ಐಪಿಎಲ್ 2023 ಆವೃತ್ತಿಯಲ್ಲಿ ಆರ್ಸಿಬಿ ಮೊದಲ ಬಾರಿಗೆ ಕರ್ನಾಟಕದ ಆಟಗಾರನಿಗೆ ಅವಕಾಶ ನೀಡಿದೆ. ವೈಶಾಕ್ ವಿಜಯ್ ಕುಮಾರ್ ಮೊದಲ ಪಂದ್ಯದಲ್ಲೇ ಅತ್ಯುತ್ತಮ ಪ್ರದರ್ಶನ ನೀಡಿದ ಬಳಿಕ, ಸೋಮವಾರ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕರ್ನಾಟಕದ ಮತ್ತೊಬ್ಬ ಆಟಗಾರ ಮನೋಜ್ ಭಾಂಡಗೆ ಅವರಿಗೆ ಆಡುವ ಬಳಗದಲ್ಲಿ ಅವಕಾಶ ಕೊಡ್ತಾರ ಎನ್ನುವ ಕುತೂಹಲ ಎದುರಾಗಿದೆ.
ರಜತ್ ಪಾಟಿದಾರ್ ಗಾಯಗೊಂಡು ಹೊರಬಿದ್ದ ಬಳಿಕ ಬದಲೀ ಆಟಗಾರನಾಗಿ ಆಯ್ಕೆಯಾದ ವೈಶಾಕ್ ವಿಜಯ್ಕುಮಾರ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಪ್ಲೇಯಿಂಗ್ 11ನಲ್ಲಿ ಅವಕಾಶ ಪಡೆದರು. ಮೊದಲ ಪಂದ್ಯದಲ್ಲೇ ಮೂರು ವಿಕೆಟ್ ಪಡೆದು ಮಿಂಚಿದರು. ಮೊದಲ ಮೂರು ಪಂದ್ಯಗಳಲ್ಲಿ ಆರಂಭದಲ್ಲಿ ಉತ್ತಮವಾಗಿ ಬೌಲಿಂಗ್ ಮಾಡ್ತಿದ್ದ ಆರ್ಸಿಬಿ ನಂತರ ಹೆಚ್ಚಿನ ರನ್ ಬಿಟ್ಟುಕೊಡುವ ಮೂಲಕ ಹಿನ್ನಡೆ ಅನುಭವಿಸುತ್ತಿತ್ತು.

ಆದರೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ವೈಶಾಕ್ ವಿಜಯ್ಕುಮಾರ್ ಅತ್ಯುತ್ತಮ ಬೌಲಿಂಗ್ ಮಾಡುವ ಮೂಲಕ ಬದಲಾವಣೆ ತಂದರು. ತಮ್ಮ ಮೊದಲನೇ ಓವರ್ ನಲ್ಲೇ ಡೇವಿಡ್ ವಾರ್ನರ್ ವಿಕೆಟ್ ಪಡೆದು ಮಿಂಚಿದರು. ನಂತರ ಅಕ್ಷರ್ ಪಟೇಲ್ ಮತ್ತು ಲಲಿತ್ ಯಾದವ್ ವಿಕೆಟ್ ಪಡೆದರು. 4 ಓವರ್ ಗಳಲ್ಲಿ 20 ರನ್ ನೀಡಿ ಮೂರು ವಿಕೆಟ್ ಪಡೆದು, ಎದುರಾಳಿ ತಂಡವನ್ನು ಕಟ್ಟಿಹಾಕಿದರು.

ವೈಶಾಕ್ ಮೊದಲ ಪಂದ್ಯದಲ್ಲೇ ಉತ್ತಮ ಪ್ರದರ್ಶನ ನೀಡುವ ಮೂಲಕ ತಂಡಕ್ಕೆ ಹೆಚ್ಚಿನ ಆತ್ಮವಿಶ್ವಾಸ ನೀಡಿದ್ದಾರೆ. ಆರ್ ಸಿಬಿ ತಂಡದಲ್ಲಿ ಮತ್ತೊಬ್ಬ ಕನ್ನಡಿಗ ಮನೋಜ್ ಭಾಂಡಗೆ ಅವರಿಗೂ ಅವಕಾಶ ಕೊಡಿ ಎಂದು ಅಭಿಮಾನಿಗಳು ಒತ್ತಾಯಿಸಿದ್ದಾರೆ. ಅನುಜ್ ರಾವತ್ ಮತ್ತಿ ಮಹಿಪಾಲ್ ಲೊಮ್ರೊರ್ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿರುವ ಕಾರಣ ಮನೋಜ್ ಭಾಂಡಗೆ ಅವರಿಗೆ ಅವಕಾಶ ನೀಡಬೇಕು ಎಂದು ಕೇಳಿದ್ದಾರೆ.
ರಾಯಚೂರಿನ ಹುಡುಗ ಮನೋಜ್ ಭಾಂಡಗೆ ಕರ್ನಾಟಕ ತಂಡಕ್ಕೆ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಅದರಲ್ಲೂ ಕರ್ನಾಟಕ ಪ್ರೀಮಿಯರ್ ಲೀಗ್ನಲ್ಲಿ ಅವರು ಸ್ಪೋಟಕ ಆಲ್ರೌಂಡರ್ ಪಾತ್ರ ನಿರ್ವಹಿಸಿದ್ದಾರೆ. 7 ಟಿ20 ಪಂದ್ಯಗಳಲ್ಲಿ 116 ರನ್ ಗಳಿಸಿದ್ದಾರೆ, ಅವರು 154.66 ಸ್ಟ್ರೈಕ್ರೇಟ್ನಲ್ಲಿ ರನ್ ಗಳಿಸಿದ್ದಾರೆ. ಎಡಗೈ ಬ್ಯಾಟರ್ ಆಗಿರುವ ಅವರು ಬಲಗೈ ಮಧ್ಯಮ ವೇಗದ ಬೌಲರ್ ಆಗಿದ್ದಾರೆ.

ಮನೋಜ್ ಭಾಂಡಗೆ ಅವರಿಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಿದ ಅನುಭವ ಇದೆ. ಅನುಜ್ ರಾವತ್ ಡೆಲ್ಲಿ ವಿರುದ್ಧ ರನ್ ಗಳಿಸಲು ಪರದಾಡಿದರು. ಮಹಿಪಾಲ್ ಲೊಮ್ರೊರ್ ಕೂಡ ಹೆಚ್ಚಿನ ರನ್ ಗಳಿಸಲಿಲ್ಲ, ಆಲ್ರೌಂಡರ್ ಆದರೂ ಅವರು ಬೌಲಿಂಗ್ ಮಾಡಿಲ್ಲ, ಭಾಂಡಗೆ ಅವರಿಗೆ ಅವಕಾಶ ನೀಡಿದರೆ, ಕೆಳ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಬೌಲಿಂಗ್ನಲ್ಲಿ ಕೂಡ ಅವರು ಇಂಪ್ಯಾಕ್ಟ್ ಮಾಡಬಲ್ಲ ಆಟಗಾರ.
ಏಪ್ರಿಲ್ 17ರಂದು ಸೋಮವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ ಸಿಬಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಲಿದ್ದು, ಈ ಮಹತ್ವದ ಪಂದ್ಯದಲ್ಲೆ ಭಾಂಡಗೆ ಅವಕಾಶ ಪಡೆದು ಮಿಂಚಲಿ, ಆರ್ ಸಿಬಿ ಈ ಮಹತ್ವದ ಪಂದ್ಯದಲ್ಲಿ ಗೆಲುವು ಸಾಧಿಸಲಿ ಎಂದು ಹಾರೈಸಿದ್ದಾರೆ. ಡೆಲ್ಲಿ ವಿರುದ್ಧ ಗೆದ್ದ ತಂಡವನ್ನೇ ಉಳಿಸಿಕೊಳ್ಳುತ್ತಾ ಅಥವಾ ಪ್ಲೇಯಿಂಗ್ 11ನಲ್ಲಿ ಬದಲಾವಣೆ ಮಾಡುತ್ತಾ ಎಂದು ಕಾದು ನೋಡಬೇಕಿದೆ.