
ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಆರಂಭದ ಪಂದ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮಾರ್ಚ್ 31ರಂದು ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಜೈಂಟ್ಸ್ ವಿರುದ್ಧ ಸೆಣೆಸಲಿದೆ.
ಚೆನ್ನೈನ ಚಿದಂಬರಂ ಕ್ರೀಡಾಂಗಣದಲ್ಲಿ ಸಿಎಸ್ಕೆ ತಂಡದ ಆಟಗಾರರು ಕಠಿಣವಾದ ಅಭ್ಯಾಸ ಮಾಡುತ್ತಿದ್ದಾರೆ. ಆದರೆ, ಸೋಮವಾರ ಅಭ್ಯಾಸದ ಅವಧಿಯಲ್ಲಿ ಎಂಎಸ್ ಧೋನಿ ಗಾಯಗೊಂಡಿರುವ ಆತಂಕ ಎದುರಾಗಿದೆ. ಧೋನಿ ಅತ್ಯಂತ ಫಿಟ್ ಆಗಿದ್ದರು, ಅವರ ಎಡಾಗಲಿಗೆ ತೊಂದರೆ ಇದೆ. ಅಭ್ಯಾಸದ ಅವಧಿಯಲ್ಲಿ ರನ್ ಗಳಿಸುವ ವೇಳೆ ಕುಂಟುತ್ತಾ ಓಡಿರುವುದು ಆತಂಕಕ್ಕೆ ಕಾರಣವಾಗಿದೆ.
ಸೋಮವಾರ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಎಂಎಸ್ ಧೋನಿ ಅಭ್ಯಾಸ ಮಾಡುವುದನ್ನು ನೋಡಲು ಪ್ರೇಕ್ಷಕರಿಗೆ ಅವಕಾಶ ನೀಡಲಾಗಿತ್ತು. ಸಾವಿರಾರು ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರನನ್ನು ನೋಡಲು ಮೈದಾನಕ್ಕೆ ಆಗಮಿಸಿದ್ದರು. ಅಭ್ಯಾಸದ ಅವಧಿಯಲ್ಲಿ ಭರ್ಜರಿಯಾಗಿ ಬೌಂಡರಿಗಳನ್ನು ಸಿಡಿಸುವ ಮೂಲಕ ಧೋನಿ ಅಭಿಮಾನಿಗಳನ್ನು ರಂಜಿಸಿದರು.
ಆದರೆ, ಅವರು ಅಭ್ಯಾಸದ ವೇಳೆ ಗಾಯಗೊಂಡಿರುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ. ಸ್ಪೋರ್ಟ್ಸ್ಟಾರ್ ವರದಿ ಮಾಡಿರುವ ಪ್ರಕಾರ, ಧೋನಿ ಆರಂಭದಲ್ಲಿ ನೆಟ್ಸ್ನಲ್ಲಿ ಅಭ್ಯಾಸ ಮಾಡಲು ಹಿಂಜರಿಯುತ್ತಿದ್ದರು.

ಎಂಎಸ್ ಧೋನಿ ಮೊಣಕಾಲಿಗೆ ನೋವು
ವಿಕೆಟ್ಗಳ ಮಧ್ಯೆ ಜೋರಾಗಿ ಓಡುವ ಧೋನಿ, ಹೆಚ್ಚಿನ ಒತ್ತಡ ಬೀಳದಂತೆ ನಿಧಾನವಾಗಿ ಓಡುತ್ತಿದ್ದದ್ದು ಗಮನಕ್ಕೆ ಬಂದಿದೆ. ಮೊಣಕಾಲಿನ ನೋವಿನಿಂದ ಬಳಲುತ್ತಿದ್ದುದು ಗೊತ್ತಾಗಿದೆ. ಆಗಾಗ್ಗೆ ಮಧ್ಯದಲ್ಲಿ ವಿರಾಮಗೊಳಿಸಿದರು, ಸಂಪೂರ್ಣ ಓಟವನ್ನು ಮುಗಿಸಲು ಕಷ್ಟಪಟ್ಟರು. ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯಕ್ಕೆ ಮುನ್ನ ಧೋನಿ ಅಭ್ಯಾಸದ ವೇಳೆ ಕಷ್ಟಪಟ್ಟಿರುವುದು ತಂಡಕ್ಕೆ ತಲೆನೋವು ತಂದಿದೆ.
