
ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಶಾರ್ಟ್ ಲಿಸ್ಟ್ ಮಾಡಿದ್ದು, ಟರ್ಕಿಯ ಇಸ್ತಾನ್ಬುಲ್ ಹಾಗೂ ಬೆಂಗಳೂರನ್ನು ಫೈನಲ್ ಮಾಡಿದೆ.
ಐಪಿಎಲ್ ಹರಾಜು ಪ್ರಕ್ರಿಯೆ ಇದೇ ವರ್ಷ ಡಿಸೆಂಬರ್ನಲ್ಲಿ ನಡೆಸಲು ಬಿಸಿಸಿಐ ಯೋಜಿಸಿದ್ದು, ಎಲ್ಲವೂ ಅಂದುಕೊಂಡಂತೆ ಆದ್ರೆ ಟರ್ಕಿಯ ಇಸ್ತಾನ್ಬುಲ್ ಇಲ್ಲವೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆಟಗಾರರ ಹರಾಜು ನಡೆಯಲಿದೆ. ಆದ್ರೆ ಪ್ರತಿ ಬಾರಿಯಂತೆ ಬೆಂಗಳೂರಿನಲ್ಲಿ ನಡೆಸುವ ಬದಲು ಟರ್ಕಿಯಲ್ಲಿ ಏಕೆ ಎಂಬ ಪ್ರಶ್ನೆ ತಲೆದೂರಿದೆ. ಅದ್ರಲ್ಲೂ ಇಸ್ತಾನ್ಬುಲ್ ಮೊದಲ ಆಯ್ಕೆಯಾಗಿದ್ದು, ಬೆಂಗಳೂರು ಬಿಸಿಸಿಐನ ಎರಡನೇ ಆಯ್ಕೆಯಾಗಿದೆ.
ಬಿಸಿಸಿಐ ಈ ನಿರ್ಧಾರ ಹಿಂದಿನ ಮರ್ಮವೇನು ಎಂಬುದು ಅಭಿಮಾನಿಗಳಿಗೆ ಸದ್ಯ ಅರ್ಥವಾಗದ ಪ್ರಶ್ನೆಯಾಗಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್ ಕೌನ್ಸಿಲ್ ಮತ್ತು ಬಿಸಿಸಿಐ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಐಪಿಎಲ್ ಹರಾಜು ಪ್ರಕ್ರಿಯೆ ಭಾರತದಲ್ಲಿಯೇ ನಡೆಯಬೇಕು. ಭಾರತದ ಯಾವುದೇ ನಗರದಲ್ಲಿ ಬೇಕಾದರೂ ನಡೆಸಬಹುದಲ್ಲವೇ? ಟರ್ಕಿ ಏಕೆ ಎಂದು ನೆಟ್ಟಿಗರು ಬಿಸಿಸಿಐ ನಿರ್ಧಾರ ಪ್ರಶ್ನಿಸಿದ್ದಾರೆ. ದೇಶದ ಹಣವು ದೇಶದಲ್ಲಿಯೇ ಬಳಕೆಯಾಗಬೇಕೆ ಹೊರತು ಹಿಂದೂ ವಿರೋಧಿ ರಾಷ್ಟ್ರ ಟರ್ಕಿಯಲ್ಲಲ್ಲ ಎಂದು ಇನ್ನು ಕೆಲವರು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಕೆಲವರು ಟರ್ಕಿಯಲ್ಲಿ ಐಪಿಎಲ್ ಹರಾಜು ನಡೆಸಲು ಮುಂದಾಗಿರುವ ಬಿಸಿಸಿಐಗೆ ನಾಚಿಕೆಯಾಗಬೇಕು ಎಂದು ಕಿಡಿ ಕಾರಿದ್ದಾರೆ. ಟರ್ಕಿ ಹಿಂದೂ ವಿರೋಧಿ ದೇಶವಾಗಿದ್ದು, ನಮ್ಮ ದೇಶದ ಜೊತೆಗೆ ಉತ್ತಮ ಸಂಬಂಧವನ್ನ ಹೊಂದಿಲ್ಲ. ಟರ್ಕಿಯಲ್ಲಿ ನೀವು ಆಟಗಾರರ ಹರಾಜು ನಡೆಸಿದ್ದೇ ಆದಲ್ಲಿ ನಾವು ಐಪಿಎಲ್ 2023ರ ಸೀಸನ್ ಬಹಿಷ್ಕರಿಸುವಂತೆ ಪ್ರಚೋದಿಸುತ್ತೇವೆ ಎಂದು ಅನೇಕರು ಎಚ್ಚರಿಕೆ ನೀಡಿದ್ದಾರೆ.
ಬಿಸಿಸಿಐ ನಿರ್ಧಾರವನ್ನ ಟ್ರೋಲ್ ಮಾಡಿರುವ ನೆಟ್ಟಿಗರು ಐಪಿಎಲ್ ಅನ್ನು ಟಿಪಿಎಲ್ ಎಂದು ಬದಲಾಯಿಸುವ ಯೋಜನೆಯೇ ಎಂದು ಪ್ರಶ್ನಿಸಿದ್ದಾರೆ. ಆದ್ರೆ ಈ ಕುರಿತು ಯಾವುದೇ ಅಂತಿಮ ತೀರ್ಮಾನ ಹೊರಬಿದ್ದಿಲ್ಲ ಹಾಗೂ ಇದು ಕೇವಲ ವರದಿಯಾಗಿರುವುದರಿಂದ ಮುಂದಿನ ದಿನಗಳಲ್ಲಿ ಸ್ವತಃ ಬಿಸಿಸಿಐ ಈ ಕುರಿತು ಸ್ಪಷ್ಟಪಡಿಸಲಿದೆ.