ಐಪಿಎಲ್ 2023ರ ಮುಂಬೈ ಇಂಡಿಯನ್ಸ್ ಮತ್ತು ಕೆಕೆಆರ್ ನಡುವಿನ ಪಂದ್ಯದಲ್ಲಿ ನಿತೀಶ್ ರಾಣಾ ಮತ್ತು ಹೃತಿಕ್ ಶೋಕೀನ್ ವಾಗ್ವಾದ ನಡೆಸಿ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕೆ ಇಬ್ಬರಿಗೂ ವಾಗ್ದಂಡನೆ ವಿಧಿಸಲವಾಗಿದೆ. ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ವಹಿಸಿಕೊಂಡಿದ್ದ ಸೂರ್ಯಕುಮಾರ್ ಯಾದವ್ಗೂ ನಿಧಾನಗತಿಯ ಬೌಲಿಂಗ್ಗಾಗಿ 12 ಲಕ್ಷ ರುಪಾಯಿ ದಂಡ ವಿಧಿಸಲಾಗಿದೆ.
ಭಾನುವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್ ತಂಡದ ನಾಯಕ ನಿತೀಶ್ ರಾಣಾ ಮುಂಬೈ ಇಂಡಿಯನ್ಸ್ ತಂಡದ ಸ್ಪಿನ್ನರ್ ಹೃತಿಕ್ ಶೊಕೀನ್ ಅವರ ಬೌಲಿಂಗ್ನಲ್ಲಿ ಲಾಂಗ್ ಆನ್ನಲ್ಲಿ ಕ್ಯಾಚ್ ನೀಡಿ ಔಟಾದರು. ಈ ಸಂದರ್ಭದಲ್ಲಿ ಇಬ್ಬರ ನಡುವೆ ವಾಕ್ಸಮರ ನಡೆಯಿತು, ನಿತೀಶ್ ರಾಣಾ ಆವೇಶಭರಿತರಾಗಿ ತಮ್ಮನ್ನು ಕೆಣಕಿದ ಹೃತಿಕ್ ಅವರಿಗೆ ಉತ್ತರ ನೀಡಿದರು, ಮುಂಬೈ ಇಂಡಿಯನ್ಸ್ನ ಇತರೆ ಆಟಗಾರರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.

ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಬಿಸಿಸಿಐ ನಿತೀಶ್ ರಾಣಾ ಅವರಿಗೆ ಪಂದ್ಯ ಶುಲ್ಕದ ಶೇಕಡಾ 25ರಷ್ಟು ದಂಡ ವಿಧಿಸಲಾಗಿದೆ. ಐಪಿಎಲ್ನ ನೀತಿ ಸಂಹಿತೆಯ ಆರ್ಟಿಕಲ್ 2.21 ರ ಅಡಿಯಲ್ಲಿ 1ನೇ ಹಂತದ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಬೌಲರ್ ಶೋಕೀನ್ ಕೂಡ ನೀತಿ ಸಂಹಿತೆಯ ಆರ್ಟಿಕಲ್ 2.5 ರ ಅಡಿಯಲ್ಲಿ ಹಂತ 1 ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಪಂದ್ಯದ ರೆಫರಿ ನಿರ್ಧಾರ ಇಲ್ಲಿ ಅಂತಿಮವಾಗಿರುತ್ತದೆ.

ರೋಹಿತ್ ಶರ್ಮಾ ಬದಲಾಗಿ ತಂಡದ ನಾಯಕತ್ವ ವಹಿಸಿಕೊಂಡಿದ್ದ ಸೂರ್ಯಕುಮಾರ್ ಯಾದವ್ ಅವರಿಗೂ ದಂಡ ವಿಧಿಸಲಾಗಿದೆ. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯಲ್ಲಿ ಬೌಲಿಂಗ್ ಮಾಡಿದ್ದಕ್ಕೆ ಅವರಿಗೆ ದಂಡ ವಿಧಿಸಲಾಗಿದೆ. ಈ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮೊದಲ ಅಪರಾಧವಾಗಿರುವುದರಿಂದ, ಸ್ಟ್ಯಾಂಡ್-ಇನ್ ನಾಯಕ ಸೂರ್ಯಕುಮಾರ್ಗೆ ಐಪಿಎಲ್ನ ನೀತಿ ಸಂಹಿತೆಯ ಅಡಿಯಲ್ಲಿ ಕನಿಷ್ಠ ಓವರ್ರೇಟ್ ಅಪರಾಧಗಳಿಗೆ ಸಂಬಂಧಿಸಿದಂತೆ ರೂ.12 ಲಕ್ಷ ದಂಡ ವಿಧಿಸಲಾಯಿತು.
ನಿಧಾನಗತಿಯಲ್ಲಿ ಬೌಲಿಂಗ್ ಮಾಡಿದರೆ ತಂಡದ ನಾಯಕನಿಗೆ ದಂಡ ವಿಧಿಸಲಾಗುತ್ತದೆ. ಅಲ್ಲದೆ ನಿಗದಿತ ಸಮಯದಲ್ಲಿ ಓವರ್ ಗಳನ್ನು ಮುಗಿಸದಿದ್ದರೆ, ಆ ಸಮಯದ ನಂತರ 30 ಯಾರ್ಡ್ ಸರ್ಕಲ್ನ ಹೊರಗಡೆ ಕೇವಲ ನಾಲ್ವರು ಫೀಲ್ಡರ್ ಗಳನ್ನು ಇಟ್ಟುಕೊಂಡು ಬೌಲಿಂಗ್ ಮಾಡಬೇಕಾಗುತ್ತದೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಮಾಡಿದ್ದಕ್ಕೆ ಆರ್ ಸಿಬಿ ನಾಯಕ ಫಾಫ್ ಡುಪ್ಲೆಸಿಸ್ಗೆ ಕೂಡ ದಂಡ ವಿಧಿಸಲಾಗಿತ್ತು.

2023ರ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತವರಿನಲ್ಲಿ ಮೊದಲ ಗೆಲುವು ಕಂಡಿದೆ. ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ವೆಂಕಟೇಶ್ ಅಯ್ಯರ್ ಅವರ ಶತಕದ ನೆರವಿನಿಂದ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 185 ರನ್ ಕಲೆಹಾಕಿತು. ಅಯ್ಯರ್ 51 ಎಸೆತಗಳಲ್ಲಿ 104 ರನ್ ಗಳಿಸಿದರು. 16 ವರ್ಷಗಳ ಬಳಿಕ ಕೆಕೆಆರ್ ಪರವಾಗಿ ಎರಡನೇ ಶತಕ ಗಳಿಸಿದ ದಾಖಲೆ ಬರೆದರು.
ಈ ಮೊತ್ತವನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಇಶಾನ್ ಕಿಶನ್ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ 17.4 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 186 ರನ್ ಗಳಿಸುವ ಮೂಲಕ 5 ವಿಕೆಟ್ಗಳ ಜಯ ಸಾಧಿಸಿತು. ಇಶಾನ್ ಕಿಶನ್ 25 ಎಸೆತಗಳಲ್ಲಿ 58 ರನ್ ಗಳಿಸಿದರು, ಸೂರ್ಯ ಕುಮಾರ್ ಯಾದವ್ 25 ಎಸೆತಗಳಲ್ಲಿ 43 ರನ್ ಗಳಿಸಿದರು.