ಧೋನಿ ಏನಾದರೂ ಗಾಯಗೊಂಡರೆ ಸಿಎಸ್ಕೆ ತಂಡಕ್ಕೆ ದೊಡ್ಡ ಹಿನ್ನಡೆಯಾಗಲಿದೆ. ಧೋನಿ ಆಡದಿದ್ದರೆ ಬೇರೆಯವರಿಗೆ ನಾಯಕತ್ವ ವಹಿಸಬೇಕು ಮಾತ್ರವಲ್ಲದೆ ವಿಕೆಟ್ ಕೀಪರ್ ಕೂಡ ಸಿದ್ಧವಾಗಬೇಕಾಗುತ್ತದೆ. ಮುಂಜಾಗ್ರತಾ ಕ್ರಮವಾಗಿ ಧೋನಿಗೆ ವಿಶ್ರಾಂತಿ ನೀಡಿದರೆ ಬೆನ್ಸ್ಟೋಕ್ಸ್ ಹಂಗಾಮಿ ನಾಯಕರಾಗಿ ನೇಮಕವಾಗುವ ಸಾಧ್ಯತೆ ಇದೆ.
ಅಂಬಾಟಿ ರಾಯುಡು, ರುತುರಾಜ್ ಗಾಯಕ್ವಾಡ್ ಮತ್ತು ಡೆವೊನ್ ಕಾನ್ವೇ ವಿಕೆಟ್ ಕೀಪರ್ ಆಗುವ ಆಯ್ಕೆಗಳಿವೆ. ಧೋನಿ ಗಾಯದ ಸಮಸ್ಯೆ ಬಗ್ಗೆ ಮಂಗಳವಾರ ಪರೀಕ್ಷೆ ಮಾಡಲಾಗಿದ್ದು, ವರದಿ ಬಂದ ನಂತರ ಮುಂದಿನ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಮೊದಲ ಪಂದ್ಯಕ್ಕಾಗಿ ಅಹಮದಾಬಾದ್ಗೆ ತೆರಳುವ ಮುನ್ನ ಮತ್ತೊಂದು ದಿನ ಅಭ್ಯಾಸ ಮಾಡುವ ಸಾಧ್ಯತೆ ಇದೆ.

ಪ್ರಮುಖ ಬೌಲರ್ ಗಳು ಅಲಭ್ಯ
ಸಿಎಸ್ಕೆ ತಂಡದ ಆರಂಭಿಕ ಪಂದ್ಯಗಳಿಗೆ ಪ್ರಮುಖ ಬೌಲರ್ ಗಳಾದ ಶ್ರೀಲಂಕಾದ ಮಹೀಶ್ ತೀಕ್ಷಣ ಮತ್ತು ಮತೀಶ ಚೌಧರಿ ಅಲಭ್ಯರಾಗಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿಯಲ್ಲಿ ಆಡಲಿದ್ದು, ಏಪ್ರಿಲ್ 8ರ ಬಳಿಕ ತಂಡವನ್ನು ಸೇರಿಕೊಳ್ಳಲಿದ್ದಾರೆ.
2023ರ ಐಪಿಎಲ್ಗೆ ಸಿಎಸ್ಕೆ ತಂಡ: ಎಂಎಸ್ ಧೋನಿ (ನಾಯಕ), ಡೆವೊನ್ ಕಾನ್ವೆ, ರುತುರಾಜ್ ಗಾಯಕ್ವಾಡ್, ಅಂಬಟಿ ರಾಯುಡು, ಸುಭ್ರಾಂಶು ಸೇನಾಪತಿ, ಮೊಯಿನ್ ಅಲಿ, ಶಿವಂ ದುಬೆ, ರಾಜವರ್ಧನ್ ಹಂಗರ್ಗೇಕರ್, ಡ್ವೈನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ರವೀಂದ್ರ ಜಡೇಜಾ, ತುಷಾರ್ ದೇಶಪಾಂಡೆ, ಮುಖೇಶ್ ಚೌಧರಿ, ಮತೀಶ ಚೌಧರಿ, ಪ್ರಶಾಂತ್ ಸೋಲಂಕಿ, ಮಹೇಶ್ ತೀಕ್ಷಣ, ಅಜಿಂಕ್ಯ ರಹಾನೆ, ಬೆನ್ ಸ್ಟೋಕ್ಸ್, ಶೇಕ್ ರಶೀದ್, ನಿಶಾಂತ್ ಸಿಂಧು, ಸಿಸಂದಾ ಮಗಳ, ಅಜಯ್ ಮಂಡಲ್, ಭಗತ್ ವರ್ಮಾ.