ಐಪಿಎಲ್ 16ನೇ ಆವೃತ್ತಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಶಕೀಬ್ ಅಲ್ ಹಸನ್ ಬದಲಿಗೆ ಇಂಗ್ಲೆಂಡ್ನ ಆಟಗಾರ ಜೇಸನ್ ರಾಯ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಿದೆ. ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಈ ಒಪ್ಪಂದ ಮಾಡಿಕೊಳ್ಳಲಾಗಿದ್ದು 2.8 ಕೊಟಿ ಮೊತ್ತಕ್ಕೆ ಜೇಸನ್ ರಾಯ್ ಕೆಕೆಆರ್ ಸೇರಿಕೊಂಡಿದ್ದಾರೆ. ಈ ಸೇರ್ಪಡೆಯ ಬಗ್ಗೆ ಆಕಾಶ್ ಚೋಪ್ರ ತಮ್ಮ ವಿಶ್ಲೇಷಣೆ ಮಾಡಿದ್ದು ಕುತೂಹಲಕಾರಿ ವಿಚಾರವನ್ನು ಹಂಚಿಕೊಂಡಿದ್ದಾರೆ.
ಆಕಾಶ್ ಚೋಪ್ರ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಜೇಸನ್ ರಾಯ್ ಸೇರ್ಪಡೆ ಬಗ್ಗೆ ವಿಶ್ಲೇಷಣೆ ಮಾಡಿದ್ದರೆ. ಈ ಸಂದರ್ಭದಲ್ಲಿ ಅವರು ಜೇಸನ್ ರಾಯ್ ಗ್ರಾಫ್ ಸಾಕಷ್ಟು ಏರಿಳಿತಗಳಿಂದ ಕೂಡಿದ್ದು ಅಂತಾರಾಷ್ಟ್ರೀಯ ಕ್ರಿಕೆಟ್ ಹಾಗೂ ಎಸ್ಎ20 ಲೀಗ್ನಲ್ಲಿ ಇತ್ತೀಚೆಗೆ ವ್ಯತಿರಿಕ್ತವಾದ ಪ್ರದರ್ಶನ ನೀಡಿದ್ದಾರೆ ಎಂದಿದ್ದಾರೆ ಆಕಾಶ್ ಚೋಪ್ರ. ಎಸ್ಎ20 ಲೀಗ್ನಲ್ಲಿ ರನ್ಗಳಿಸಲು ಪರದಾಟ ನಡೆಸಿದ್ದ ರಾಯ್ ಇಂಗ್ಲೆಂಡ್ ಪರವಾಗಿ ಬಾಂಗ್ಲಾದೇಶ ತಂಡದ ವಿರುದ್ಧ ನಡೆದ ಟಿ20 ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದರು. ಪಿಎಸ್ಎಲ್ನಲ್ಲಿಯೂ ರಾಯ್ ಪ್ರದರ್ಶನ ಗಮನ ಸೆಳೆಯುವಂತಿತ್ತು.

"ಕೊಲ್ಕತ್ತಾ ಜೇಸನ್ ರಾಯ್ ಅವರನ್ನು ಸೇರಿಸಿಕೊಂಡಿದೆ. ಅವರ ಗ್ರಾಫ್ ಬಹಳ ಏರಿಳಿತಗಳಿಂದ ಕೂಡಿದೆ. ಎಸ್ಎ20ಯಲ್ಲಿ ನೋಡಿದರೆ ಈತ ಒಂದು ರನ್ಗಳಿಸುವುದು ಕೂಡ ಕಷ್ಟ ಎಂಬ ರೀತಿಯಿತ್ತು. ಈತನಿಂದ ಏನೂ ಮಾಡಲು ಸಾಧ್ಯವಿಲ್ಲ ಎಂಬ ಭಾವನೆ ಬರುವಂತಿತ್ತು. ಆದರೆ ಅದಾದ ಬಳಿಕ ಅವರು ಅಂತಾರಾಷ್ಟ್ರೀಯ ಟಿ20ಯಲ್ಲಿ ಶತಕವನ್ನು ಕೂಡ ಬಾರಿಸಿದರು. ಆದರೆ ನಂತರ ಮತ್ತೆ ಅವರು ಫಾರ್ಮ್ ಕಳೆದುಕೊಂಡರು" ಎಂದಿದ್ದಾರೆ ಆಕಾಶ್ ಚೋಪ್ರ.
