
ನಿನ್ನೆ ( ಮೇ 29 ) ಅಹ್ಮದಾಬಾದ್ನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆರಂಭವಾದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ಫೈನಲ್ ಪಂದ್ಯದ ಮೂಲಕ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯಗೊಂಡಿದೆ.
ಎಲ್ಲಾ ಯೋಜನೆಯಂತೆ ನಡೆದಿದ್ದರೆ ಮೊನ್ನೆಯೇ ( ಮೇ 28 ) ಈ ಪಂದ್ಯ ನಡೆಯಬೇಕಿತ್ತು. ಆದರೆ ನಿನ್ನೆ ವಿಪರೀತ ಮಳೆ ಬಂದ ಕಾರಣ ಪಂದ್ಯ ರದ್ದಾಗಿ ಇಂದಿನ ರಿಸರ್ವ್ ಡೇಗೆ ಮುಂದೂಡಲ್ಪಟ್ಟಿತ್ತು. ಆದರೆ ಈ ರಿಸರ್ವ್ ಡೇ ದಿನದಂದೂ ಸಹ ಪಂದ್ಯಕ್ಕೆ ಮಳೆ ಅಡ್ಡಿ ಉಂಟುಮಾಡಿತ್ತು. ವಿಪರೀತ ಮಳೆ ಬಂದ ಕಾರಣ 20 ಓವರ್ಗಳ ಪಂದ್ಯವನ್ನು 15 ಓವರ್ಗೆ ಕುಸಿತ ಕಂಡಿತ್ತು. ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ ಎಸ್ ಧೋನಿ ಫೀಲ್ಡಿಂಗ್ ಆಯ್ದುಕೊಂಡು ಎದುರಾಳಿ ಗುಜರಾತ್ ಟೈಟನ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ್ದರು.
ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ ವೃದ್ಧಿಮಾನ್ ಸಹಾ ಅರ್ಧಶತಕ ಹಾಗೂ ಸಾಯಿ ಸುದರ್ಶನ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 214 ರನ್ ಕಲೆಹಾಕಿದ್ದು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಗೆಲ್ಲಲು 215 ರನ್ಗಳ ಕಠಿಣ ಗುರಿಯನ್ನು ನೀಡಿತ್ತು. ಆದರೆ ಮಳೆಯ ಕಾರಣದಿಂದಾಗಿ 15 ಓವರ್ಗಳಿಗೆ ಪಂದ್ಯ ಕುಸಿದಿದ್ದು, ಚೆನ್ನೈ ಸೂಪರ್ ಕಿಂಗ್ಸ್ 15 ಓವರ್ಗಳಲ್ಲಿ 171 ರನ್ ಬಾರಿಸಬೇಕಾದ ಅಗತ್ಯವಿತ್ತು.
ಇನ್ನು ಈ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ 15 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 171 ರನ್ ಕಲೆಹಾಕಿದ್ದು 5 ವಿಕೆಟ್ಗಳ ಗೆಲುವನ್ನು ಕಂಡಿದೆ.
ಗುಜರಾತ್ ಟೈಟನ್ಸ್ ಇನ್ನಿಂಗ್ಸ್: ತಂಡದ ಪರ ಶುಬ್ಮನ್ ಗಿಲ್ ಹಾಗೂ ವೃದ್ಧಿಮಾನ್ ಸಹಾ ಮೊದಲು ಬ್ಯಾಟಿಂಗ್ ಮಾಡಿದರು. ವೃದ್ಧಿಮಾನ್ ಸಹಾ 39 ಎಸೆತಗಳಲ್ಲಿ 54 ರನ್ ಗಳಿಸಿದರೆ, ಶುಬ್ಮನ್ ಗಿಲ್ 20 ಎಸೆತಗಳಲ್ಲಿ 39 ರನ್ ಗಳಿಸಿದರು. ಇನ್ನುಳಿದಂತೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸಾಯಿ ಸುದರ್ಶನ್ 47 ಎಸೆತಗಳಲ್ಲಿ 8 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 96 ರನ್ ಕಲೆಹಾಕಿ ಅಬ್ಬರಿಸಿ ಶತಕ ವಂಚಿತರಾದರು. ಹಾರ್ದಿಕ್ ಪಾಂಡ್ಯ 12 ಎಸೆತಗಳಲ್ಲಿ 21 ರನ್ ಗಳಿಸಿದರೆ, ರಶೀದ್ ಖಾನ್ ಡಕ್ಔಟ್ ಆದರು.
ಚೆನ್ನೈ ಸೂಪರ್ ಕಿಂಗ್ಸ್ ಪರ ಮಹೀಶ ಪತಿರಾಣ ಎರಡು ವಿಕೆಟ್ ಪಡೆದರೆ, ದೀಪಕ್ ಚಹಾರ್ ಹಾಗೂ ರವೀಂದ್ರ ಜಡೇಜಾ ತಲಾ ಒಂದೊಂದು ವಿಕೆಟ್ ಪಡೆದರು.
