಗಿ ರಾಜಸ್ಥಾನ್ ರಾಯಲ್ಸ್ 15 ರನ್ಗಳ ರೋಚಕ ಗೆಲುವನ್ನು ಕಂಡಿತು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ಜೋಸ್ ಬಟ್ಲರ್ ಅವರ ಅಮೋಘ ಶತಕದ ನೆರವಿನಿಂದ 20 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 222 ರನ್ ಕಲೆಹಾಕಿ ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 223 ರನ್ಗಳ ಬೃಹತ್ ಗುರಿಯನ್ನು ನೀಡಿತು. ಈ ಬೃಹತ್ ಗುರಿಯನ್ನು ಬೆನ್ನತ್ತಲು ಮುಂದಾದ ಡೆಲ್ಲಿ ಕ್ಯಾಪಿಟಲ್ಸ್ 19 ಓವರ್ಗಳಿಗೆ 7 ವಿಕೆಟ್ ಕಳೆದುಕೊಂಡು 187 ರನ್ ಕಲೆಹಾಕಿ ಗೆಲ್ಲಲು ಅಂತಿಮ 6 ಎಸೆತಗಳಲ್ಲಿ 36 ರನ್ ಕಲೆ ಹಾಕಬೇಕಾದ ಅನಿವಾರ್ಯತೆಯಲ್ಲಿತ್ತು.
ಈ ಸಂದರ್ಭದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ರೋವ್ಮನ್ ಪೊವೆಲ್ ಮತ್ತು ಕುಲ್ ದೀಪ್ ಯಾದವ್ ಕ್ರೀಸ್ನಲ್ಲಿದ್ದರು. ರಾಜಸ್ಥಾನ್ ರಾಯಲ್ಸ್ ತಂಡದ ಬೌಲರ್ ಒಬೆಡ್ ಮೆಕ್ಕಾಯ್ ಅಂತಿಮ ಓವರ್ ಬೌಲಿಂಗ್ ಮಾಡಲು ಕಣಕ್ಕಿಳಿದರು ಹಾಗೂ ರೋವ್ಮನ್ ಪೊವೆಲ್ ಸ್ಟ್ರೈಕ್ನಲ್ಲಿದ್ದರು. ಹೀಗೆ ಈ ಓವರ್ನ ಮೊದಲ 3 ಎಸೆತಗಳಿಗೂ ಸಿಕ್ಸರ್ ಸಿಡಿಸಿದ ರೋವ್ಮನ್ ಪೊವೆಲ್ ಡೆಲ್ಲಿ ಕ್ಯಾಪಿಟಲ್ಸ್ ಪಾಳಯದಲ್ಲಿ ಜಯದ ನಿರೀಕ್ಷೆಯನ್ನು ಹುಟ್ಟುಹಾಕಿದರು. ಹೀಗೆ ರೋವ್ಮನ್ ಪೊವೆಲ್ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದರೆ, ಈ ಪೈಕಿ ಒಬೆಡ್ ಮೆಕ್ಕಾಯ್ ಎಸೆದ ಮೂರನೇ ಎಸೆತ ಫುಲ್ ಟಾಸ್ ಆಗಿತ್ತು ಹಾಗೂ ಇದು ಸೊಂಟದಿಂದ ತುಸು ಮೇಲ್ಭಾಗದಲ್ಲಿತ್ತು. ಆದರೆ ಈ ಎಸೆತಕ್ಕೆ ಮೈದಾನದಲ್ಲಿದ್ದ ಅಂಪೈರ್ ನೋಬಾಲ್ ಎಂದು ತೀರ್ಪು ನೀಡಲಿಲ್ಲ. ಈ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪಂದ್ಯದ ವೇಳೆ ಈ ಕೆಳಕಂಡಂತೆ ನಡೆದುಕೊಂಡು ವಿವಾದಕ್ಕೆ ಕಾರಣವಾಗಿದೆ.

ಕಣದಲ್ಲಿದ್ದ ಆಟಗಾರರನ್ನು ವಾಪಸ್ ಕರೆದ ಪಂತ್
ಹೀಗೆ ಅಂತಿಮ ಓವರ್ನ ಮೂರನೇ ಎಸೆತವನ್ನು ಅಂಪೈರ್ ನೋಬಾಲ್ ಎಂದು ತೀರ್ಪು ಕೊಡದೇ ಇದ್ದದ್ದನ್ನು ಕಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡ ಡಗ್ ಔಟ್ನಿಂದಲೇ ಅಂಪೈರ್ ತೀರ್ಮಾನದ ವಿರುದ್ಧ ಕಿಡಿಕಾರಿತ್ತು. ಅದರಲ್ಲಿಯೂ ತೀವ್ರ ಸಿಟ್ಟಿಗೆ ಈಡಾಗಿ ತಾಳ್ಮೆ ಕಳೆದುಕೊಂಡ ನಾಯಕ ರಿಷಭ್ ಪಂತ್ ಕಣದಲ್ಲಿದ್ದ ತಮ್ಮ ತಂಡದ ಆಟಗಾರರಾದ ರೋವ್ಮನ್ ಪೊವೆಲ್ ಮತ್ತು ಕುಲ್ದೀಪ್ ಯಾದವ್ರನ್ನು ವಾಪಸ್ ಬರುವಂತೆ ಕೈ ಸನ್ನೆ ಮೂಲಕ ತಿಳಿಸಿದ್ದರು. ಜೊತೆಯಲ್ಲಿಯೇ ಇದ್ದ ಕೋಚ್ ಶೇನ್ ವ್ಯಾಟ್ಸನ್ ಕೂಡ ಅಂಪೈರ್ ತೀರ್ಪಿನ ವಿರುದ್ಧ ಗರಂ ಆಗಿ ಇದೊಂದು ನೋಬಾಲ್ ಎಂದು ಸನ್ನೆ ಮಾಡುತ್ತಿದ್ದರು.

