ಸೋಮವಾರ, ಏಪ್ರಿಲ್ 10ರಂದು 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 15ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ವಿರುದ್ಧ ಕೊನೆಯ ಎಸೆತದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ರೋಚಕ ಗೆಲುವು ತಮ್ಮದಾಗಿಸಿಕೊಂಡಿತು.
ಆರ್ಸಿಬಿ ನೀಡಿದ್ದ 213 ರನ್ಗಳ ಬೃಹತ್ ಮೊತ್ತದ ಬೆನ್ನಟ್ಟಿದ ಲಕ್ನೋ ಸೂಪರ್ ಜೈಂಟ್ಸ್ 105 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಮಾರ್ಕಸ್ ಸ್ಟೊಯಿನಿಸ್ 35 ಎಸೆತಗಳಲ್ಲಿ 60 ರನ್, ನಿಕೋಲಸ್ ಪೂರನ್ 19 ಎಸೆತಗಳಲ್ಲಿ 62 ರನ್ ಮತ್ತು ಆಯುಷ್ ಬದೋನಿ 24 ಎಸೆತಗಳಲ್ಲಿ 30 ರನ್ ಗಳಿಸಿ ತಂಡದ ಗೆಲುವಿಗೆ ಕಾರಣರಾದರು.

ತಮ್ಮ ತಂಡ ನಂಬಲಾಸಾಧ್ಯ ಗೆಲುವು ಸಾಧಿಸಿದ ನಂತರ ಲಕ್ನೋ ಸೂಪರ್ ಜೈಂಟ್ಸ್ (ಎಲ್ಎಸ್ಜಿ) ವೇಗಿ ಅವೇಶ್ ಖಾನ್ ಮೈದಾನದಲ್ಲಿ ಹೆಲ್ಮೆಟ್ ಕಿತ್ತೆಸೆದ ನಂತರ ಅವರ "ಆಕ್ರಮಣಕಾರಿ ನಡವಳಿಕೆ'ಗಾಗಿ ಛೀಮಾರಿ ಹಾಕಿ ದಂಡ ವಿಧಿಸಲಾಗಿದೆ.
ಇನ್ನು ಈ ಪಂದ್ಯದಲ್ಲಿ 'ನಿಧಾನಗತಿ ಓವರ್' ಮಾಡಿದ್ದಕ್ಕಾಗಿ ರಾಯಲ್ ಚಾಲೆಂಜಸ್ ಬೆಂಗಳೂರು (ಆರ್ಸಿಬಿ) ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಅವರಿಗೆ ಐಪಿಎಲ್ ಆಡಳಿತ ಮಂಡಳಿ ದಂಡ ವಿಧಿಸಿದೆ. ಆರ್ಸಿಬಿ ನಿಗದಿತ ಸಮಯದಲ್ಲಿ ತಮ್ಮ ಕೋಟಾದ ಓವರ್ ಪೂರ್ಣಗೊಳಿಸಲು ವಿಫಲವಾದ ಕಾರಣ ಫಾಫ್ ಡು ಪ್ಲೆಸಿಸ್ಗೆ 12 ಲಕ್ಷ ರೂ. ದಂಡವನ್ನು ಹಾಕಲಾಗಿದೆ.
ಲಕ್ನೋ ಸೂಪರ್ ಜೈಂಟ್ಸ್ ತಂಡದ ಗೆಲುವಿಗೆ ಕೊನೆಯ ಓವರ್ನಲ್ಲಿ 5 ರನ್ ಬೇಕಿದ್ದವು. ಆಗ ಬೌಲಿಂಗ್ ಮಾಡಿದ ಹರ್ಷಲ್ ಪಟೇಲ್ 2 ವಿಕೆಟ್ ಪಡೆದು ಪಂದ್ಯಕ್ಕೆ ತಿರುವು ನೀಡಿದ್ದರು. ಆದರೆ, ಅಂತಿಮ ಎಸೆತದಲ್ಲಿ ಒಂದು ರನ್ ಬೇಕಿದ್ದಾಗ, ಅವೇಶ್ ಖಾನ್ ಬೈ ಮೂಲಕ ಒಂದು ರನ್ ಪೂರ್ಣಗೊಳಿಸಿ ತಮ್ಮ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು. ಈ ವೇಳೆ ಸಂಭ್ರಮಿಸುವ ಆತುರದಲ್ಲಿ ಹೆಲ್ಮೆಟ್ ಅನ್ನು ಮೈದಾನದಲ್ಲಿ ಬೀಸಾಡಿದರು. ಇದಕ್ಕಾಗಿ ಮ್ಯಾಚ್ ರೆಫರಿ ಅವರಿಂದ ಛೀಮಾರಿ ಹಾಕಿಸಿಕೊಂಡರು.

"ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೋಮವಾರ ನಡೆದ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವಿನ 15ನೇ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ಆರ್ಸಿಬಿ ತಂಡದ ನಾಯಕನಿಗೆ ದಂಡ ವಿಧಿಸಲಾಗಿದೆ," ಎಂದು ಐಪಿಎಲ್ ಆಡಳಿತ ಮಂಡಳಿ ಮಾಧ್ಯಮ ಪ್ರಕಟಣೆ ತಿಳಿಸಿದೆ.
"ನಿಧಾನಗತಿ ಓವರ್ ಅಪರಾಧಗಳಿಗೆ ಸಂಬಂಧಿಸಿದಂತೆ ನೀತಿ ಸಂಹಿತೆಯ ಅಡಿಯಲ್ಲಿ ಇದು ತಂಡದ ಮೊದಲ ಅಪರಾಧವಾಗಿರುವುದರಿಂದ, ಆರ್ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಅವರಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ," ಎಂದ ತಿಳಿಸಲಾಗಿದೆ.

ಇನ್ನು ಲಕ್ನೋ ಸೂಪರ್ ಜೈಂಟ್ಸ್ ವೇಗಿ ಅವೇಶ್ ಖಾನ್ ಅವರು ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ವಾಗ್ದಂಡನೆಗೆ ಒಳಗಾಗಿದ್ದಾರೆ. ನೀತಿ ಸಂಹಿತೆಯ 2.2 ಹಂತ 1 ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಮತ್ತು ಅನುಮತಿಯನ್ನು ಸ್ವೀಕರಿಸಿದ್ದಾರೆ. ಅವರ ವಿಷಯದಲ್ಲಿ ಔಪಚಾರಿಕವಾಗಿ ಛೀಮಾರಿ ಹಾಕಿ ಎಚ್ಚರಿಕೆ ನೀಡಲಾಗಿದೆ. ಯಾವುದೇ ಹಣಕಾಸಿನ ದಂಡವನ್ನು ವಿಧಿಸಲಾಗಿಲ್ಲ.
ಪಂದ್ಯದ ಕೊನೆಯ ಎಸೆತದ ವೇಳೆ ಸ್ಟ್ರೈಕ್ನಲ್ಲಿದ್ದ ಅವೇಶ್ ಖಾನ್ ಅವರನ್ನು ವಂಚಿಸಿ ಬಾಲ್ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಕೈಸೇರಿತು. ಆದರೆ, ಅಷ್ಟರೊಳಗೆ ವಿಕೆಟ್ನಲ್ಲಿ ಓಡಿದ ರವಿ ಬಿಷ್ಣೋಯಿ ಮತ್ತು ಅವೇಶ್ ಖಾನ್ ಬೈ ಮೂಲಕ ಒಂದು ರನ್ ಕದ್ದರು. ದಿನೇಶ್ ಕಾರ್ತಿಕ್ ನೇರವಾಗಿ ಸ್ಟಂಪ್ಗೆ ಬಾಲ್ ಎಸೆಯಲು ವಿಫಲರಾದರು. ಅದಕ್ಕೂ ಮುನ್ನ ಹರ್ಷಲ್ ಪಟೇಲ್ ರನೌಟ್ ತಪ್ಪಿಸಿಕೊಂಡಿದ್ದರು.