ಇಂಡಿಯನ್ ಪ್ರೀಮಿಯರ್ ಲೀಗ್ನ ಮೊದಲ ಪ್ಲೇಆಫ್ ಪಂದ್ಯ ಮಂಗಳವಾರ ನಡೆದಿದ್ದು ಗುಜರಾತ್ ಟೈಟನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗುಜರಾತ್ ಟೈಟನ್ಸ್ ವಿರುದ್ಧ ಗೆಲುವು ಸಾಧಿಸಿದ್ದು ಐಪಿಎಲ್ ಇತಿಹಾಸದಲ್ಲಿ 10ನೇ ಬಾರಿಗೆ ಫೈಣಲ್ಗೆ ಪ್ರವೇಶ ಪಡೆದುಕೊಂಡಿದೆ. ಈ ಮೂಲಕ ಭಾನುವಾರ ನಡೆಯಲಿರುವ 16ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಅಹ್ಮದಾಬಾದ್ನಲ್ಲಿ ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ.
ಆದರೆ ಈ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳುವ ಸಾಧ್ಯತೆಗಳು ಕಂಡುಬರುತ್ತಿವೆ. ಇದಕ್ಕೆ ಕಾರಣ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ನಡೆದುಕೊಂಡ ರೀತಿ. ಮಾಹಿ ಈ ಆವೃತ್ತಿಯ ಫೈನಲ್ ಪಂದ್ಯದಿಂದ ನಿಷೇಧಕ್ಕೆ ಒಳಗಾಗುವ ಸಾಧ್ಯತೆಯಿದೆ.

ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಎಂಎಸ್ ಧೋನಿ ಅಂಪೈರ್ಗಳ ಜೊತೆಗೆ ವಾದಕ್ಕೆ ಇಳಿದಿದ್ದರು. ಈ ಸಂದರ್ಭದಲ್ಲಿ ಸುಮಾರು ನಾಲ್ಕು ನಿಮಿಷಗಳ ವ್ಯರ್ಥವಾಗಿದೆ. ಹೀಗಾಗಿ ಮಾಹಿ ಉದ್ದೇಶಪೂರ್ವಕವಾಗಿ ಸಮಯ ವ್ಯರ್ಥ ಮಾಡಿದ್ದಾರೆ ಎಂಬ ಟೀಕೆಗಳು ವ್ಯಕ್ತವಾಗಿದೆ. ಈಗಾಗಲೇ ಟೂರ್ನಿಯಲ್ಲಿ ಒಂದು ಬಾರಿ ನಿಗದಿತ ಸಮಯಕ್ಕಿಂತ ತಡವಾಗಿ ಪಂದ್ಯ ಮುಗಿಸಿದ ಕಾರಣಕ್ಕೆ ಧೋನಿ ದಂಡನೆಗೆ ಗುರಿಯಾಗಿದ್ದರು. ಹೀಗಾಗಿ ಈ ಪಂದ್ಯದಲ್ಲಿಯೂ ಸಮಯ ವ್ಯರ್ಥ ಮಾಡಿದ ಕಾರಣಕ್ಕಾಗಿ ಧೋನಿ ಒಂದು ಪಂದ್ಯದಿಂದ ನಿಷೇಧಕ್ಕೆ ಒಳಗಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ನಿಡಿದ 173 ರನ್ಗಳ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಟೈಟನ್ಸ್ ತಂಡಕ್ಕೆ ಕೊನೆಯ ಓವರ್ನಲ್ಲಿ ಗೆಲ್ಲಲು 27 ರನ್ಗಳ ಅಗತ್ಯವಿತ್ತು. ಆದರೆ ಜಿಟಿ ತಂಡ ಅದಾಗಲೇ ತನ್ನ 9 ವಿಕೆಟ್ಗಳನ್ನು ಕಳೆದುಕೊಂಡಿತ್ತು. ಈ ಓವರ್ನಲ್ಲಿ ಎಂಎಸ್ ಧೋನಿ ಅಂಪೈರ್ಗಳ ಜೊತೆಗೆ ವಾದಕ್ಕೆ ಇಳಿದಿದ್ದರು. ಹೀಗಾಗಿ ಸುಮಾರು ನಾಲ್ಕು ನಿಮಿಷಗಳ ಕಾಲ ಪಂದ್ಯ ವಿಳಂಬವಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಈ ರೀತಿ ಮೈದಾನದಲ್ಲಿ ವರ್ತಿಸಿರುವುದು ಗುಜರಾತ್ ಟೈಟನ್ಸ್ ತಂಡದ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಧೋನಿ ಬಗ್ಗೆ ಜಿಟಿ ಅಭಿಮಾನಿಗಳು ಬೇಸರ ಹೊರಹಾಕಿದ್ದಾರೆ. ಅಲ್ಲದೆ ದಿಗ್ಗಜ ಆಟಗಾರ ಸುನಿಲ್ ಗವಾಸ್ಕರ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು ಇದು ಸೂಕ್ತವಾದ ನಡತೆಯಲ್ಲ ಎಂದು ಹೇಳಿಕೊಂಡಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟನ್ಸ್ ತಂಡ 15 ರನ್ಗಳ ಅಂತರದಿಂದ ಈ ಪಂದ್ಯದಲ್ಲಿ ಸೋಲು ಅನುಭವಿಸಿದೆ. ಹೀಗಾಗಿ ಸಿಎಸ್ಕೆ ತಂಡ ದಾಖಲೆಯ 10ನೇ ಬಾರಿಗೆ ಐಪಿಎಲ್ ಫೈನಲ್ಗೆ ಪ್ರವೇಶಿಸಿದೆ. ಇತ್ತ ಹಾರ್ದಿಕ್ ಪಾಂಡ್ಯ ಬಳಗಕ್ಕೆ ಮತ್ತೊಂದು ಅವಕಾಶವಿದ್ದು ಇನ್ನೊಂದು ಕ್ವಾಲಿಫೈಯರ್ ಪಂದ್ಯದಲ್ಲಿ ಆಡುವ ಅವಕಾಶವಿದೆ. ಆ ಪಂದ್ಯದಲ್ಲಿ ಗೆದ್ದರೆ ಫೈನಲ್ಗೆ ಪ್ರವೇಶಿಸುವ ಅವಕಾಶ ಜಿಟಿ ತಂಡಕ್ಕೆ ಇದೆ.
ಇನ್ನು ಈ ಬಾರಿಯ ಐಪಿಎಲ್ನಲ್ಲಿ ಟೂರ್ನಿಯುದ್ದಕ್ಕೂ ಅಬ್ಬರಿಸಿದ್ದ ಗುಜರಾತ್ ಟೈಟನ್ಸ್ ತಂಡದ ಬ್ಯಾಟರ್ಗಳು ಈ ಮಹತ್ವದ ಪಂದ್ಯದಲ್ಲಿ ವಿಫಲವಾಗಿದ್ದು ತಂಡದ ಹಿನ್ನಡೆಗೆ ಕಾರಣವಾಯಿತು. ಶುಬ್ಮನ್ ಗಿಲ್ ಮಾತ್ರವೇ 42 ರನ್ ಬಾರಿಸಿ ಹೋರಾಟದ ಪ್ರದರ್ಶನ ನೀಡಿದರು, ಅಂತಿಮ ಹಂತದಲ್ಲಿ ರಶೀದ್ ಖಾನ್ ಸ್ಪೋಟಕ ಪ್ರದರ್ಶನ ನೀಡಿದರಾದರೂ 16 ಎಸೆತಗಳಲ್ಲಿ 30 ರನ್ಗಳಿಸಿದ್ದಾಗ ಅವರ ಆಟವನ್ನು ಕೊನೆಗೊಳಿಸುವಲ್ಲಿ ತುಷಾರ್ ಪಾಂಡೆ ಯಶಸ್ವಿಯಾದರು.