ಪಂದ್ಯದ ವೇಳೆ ಮಧ್ಯಪ್ರವೇಶಿಸಿದ ಕೋಚ್!
ಇನ್ನು ನೋಬಾಲ್ ತೀರ್ಪು ನೀಡಿದ ಅಂಪೈರ್ ವಿರುದ್ಧ ಕಿಡಿಕಾರಿದ ರಿಷಭ್ ಪಂತ್ ತಮ್ಮ ತಂಡದ ಸಹಾಯಕ ಕೋಚ್ ಪ್ರವೀಣ್ ಆಮ್ರೆ ಅವರನ್ನು ಅಂಪೈರ್ ಜೊತೆ ಚರ್ಚಿಸಲು ಮೈದಾನಕ್ಕೆ ಕಳುಹಿಸಿದರು. ಅದರಂತೆ ಮೈದಾನಕ್ಕೆ ನುಗ್ಗಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹಾಯಕ ತರಬೇತುದಾರ ಪ್ರವೀಣ್ ಆಮ್ರೆ ಕೆಲಕಾಲ ಅಂಪೈರ್ ಜತೆ ಚರ್ಚಿಸಿ ತೀರ್ಪನ್ನು ಮೂರನೇ ಅಂಪೈರ್ಗೆ ವರ್ಗಾಯಿಸುವಂತೆ ಮನವಿಯನ್ನು ಮಾಡಿದರು. ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಿಷಭ್ ಪಂತ್ ನಡೆದುಕೊಂಡ ರೀತಿ ವಿವಾದವನ್ನು ಹುಟ್ಟು ಹಾಕುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿದೆ.

ಮುಂದುವರಿದ ಪಂದ್ಯ, ಸೋತ ಡೆಲ್ಲಿ
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಇಷ್ಟೆಲ್ಲಾ ಮನವಿ ಮಾಡಿಕೊಂಡರೂ ಸಹ ಮೂರನೇ ಅಂಪೈರ್ ಮೊರೆ ಹೋಗದ ಲೆಗ್ ಅಂಪೈರ್ ಆ ಎಸೆತವನ್ನು ನ್ಯಾಯಯುತವಾದ ಎಸೆತ ಎಂದು ಪರಿಗಣಿಸಿದರು. ಹಾಗೂ ಮೊದಲ 3 ಎಸೆತಗಳಲ್ಲಿ ಪೊವೆಲ್ ಸಿಕ್ಸರ್ ಬಾರಿಸಿ ಅಬ್ಬರಿಸಿದ್ದ ಕಾರಣ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಗೆಲ್ಲಲು ಅಂತಿಮ 3 ಎಸೆತಗಳಲ್ಲಿಯೂ ಸಿಕ್ಸರ್ ಬಾರಿಸಬೇಕಾದ ಅಗತ್ಯವಿತ್ತು. ಆದರೆ, ಓವರ್ನ ನಾಲ್ಕನೇ ಎಸೆತದಲ್ಲಿ ಯಾವುದೇ ರನ್ ಬಾರಿಸಿದ ಪೊವೆಲ್ ಐದನೇ ಎಸೆತದಲ್ಲಿ 2 ರನ್ ಕಲೆ ಹಾಕಿದರು ಹಾಗೂ ಅಂತಿಮ ಎಸೆತದಲ್ಲಿ ಔಟ್ ಆದರು. ಈ ಮೂಲಕ ನೋಬಾಲ್ ಸಿಕ್ಕಿದ್ದರೆ ಗೆಲ್ಲುವ ಅವಕಾಶವನ್ನು ಹೊಂದಿದ್ದ ಡೆಲ್ಲಿ ಕ್ಯಾಪಿಟಲ್ಸ್ ಬೃಹತ್ ರನ್ ಮೊತ್ತದ ರೋಚಕ ಹಣಾಹಣಿಯಲ್ಲಿ ಸೋಲನ್ನು ಕಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications