ಮಂಗಳವಾರ (ಮೇ 30) ಬೆಳಗಿನ ಜಾವ ಮುಕ್ತಾಯಗೊಂಡ ಐಪಿಎಲ್ 2023ರ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧದ ಗೆಲುವಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ಐದನೇ ಬಾರಿಗೆ ಪ್ರಶಸ್ತಿ ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಯಿತು.
ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ ತಂಡದ ವಿರುದ್ಧ ಡಿಎಲ್ಎಸ್ ನಿಯಮದ ಪ್ರಕಾರ 5 ವಿಕೆಟ್ಗಳ ರೋಚಕ ಗೆಲುವು ಸಾಧಿಸಿತು.

ಆಲ್ರೌಂಡರ್ ರವೀಂದ್ರ ಜಡೇಜಾ ಕೊನೆಯ ಎರಡು ಎಸೆತಗಳಲ್ಲಿ 10 ರನ್ ಗಳಿಸುವ ಮೂಲಕ ಸಿಎಸ್ಕೆ ತಂಡದ ಗೆಲುವಿಗೆ ಬಹುಮುಖ್ಯ ಪಾತ್ರ ವಹಿಸಿದರು. ಗುಜರಾತ್ ಟೈಟನ್ಸ್ ನೀಡಿದ್ದ 215 ರನ್ಗಳ ಗುರಿಯನ್ನು ಬೆನ್ನತ್ತಿದ ಚೆನ್ನೈ ಮಳೆ ಬಾಧಿತ ಪಂದ್ಯದಲ್ಲಿ ಕೇವಲ 15 ಓವರ್ಗಳಲ್ಲಿ 171 ರನ್ಗಳ ಪರಿಷ್ಕೃತ ಗುರಿಯನ್ನು ಯಶಸ್ವಿಯಾಗಿ ತಲುಪಿತು.
ಇದೇ ವೇಳೆ ಐಪಿಎಲ್ 2023 ಬೌಲರ್ ಆಗಿ ಆಲ್ರೌಂಡರ್ ರವೀಂದ್ರ ಜಡೇಜಾಗೆ ಅದ್ಭುತ ಋತುವಾಗಿದೆ ಎಂದು ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಹೇಳಿದ್ದಾರೆ.

ಅಹಮದಾಬಾದ್ನಲ್ಲಿ ನಡೆದ ಫೈನಲ್ನಲ್ಲಿ ರವೀಂದ್ರ ಜಡೇಜಾ ಚೆನ್ನೈ ಪಾಲಿಗೆ ಹೀರೋ ಆದರು. 34 ವರ್ಷ ವಯಸ್ಸಿನ ಆಲ್ರೌಂಡರ್ ಫೈನಲ್ ಪಂದ್ಯದ ಅಂತಿಮ ಓವರ್ನಲ್ಲಿ ಗೆಲುವಿನ ರನ್ಗಳನ್ನು ಹೊಡೆದು ತಮ್ಮ ತಂಡ ಐದನೇ ಐಪಿಎಲ್ ಪ್ರಶಸ್ತಿ ಗೆಲ್ಲಲು ಸಹಾಯ ಮಾಡಿದರು.
ಐಪಿಎಲ್ನ 2022ರ ಅಭಿಯಾನವು ರವೀಂದ್ರ ಜಡೇಜಾಗೆ ಉತ್ತಮವಾಗಿರಲಿಲ್ಲ. ಏಕೆಂದರೆ ಸಿಎಸ್ಕೆ ತಂಡದ ನಾಯಕತ್ವದ ಅವಧಿಯು ಯೋಜನೆಯ ಪ್ರಕಾರ ನಡೆಯಲಿಲ್ಲ ಮತ್ತು ಗಾಯದಿಂದ ಟೂರ್ನಿಯಿಂದಲೇ ಹೊರಬೀಳಬೇಕಾಯಿತು.