ಇನ್ನು ಇದೇ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರ ಕೆಕೆಆರ್ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ವಿಚಿತ್ರ ಬ್ಯಾಟಿಂಗ್ ಲೈನಪ್ನೊಂದಿಗೆ ಕಣಕ್ಕಿಳಿದಿತ್ತು ಎಂದು ಉಲ್ಲೇಖಿಸಿದ್ದಾರೆ. ಈ ಪಂದ್ಯವನ್ನು ಕೆಕೆಆರ್ 7 ರನ್ಗಳ ಅಂತರದಿಂದ ಡಿಎಲ್ಎಸ್ ಮೂಲಕ ಸೋಲು ಅನುಭವಿಸಿತ್ತು.
"ಈ ಹಿಂದಿನ ಪಂದ್ಯದಲ್ಲಿ ಕೆಕೆಆರ್ ತಂಡದ ಅರ್ಥ ಮಾಡಿಕೊಳ್ಳಲು ಕಷ್ಟವಾಗುವಂತಾ ನಿರ್ಧಾರ ತೆಗೆದುಕೊಂಡಿತ್ತು. ನಿತೀಶ್ ರಾಣಾ ಕೆಳ ಕ್ರಮಾಣಕದಲ್ಲಿ ಬಂದಿದ್ದು ವೆಂಕಟೇಶ್ ಐಯ್ಯರ್ ನಾಲ್ಕನೇ ಕ್ರಮಾಂಕದಲ್ಲಿ ಆಡಿದ್ದರು. ಆರಂಭಿಕನಾಗಿ ಮಂದೀಪ್ ಸಿಂಗ್ ಕಣಕ್ಕಿಳಿದಿದ್ದರು. ಅನುಕುಲ್ ರಾಯ್ ಕೂಡ ಅಗ್ರ ಕ್ರಮಾಂಕದಲ್ಲಿ ಆಡಿದ್ದರು. ಕಳೆದ ಪಂದ್ಯದಲ್ಲಿ ಆಡಿದ ಈ ಕ್ರಮಾಂಕವನ್ನು ಅರ್ಥ ಮಾಡಿಕೊಳ್ಳುವುದ ಬಹಳ ಕಷ್ಟ" ಎಂದಿದ್ದಾರೆ ಆಕಾಶ್ ಚೋಪ್ರ.
ಕೊಲ್ಕತ್ತಾ ನೈಟ್ ರೈಡರ್ಸ್: ನಿತೀಶ್ ರಾಣಾ (ನಾಯಕ), ವರುಣ್ ಚಕ್ರವರ್ತಿ, ಲಾಕಿ ಫರ್ಗುಸನ್, ರಹಮಾನುಲ್ಲಾ ಗುರ್ಬಾಜ್, ವೆಂಕಟೇಶ್ ಅಯ್ಯರ್, ಸುನಿಲ್ ನರೈನ್, ಹರ್ಷಿತ್ ರಾಣಾ, ಅನುಕುಲ್ ರಾಯ್, ಆಂಡ್ರೆ ರಸೆಲ್, ರಿಂಕು ಸಿಂಗ್, ಟಿಮ್ ಸೌಥಿ, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ವೈಭವ್ ಅರೋರಾ, ಎನ್ ಜಗದೀಸನ್, ಸುಯಶ್ ಶರ್ಮಾ, ಡೇವಿಡ್ ವೈಸ್, ಕುಲ್ವಂತ್ ಖೆಜ್ರೋಲಿಯಾ, ಲಿಟನ್ ದಾಸ್, ಮನ್ದೀಪ್ ಸಿಂಗ್, ಜೇಸನ್ ರಾಯ್, ಶ್ರೇಯಸ್ ಅಯ್ಯರ್ (ಗಾಯಾಳು)