
2023ರ ಐಪಿಎಲ್ ಆವೃತ್ತಿಯ ನಂತರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ನಿವೃತ್ತಿಯಾಗುವುದು ಬಹುತೇಕ ಖಚಿತವಾಗಿದೆ. ಸಿಎಸ್ಕೆ ತಂಡದ ಅಧಿಕಾರಿಗಳೇ ಈ ವಿಚಾರ ತಿಳಿಸಿದ್ದಾರೆ ಎಂದು ಇನ್ಸೈಡ್ ಸ್ಪೋರ್ಟ್ಸ್ ವರದಿ ಮಾಡಿದೆ.
ಧೋನಿ ಇನ್ನೂ ಅಧಿಕೃತವಾಗಿ ಈ ವಿಚಾರವನ್ನು ಸಿಎಸ್ಕೆ ತಂಡಕ್ಕೆ ತಿಳಿಸಿಲ್ಲವಾದರೂ, ಚೆಪಾಕ್ನ ಅಂಗಳದಲ್ಲಿ ಅಭಿಮಾನಿಗಳ ಮುಂದೆ ನಿವೃತ್ತಿಯನ್ನು ಘೋಷಿಸಲು ಧೋನಿ ಸಿದ್ಧವಾಗಿದ್ದಾರೆ. ಚೆಪಾಕ್ನಲ್ಲಿ ತವರಿನ ಅಭಿಮಾನಿಗಳ ಮುಂದೆ ಆಡಬೇಕು ಎನ್ನುವುದು ಅವರ ಆಸೆಯಾಗಿದೆ ಎಂದು ಸಿಎಸ್ಕೆ ಅಧಿಕಾರಿಗಳು ತಿಳಿಸಿದ್ದಾರೆ.
ಐಪಿಎಲ್ ಆರಂಭಕ್ಕೂ ಮುನ್ನ ಧೋನಿ ತಮ್ಮ ನಿರ್ಧಾರವನ್ನು ಅಧಿಕೃತವಾಗಿ ತಿಳಿಸುತ್ತಾರೆ ಎಂದು ಸಿಎಸ್ಕೆ ಮ್ಯಾನೇಜ್ಮೆಂಟ್ ನಿರೀಕ್ಷೆ ಮಾಡಿದೆ. ಮೂರು ವರ್ಷಗಳ ಬಳಿಕ ಐಪಿಲ್ ತವರು ಮತ್ತು ಹೊರಗಿನ ಅಂಗಳದಲ್ಲಿ ಪಂದ್ಯಗಳು ನಡೆಯುವ ಮಾದರಿಗೆ ಮರಳಿದೆ. ಐಪಿಎಲ್ ಆರಂಭದ ವೇಳೆಗೆ ನಾವು ಸ್ಪಷ್ಟತೆಯನ್ನು ಹೊಂದಿರಬೇಕು" ಎಂದು ಸಿಎಸ್ಕೆ ಅಧಿಕಾರಿಯೊಬ್ಬರು ಇನ್ಸೈಡ್ಸ್ಪೋರ್ಟ್ಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಧೋನಿ ನಿವೃತ್ತಿಯಾಗುವ ಬಗ್ಗೆ ಸಾಕಷ್ಟು ದಿನಗಳಿಂದ ಊಹಾಪೋಹಗಳು ವರದಿಯಾಗುತ್ತಿವೆ. 2022ರ ಐಪಿಎಲ್ ಆವೃತ್ತಿಗೆ ಮೊದಲು ಧೋನಿ ನಾಯಕತ್ವವನ್ನು ತ್ಯಜಿಸಿದ್ದರು. ಆಲ್ರೌಂಡರ್ ರವೀಂದ್ರ ಜಡೇಜಾಗೆ ನಾಯಕನ ಪಟ್ಟ ನೀಡಲಾಗಿತ್ತು. ಆದರೆ, ಜಡೇಜಾ ನಾಯಕತ್ವದಲ್ಲಿ ಸಿಎಸ್ಕೆ ತಂಡ ಸಾಕಷ್ಟು ಕಳಪ್ರ ಪ್ರದರ್ಶನ ನೀಡಿತ್ತು. ಜಡೇಜಾ ಗಾಯದ ಕಾರಣ ನೀಡಿ ಟೂರ್ನಿಯಿಂದಲೇ ಹೊರ ನಡೆದರು.

ಮತ್ತೆ ನಾಯಕತ್ವ ವಹಿಸಿಕೊಂಡ ಧೋನಿ
ಟೂರ್ನಿಯ ಮಧ್ಯದಲ್ಲೇ ಜಡೇಜಾ ಹಿಂದೆ ಸರಿದ ಕಾರಣ ಧೋನಿ ಮತ್ತೆ ನಾಯಕತ್ವ ವಹಿಸಿಕೊಂಡರು. 2023ರ ಐಪಿಎಲ್ನಲ್ಲಿ ಚೆನ್ನೈ ತಂಡವನ್ನು ಅವರೇ ಮುನ್ನಡೆಸಲು ನಿರ್ಧರಿಸಿದ್ದಾರೆ. ತಂಡದಲ್ಲಿ ನಾಯಕತ್ವ ವಹಿಸಿಕೊಳ್ಳಲು ಹಲವು ಪ್ರತಿಭಾವಂತ ಆಟಗಾರರು ಇದ್ದಾರೆ.
ಅಜಿಂಕ್ಯ ರಹಾನೆ ಅಥವಾ ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ಗೆ ನಾಯಕತ್ವ ಸಿಗುವ ಸಾಧ್ಯತೆ ಇದೆ. ಆದರೆ ಇದೆಲ್ಲವನ್ನೂ ಧೋನಿಯೇ ನಿರ್ಧರಿಸಬೇಕು ಎಂದು ಸಿಎಸ್ಕೆ ತಂಡದ ಮಾಲಿಕರು ಹೇಳಿದ್ದಾರೆ.