ಆದರೆ, ಐಪಿಎಲ್ 2023 ರವೀಂದ್ರ ಜಡೇಜಾಗೆ ಸಂಪೂರ್ಣವಾಗಿ ವಿಭಿನ್ನವಾಗಿತ್ತು. ಈ ಋತುವಿನಲ್ಲಿ 20 ವಿಕೆಟ್ಗಳನ್ನು ಕಬಳಿಸಿದರು. ಇದು ಐಪಿಎಲ್ನಲ್ಲಿ ಅವರ ಅತ್ಯುತ್ತಮ ದಾಖಲೆಯಾಗಿದೆ. ಸಿಎಸ್ಕೆ ತಂಡದ ಅಗ್ರ ಕ್ರಮಾಂಕವು ಸಾಮಾನ್ಯವಾಗಿ ಉತ್ತಮವಾಗಿ ಆಡಿದ ಕಾರಣ ಬ್ಯಾಟ್ನೊಂದಿಗೆ ಜಡೇಜಾರ ಕೊಡುಗೆ ಸೀಮಿತವಾಗಿತ್ತು.
ಇದನ್ನು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ತಿಳಿಸಿದ್ದು, ಸ್ಪೋರ್ಟ್ಸ್ಕೀಡಾ ಉಲ್ಲೇಖಿಸಿದಂತೆ, ಬೌಲರ್ ಆಗಿ ಇದು ರವೀಂದ್ರ ಜಡೇಜಾಗೆ ಅದ್ಭುತವಾದ ಋತು ಮತ್ತು ಇದು ಅವರ ವರ್ಷ ಎಂದು ಹೇಳಿದ್ದಾರೆ.
"ಜಡ್ಡು ಮ್ಯಾಜಿಕ್ ಮಾಡಿದರು. ಬೌಲರ್ ಆಗಿ ಅದ್ಭುತ ಋತುವಾಯಿತು. ಆದರೆ, ಬ್ಯಾಟರ್ ಆಗಿ ಅಲ್ಲ. ಐಪಿಎಲ್ನಲ್ಲಿ ಕಳೆದ ನಾಲ್ಕೈದು ವರ್ಷಗಳಲ್ಲಿ ಜಡೇಜಾ ಅವರಿಂದ ಇಂತಹ ಪರಿಣಾಮಕಾರಿ ಬೌಲಿಂಗ್ ಅನ್ನು ನೀವು ನೋಡಿರಲಿಲ್ಲ. ಜಡ್ಡು ತುಂಬಾ ಚೆನ್ನಾಗಿ ಮಾಡುವುದನ್ನು ನೀವು ನೋಡಿದ್ದೇವೆ. ಆದರೆ ಕೆಲವು ವರ್ಷಗಳ ಐಪಿಎಲ್ನಲ್ಲಿ ನಾವು ಅವರ ಮಧ್ಯಮ ಪ್ರದರ್ಶನದ ಬಗ್ಗೆ ಮಾತನಾಡುತ್ತಿದ್ದೆವು. ಆದರೆ ಈ ಬಾರಿ ಜಡೇಜಾ ಅವರ ವರ್ಷವಾಗಿದೆ," ಎಂದು ಆಕಾಶ್ ಚೋಪ್ರಾ ತಿಳಿಸಿದ್ದಾರೆ.
ನಾಯಕ ಎಂಎಸ್ ಧೋನಿ ಅವರು ರವೀಂದ್ರ ಜಡೇಜಾ ಅವರಿಂದ ಉತ್ತಮವಾದದ್ದನ್ನು ಪಡೆದಿದ್ದಾರೆ. ಅವರನ್ನು ಎಂದೆಂದಿಗೂ ಅತ್ಯುತ್ತಮ ಆಟಗಾರನನ್ನಾಗಿ ಮಾಡುತ್ತಾರೆ ಎಂಬ ಅಜೆಂಡಾವನ್ನು ಹೊಂದಿದ್ದಾರೆ. ಟೂರ್ನಿಯುದ್ದಕ್ಕೂ ಎಂಎಸ್ ಧೋನಿ ಆ ಬದ್ಧತೆಗೆ ಅಂಟಿಕೊಂಡಿದ್ದರು ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.