ಇಂಡಿಯನ್ ಪ್ರೀಮಿಯರ್ ಲೀಗ್ನ 16ನೇ ಆವೃತ್ತಿಯಲ್ಲಿ ಆರ್ಸಿಬಿ ತಂಡ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದೆ. ಮಹತ್ವದ ಪಂದ್ಯಗಳಲ್ಲಿ ಆರ್ಸಿಬಿ ಸೋಲಕು ಅನುಭವಿಸುತ್ತಿದ್ದು ಪ್ಲೇಆಫ್ ಪ್ರವೇಶ ಕಠಿಣಗೊಳಿಸಿದೆ. ಈ ಸಂದರ್ಭದಲ್ಲಿ ಆರ್ಸಿಬಿ ತಂಡ ಟೂರ್ನಿಯಲ್ಲಿ ವೈಫಲ್ಯತೆ ಕಾಣಲು ಕಾರಣವಾದ ಅಂಶಗಳತ್ತ ಆಕಾಶ್ ಚೋಪ್ರ ಬೊಟ್ಟುಮಾಡಿದ್ದಾರೆ. ಈ ಸಂದರ್ಭದಲ್ಲಿ ಆರ್ಸಿಬಿ ಮ್ಯಾನೇಜ್ಮೆಂಟ್ ಹರಾಜಿನಲ್ಲಿ ಮಾಡಿದ ಕೆಟ್ಟ ನಿರ್ಧಾರಕ್ಕೆ ಕಟು ಟೀಕೆ ಮಾಡಿದ್ದಾರೆ ಆಕಾಶ್ ಚೋಪ್ರ.
ಈ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಪ್ರದರ್ಶಣ ನೀಡಲು ವಿಫಲವಾಗುತ್ತಿದೆ. ಅಗ್ರ ಕ್ರಮಾಂಕದಲ್ಲಿ ಉತ್ತಮ ಪ್ರದರ್ಶನ ನೀಡಿದರೂ ನಂತರದ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಬಾರದಿರುವುದು ತಂಡಕ್ಕೆ ಪದೇ ಪದೇ ಹಿನ್ನಡೆಯುಂಟು ಮಾಡುತ್ತಿದೆ. ಈ ವಿಚಾರವಾಗಿ ಆಕಾಶ್ ಚೋಪ್ರ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಆರ್ಸಿಬಿ ವಿರಾಟ್ ಕೊಹ್ಲಿ ಹೊರತುಪಡಿಸಿ ಭಾರತೀಯ ಬ್ಯಾಟರ್ಗಳ ಮೇಲೆ ಅಗತ್ಯಪ್ರಮಾಣದ ಹೂಡಿಕೆ ಮಾಡದಿರುವುದೇ ಈ ಹಿನ್ನಡೆಗೆ ಕಾರಣ ಎಂದಿದ್ದಾರೆ ಆಕಾಶ್ ಚೋಪ್ರ.

ಭಾರತೀಯ ಆಟಗಾರರ ಮೇಲೆ ಹೆಚ್ಚಿನ ಹೂಡಿಕೆಯನ್ನು ಆರ್ಸಿಬಿ ಮಾಡಿಲ್ಲ ಎಂದು ಆಕಾಶ್ ಚೋಪ್ರ ಹೇಳಿಕೆ ನೀಡಿದ್ದಾರೆ. ಕೇವಲ ವಿರಾಟ್ ಕೊಹ್ಲಿಗೆ ಮಾತ್ರವೇ ಭಾರತೀಯ ಬ್ಯಾಟರ್ಗಳ ಪೈಕಿ ಹೆಚ್ಚಿನ ಹೂಡಿಕೆ ಮಾಡಿದೆ. ಹಾಗಾಗಿ ಆರ್ಸಿಬಿ ಗುಣಮಟ್ಟದ ಭಾರತೀಯ ಬ್ಯಾಟರ್ಗಳನ್ನು ಹೊಂದಿಲ್ಲ. ಇದುವೇ ತಂಡದ ಹಿನ್ನಡೆಗೆ ಕಾರಣವಾಗುತ್ತಿದೆ ಎಂದಿದ್ದಾರೆ.