ಚೆನ್ನೈ ಸೂಪರ್ ಕಿಂಗ್ಸ್ ಇನ್ನಿಂಗ್ಸ್: ಗುಜರಾತ್ ಟೈಟನ್ಸ್ ನೀಡಿದ ಗುರಿಯನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ಪರ ಆರಂಭಿಕ ಆಟಗಾರರಾಗಿ ಡಿವಾನ್ ಕಾನ್ವೆ ಹಾಗೂ ರುತುರಾಜ್ ಗಾಯಕ್ವಾಡ್ ಕಣಕ್ಕಿಳಿದಿದ್ದರು. ಮೂರು ಎಸೆತಗಳು ಆದ ಬಳಿಕ ಜೋರಾಗಿ ಮಳೆ ಬಂದ ಕಾರಣ ಪಂದ್ಯ 15 ಓವರ್ಗಳಿಗೆ ಕುಸಿತಗೊಂಡು 15 ಓವರ್ಗಳಲ್ಲಿ 171 ರನ್ ಬಾರಿಸಬೇಕಾದ ಅಗತ್ಯವಿತ್ತು. ಆರಂಭಿಕ ಜೋಡಿ 6.3 ಓವರ್ಗಳಲ್ಲಿ 74 ರನ್ ಬಾರಿಸಿ ಅಬ್ಬರಿಸಿತು. ರುತುರಾಜ್ ಗಾಯಕ್ವಾಡ್ 26 ರನ್ ಗಳಿಸಿದರೆ, ಡಿವಾನ್ ಕಾನ್ವೆ 47 ರನ್ ಬಾರಿಸಿದರು. ಅಜಿಂಕ್ಯಾ ರಹಾನೆ 27 ರನ್, ಅಂಬಾಟಿ ರಾಯುಡು 19 ರನ್, ಎಂಎಸ್ ಧೋನಿ ಡಕ್ ಔಟ್, ರವೀಂದ್ರ ಜಡೇಜಾ ಅಜೇಯ 15 ರನ್ ಹಾಗೂ ಶಿವಮ್ ದುಬೆ ಅಜೇಯ 32 ರನ್ ಬಾರಿಸಿದರು.
ಹೀಗೆ ಚೆನ್ನೈ ಸೂಪರ್ ಕಿಂಗ್ಸ್ ಪರ ಆರಂಭದಲ್ಲಿ ಆರಂಭಿಕರು ಆಸರೆಯಾದರೆ, ಮಧ್ಯಮ ಕ್ರಮಾಂಕದಲ್ಲಿ ಅಜಿಂಕ್ಯಾ ರಹಾನೆ ಹಾಗೂ ಅಂಬಾಟಿ ರಾಯುಡು ಅಮೂಲ್ಯವಾದ ಕೊಡುಗೆ ನೀಡಿದರು. ಶಿವಮ್ ದುಬೆ ದೊಡ್ಡ ಹೊಡೆತಗಳನ್ನು ಬಾರಿಸಿ ತಂಡವನ್ನು ಗೆಲುವಿನ ಸನಿಹಕ್ಕೆ ಬರುವಂತೆ ಮಾಡಿದರು. ಅಂತಿಮವಾಗಿ 2 ಎಸೆತಗಳಲ್ಲಿ ಗೆಲ್ಲಲು 10 ರನ್ಗಳ ಅಗತ್ಯವಿದ್ದಾಗ ಮೋಹಿತ್ ಶರ್ಮಾ ಓವರ್ನಲ್ಲಿ ಸಿಕ್ಸರ್ ಹಾಗೂ ಬೌಂಡರಿಯನ್ನು ಬಾರಿಸಿ ರೋಚಕ ಗೆಲುವು ತಂದುಕೊಟ್ಟರು.
ಗುಜರಾತ್ ಟೈಟನ್ಸ್ ಪರ ಮೋಹಿತ್ ಶರ್ಮಾ ಮೂರು ವಿಕೆಟ್ ಪಡೆದರೆ, ನೂರ್ ಅಹ್ಮದ್ ಎರಡು ವಿಕೆಟ್ ಪಡೆದರು.
ಗುಜರಾತ್ ಟೈಟಾನ್ಸ್ (ಪ್ಲೇಯಿಂಗ್ XI): ವೃದ್ಧಿಮಾನ್ ಸಹಾ ( ವಿಕೆಟ್ ಕೀಪರ್ ), ಶುಬ್ಮನ್ ಗಿಲ್, ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ(ನಾಯಕ), ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೋಹಿತ್ ಶರ್ಮಾ, ನೂರ್ ಅಹ್ಮದ್ ಹಾಗೂ ಮೊಹಮ್ಮದ್ ಶಮಿ
ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ XI): ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ, ಮೊಯಿನ್ ಅಲಿ, ಅಂಬಟಿ ರಾಯುಡು, ರವೀಂದ್ರ ಜಡೇಜಾ, ಎಂಎಸ್ ಧೋನಿ (ನಾಯಕ ಹಾಗೂ ವಿಕೆಟ್ ಕೀಪರ್), ದೀಪಕ್ ಚಾಹರ್, ಮಥೀಶ ಪತಿರಣ, ತುಷಾರ್ ದೇಶಪಾಂಡೆ ಮತ್ತು ಮಹೇಶ್ ತೀಕ್ಷಣ