ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಆವೃತ್ತಿಯಲ್ಲಿ ಆಟಗಾರರ ಗಾಯದ ಸಮಸ್ಯೆ ಮುಂದುವರೆದಿದೆ. ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ಸ್ಫೋಟಕ ಬ್ಯಾಟರ್ ಭಾನುಕಾ ರಾಜಪಕ್ಸ ಗಾಯಗೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಬ್ಯಾಟಿಂಗ್ ಮಾಡುತ್ತಿದ್ದ ಸಮಯದಲ್ಲಿ ರಾಜಪಕ್ಸ ಗಾಯಗೊಂಡಿದ್ದು, ರಿಟೈರ್ಡ್ ಹರ್ಟ್ ಆಗುವ ಮೂಲಕ ಮೈದಾನದಿಂದ ಹೊರನಡೆದರು.
ಬೌಲರ್ ಎಂಡ್ನಲ್ಲಿ ನಿಂತಿದ್ದ ಭಾನುಕಾ ರಾಜಪಕ್ಸ ಅವರಿಗೆ ಶಿಖರ್ ಧವನ್ ಹೊಡೆದ ಚೆಂಡು ತೋಳಿಗೆ ಬಡಿಯಿತು. ಚೆಂಡು ತೋಳಿಗೆ ಬಿದ್ದತಕ್ಷಣ ರಾಜಪಕ್ಸ ಹೆಚ್ಚಿನ ನೋವಿನಿಂದ ನರಳಿದರು. ಸಾಕಷ್ಟು ಸಮಯ ಕಳೆದರೂ ನೋವು ಕಡಿಮೆಯಾಗದ ಕಾರಣ ಅವರು ಬ್ಯಾಟಿಂಗ್ ಮುಂದುವರೆಸದೇ ಹೊರನಡೆದರು. ರಾಜಪಕ್ಸ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಅರ್ಧಶತಕ ಗಳಿಸುವ ಮೂಲಕ ಉತ್ತಮ ಫಾರ್ಮ್ ಪ್ರದರ್ಶಿಸಿದ್ದರು.

10ನೇ ಓವರ್ನ ಮೊದಲ ಎಸೆತದಲ್ಲಿ ಈ ಘಟನೆ ನಡೆದಿದೆ. ಅಶ್ವಿನ್ ಅವರ ಎಸೆತದಲ್ಲಿ ಶಿಖರ್ ಧವನ್ ನೇರವಾಗಿ ಬಲವಾಗಿ ಚೆಂಡನ್ನು ಹೊಡೆದರು, ನಾನ್ ಸ್ಟ್ರೈಕರ್ ಎಂಡ್ನಲ್ಲಿ ನಿಂತಿದ್ದ ರಾಜಪಕ್ಸ ಅವರಿಗೆ ಪ್ರತಿಕ್ರಿಯಿಸಲು ಕೂಡ ಸಮಯ ಸಿಗಲಿಲ್ಲ, ಅವರು ತಪ್ಪಿಸಿಕೊಳ್ಳಲು ಪ್ರಯತ್ನಿಸುವ ಮುನ್ನವೇ ಚೆಂಡು ವೇಗವಾಗಿ ಬಂದು ಭಾನುಕ ರಾಜಪಕ್ಷ ತನ್ನ ಮುಂಗೈಗೆ ಬಡಿಯಿತು. ತಕ್ಷ ಣ ಫಿಸಿಯೊ ಅವರನ್ನು ಕರೆತಂದು ಬ್ಯಾಟರ್ ಆರೈಕೆ ಮಾಡಲಾಗಿತ್ತು, ಆದರೂ ಅವರು ಮೈದಾನದಿಂದ ಹೊರನಡೆದರು.

ಗಾಯಗೊಂಡು ಹೊರ ಬಿದ್ದ ಯುವ ಬ್ಯಾಟರ್
ಪಂಜಾಬ್ ಕಿಂಗ್ಸ್ ತಂಡಕ್ಕೆ ಆಟಗಾರರ ಗಾಯದ ಸಮಸ್ಯೆ ಈಗಾಗಲೇ ಹೆಚ್ಚಾಗಿ ಕಾಡುತ್ತಿದೆ. ಯುವ ಬ್ಯಾಟರ್ ರಾಜ್ ಅಂಗದ್ ಬಾವಾ ಅವರು ಗಾಯಗೊಂಡು ಹೊರ ಬಿದ್ದಿದ್ದು, ಅವರ ಬದಲಾಗಿ ಗುರ್ನೂರ್ ಸಿಂಗ್ ಬ್ರಾರ್ ಆಯ್ಕೆಯಾಗಿದ್ದಾರೆ. ಐಪಿಎಲ್ ಮಿನಿ ಹರಾಜಿನಲ್ಲಿ 19 ವರ್ಷದೊಳಗಿನವರ ವಿಶ್ವಕಪ್ ವಿಜೇತ ರಾಜ್ ಅಂಗದ್ ಬಾವಾ ಅವರನ್ನು 2 ಕೋಟಿ ರೂಪಾಯಿ ನೀಡಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿತ್ತು, ಅವರು ಗಾಯದ ಕಾರಣದಿಂದ ಹೊರಬಿದ್ದಿದ್ದು, 20 ಲಕ್ಷ ಮೂಲ ಬೆಲೆ ಹೊಂದಿರುವ ಗುರ್ನೂರ್ ಸಿಂಗ್ ಬ್ರಾರ್ ತಂಡವನ್ನು ಸೇರಿಕೊಂಡರು.
ಇನ್ನು ಪಂದ್ಯಾವಳಿ ಆರಂಭಕ್ಕೆ ಮುನ್ನವೇ ತಂಡದ ಸ್ಫೋಟಕ ಬ್ಯಾಟರ್ ಜಾನಿ ಬೈರ್ ಸ್ಟೋವ್ ಐಪಿಎಲ್ನಿಂದ ಹೊರಗುಳಿದರು. ಬೈರ್ ಸ್ಟೋವ್ ಬದಲಾಗಿ ಆಸ್ಟ್ರೇಲಿಯಾದ ಬ್ಯಾಟರ್ ಮ್ಯಾಥ್ಯೂ ಶಾರ್ಟ್ ತಂಡವನ್ನು ಸೇರಿಕೊಂಡರು. ತಂಡದ ಮತ್ತೊಬ್ಬ ಸ್ಫೋಟಕ ಬ್ಯಾಟರ್ ಲಿಯಾಮ್ ಲಿವಿಂಗ್ಸ್ಟೋನ್ ಕೂಡ ಇನ್ನೂ ತಂಡವನ್ನು ಸೇರಿಕೊಂಡಿಲ್ಲ, ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಇನ್ನೂ ಎನ್ಒಸಿ ನೀಡದ ಕಾರಣ ಅವರು ಭಾರತಕ್ಕೆ ಬರಲು ತಡವಾಗುತ್ತಿದೆ.