"ವಿರಾಟ್ ಕೊಹ್ಲಿ ಆರ್ಸಿಬಿ ಪರವಾಗಿ 7000 ರನ್ಗಳನ್ನು ಗಳಿಸಿದೆ. ಆದರೆ ಉಳಿದ ಭಾರತೀಯ ಆಟಗಾರರ ಪೈಕಿ ಒಬ್ಬ ಬ್ಯಾಟರ್ ಕೂಡ 1000 ರನ್ಗಳನ್ನು ಗಳಿಸಿಲ್ಲ. 16 ವರ್ಷಗಳಲ್ಲಿ ವಿರಾಟ್ ಕೊಹ್ಲಿ ಬಿಟ್ಟು ಉಳಿದ ಭಾರತೀಯ ಬ್ಯಾಟರ್ಗಳ ಮೇಲೆ ಉತ್ತಮ ಹೂಡಿಕೆಯನ್ನೇ ಮಾಡಿಲ್ಲ. ನೆನಪಿಡಿ ಅರ್ಧದಷ್ಟು ಪಂದ್ಯಗಳನ್ನು ಆರ್ಸಿಬಿ ತನ್ನ ತವರಿನಲ್ಲಿ ಆಡಬೇಕು" ಎಂದು ಆಕಾಶ್ ಚೋಪ್ರ ಟ್ವೀಟ್ ಮಾಡಿದ್ದಾರೆ.
ಬೌಲಿಂಗ್ನಲ್ಲಿಯೂ ಆರ್ಸಿಬಿಗೆ ದೊಡ್ಡ ಹಿನ್ನಡೆ
ಇನ್ನು ಆರ್ಸಿಬಿ ತಮಡದ ಬೌಲಿಂಗ್ ವಿಭಾಗದ ಪ್ರದರ್ಶನ ಕೂಡ ತಂಡದ ಹಿನ್ನಡೆಗೆ ಕಾರಣವಾಗಿದೆ. ಆರಂಭದಲ್ಲಿ ಆರ್ಸಿಬಿ ಬೌಲಿಂಗ್ ವಿಭಾಗ ಕೆಲ ಅದ್ಭುತ ಪ್ರದರ್ಶನಗಳನ್ನು ನೀಡಿತ್ತು. ಆದರೆ ನಿರ್ಣಾಯಕ ಘಟ್ಟದಲ್ಲಿ ಆರ್ಸಿಬಿ ತಂಡದ ಬೌಲಿಂಗ್ ವಿಭಾಗ ಕೈಕೊಡುತ್ತಿರುವುದು ತಂಡದ ಚಿಂತೆ ಹೆಚ್ಚಿಸಿದೆ. ಮೊಹಮ್ಮದ್ ಸಿರಾಜ್, ಜೋಶ್ ಹೇಜಲ್ವುಡ್, ಹರ್ಷಲ್ ಪಟೇಲ್ ಹಾಗೂ ವನಿಂದು ಹಸರಂಗರಂಥಾ ಬೌಲರ್ಗಳು ಇದ್ದರೂ ಆರ್ಸಿಬಿ ಬೌಲಿಂಗ್ ವಿಭಾಗ ಪರಿಣಾಮಕಾರಿಯಾಗಿಲ್ಲ.
ಆರ್ಸಿಬಿ ಮುಂದಿದೆ ಮೂರು ಪಂದ್ಯಗಳು
ಇನ್ನು ಆರ್ಸಿಬಿ ತಂಡಕ್ಕೆ ಈ ಬಾರಿಯ ಐಪಿಎಲ್ನಲ್ಲಿ ಮೂರು ಪಂದ್ಯಗಳು ಮಾತ್ರವೇ ಬಾಕಿಯಿದೆ. ಟೂರ್ನಿಯಲ್ಲಿ ಆರ್ಸಿಬಿ 11 ಪಂದ್ಯಗಳ ಪೈಕಿ ಆರು ಸೋಲು ಅನುಭವಿಸಿರುವ ಕಾರಣ ಮುಂದಿನ ಮೂರು ಪಂದ್ಯಗಳಲ್ಲಿಯೂ ಆರ್ಸಿಬಿ ತಂಡಕ್ಕೆ ಗೆಲುವು ಅನಿವಾರ್ಯ. ಹೀಗಾಗಿ ಮುಂದಿನ ಪ್ರತಿ ಪಂದ್ಯ ಕೂಡ ಆರ್ಸಿಬಿ ತಂಡಕ್ಕೆ ಅತ್ಯಂತ ನಿರ್ಣಾಯಕವಾಗಿದೆ. ಅಲ್ಲದೆ ಉಳಿದ ಪಂದ್ಯಗಳ ಫಲಿತಾಂಶಗಳು ಕುಡ ಆರ್ಸಿಬಿ ಪ್ಲೇಆಫ್ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.