ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟನ್ಸ್ ತಂಡ ಸತತ ಎರಡನೇ ಬಾರಿ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರುವ ಅವಕಾಶವನ್ನು ಸಣ್ಣ ಅಂತರದಲ್ಲಿ ಕಳೆದುಕೊಂಡಿದ್ದು ರನ್ನರ್ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ ಗುಜರಾತ್ ಟೈಟನ್ಸ್ ತಂಡ ಫೈನಲ್ನಲ್ಲಿಯೂ ಕೊನೆಯ ಹಂತದವರೆಗೂ ಪೋಟೋಟಿಯನ್ನು ನೀಡುವಲ್ಲಿ ಯಶಸ್ವಿಯಾಗಿತ್ತು. ಆದರೆ ಅಂತಿಮ ಎರಡು ಎಸೆತಗಳಲ್ಲಿ ಸಿಎಸ್ಕೆ ಆಟಗಾರ ರವೀಂದ್ರ ಜಡೇಜಾ ಒಂದು ಸಿಕ್ಸರ್ ಹಾಗೂ ಬೌಂಡರಿ ಸಿಡಿಸುವ ಮೂಲಕ ಧೋನಿ ಪಡೆ ಮತ್ತೊಮ್ಮೆ ಚಾಂಪಿಯನ್ ಆಗಲು ಕಾರಣವಾದರು. ಆದರೆ ಅಂತಿಮ ಓವರ್ನ ಕೊನೆಯ ಎರಡು ಎಸೆತಗಳಲ್ಲಿ 10 ರನ್ ನೀಡಿದ ಹೊರತಾಗಿಯೂ ಗುಜರಾತ್ ಟೈಟನ್ಸ್ ತಂಡದ ವೇಗಿ ಮೋಹಿತ್ ಶರ್ಮಾ ಬಗ್ಗೆ ಎಲ್ಲೆಡೆಯಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಮೋಹಿತ್ ಶರ್ಮಾ ಈ ಬಾರಿಯ ಟೂರ್ನಿಯಲ್ಲಿ ಗುಜರಾತ್ ಟೈಟನ್ಸ್ ಪರವಾಗಿ ಅಮೋಘ ಪ್ರದರ್ಶನ ನೀಡಿ ತಂಡದ ಯಶಸ್ಸಿಗೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. 13 ಪಂದ್ಯಗಳನ್ನು ಆಡಿದ ಅವರು 27 ವಿಕೆಟ್ಗಳನ್ನು ಸಂಪಾದಿಸಿದ್ದಾರೆ. ಫೈನಲ್ ಪಂದ್ಯದಲ್ಲಿಯೂ ಅವರು ಅದ್ಭುತ ಪ್ರದರ್ಶನ ನೀಡಿ ಮೂರು ವಿಕೆಟ್ ಕಬಳಿಸಿದ್ದರೂ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಕೊನೆಯ ಎರಡು ಎಸೆತಗಳಲ್ಲಿ ಸಿಕ್ಸರ್ ಹಾಗೂ ಬೌಂಡರಿ ಸಿಡಿಸಿದ ರವೀಂದ್ರ ಜಡೇಜಾ ಜಿಟಿ ತಂಡದ ವಿರೋಚಿತ ಸೋಲಿಗೆ ಕಾರಣವಾದರು.

ಕೊನೆಯ ಓವರ್ನಲ್ಲಿ ಸಿಎಸ್ಕೆ ಗೆಲುವಿಗೆ 15 ರನ್ಗಳ ಅಗತ್ಯವಿತ್ತು. ಮೋಹಿತ್ ಶರ್ಮಾ ಎಸೆದ ಈ ಓವರ್ನಲ್ಲಿ ಮೊದಲ ನಾಲ್ಕು ಎಸೆತಗಳಲ್ಲಿ ಕೇವಲ 3 ರನ್ ನೀಡಿ ಅದ್ಭುತ ನಿಯಂತ್ರಣ ಸಾಧಿಸಿದ್ದರು. ಆದರೆ ಕೊನೆಯ ಎರಡು ಎಸೆತಗಳಲ್ಲಿ ಮೋಹಿತ್ ಒಂದು ಸಿಕ್ಸರ್ ಹಾಗೂ ಬೌಂಡರಿ ಬಿಟ್ಟುಕೊಡುವ ಮೂಲಕ 10 ರನ್ ನೀಡಿದರು. ಹೀಗಾಗಿ ಜಿಟಿ ಸೋಲು ಕಾಣುವಂತಾಯಿತು. ಆದರೆ ಈ ಕೊನೆಯ ಎರಡು ಎಸೆತಗಳನ್ನು ಎಸೆಯುವ ಮುನ್ನ ನಾಯಕ ಹಾರ್ದಿಕ್ ಪಾಂಡ್ಯ ನಡೆದುಕೊಂಡ ರೀತಿ ವೇಗಿ ಮೋಹಿತ್ ಶರ್ಮಾ ಲಯ ಕಳೆದುಕೊಳ್ಳಲು ಕಾಣವಾಯಿತು ಎಂದಿದ್ದಾರೆ ಸುನಿಲ್ ಗವಾಸ್ಕರ್.
"ಮೋಹಿತ್ ಶರ್ಮಾ ಮೊದಲ ಮೂರ್ನಾಲ್ಕು ಎಸೆತಗಳನ್ನು ಅದ್ಭುತವಾಗಿ ಮಾಡಿದರು. ಅದಾದ ಬಳಿಕ ಓವರ್ನ ಮಧ್ಯದಲ್ಲಿಯೇ ನೀರನ್ನು ಅವರತ್ತ ಕಳುಹಿಸಲಾಯಿತು. ಬಳಿಕ ನಾಯಕ ಹಾರ್ದಿಕ್ ಪಾಂಡ್ಯ ಅವರಲ್ಲಿ ಮಾತನಾಡಿದರು. ಬೌಲರ್ ಓರ್ವ ಅಷ್ಟು ಅದ್ಭುತವಾಗಿ ಬೌಲಿಂಗ್ ಮಾಡುತ್ತಿರುವಾಗ ಮಾನಸಿಕವಾಗಿಯೂ ಆತ ಅದೇ ಲಯದಲ್ಲಿರುತ್ತಾರೆ. ಆಗ ಆತನಲ್ಲಿ ಯಾರೂ ಏನನ್ನೂ ಹೇಳಬಾರದು. ಹೆಚ್ಚೆಂದರೆ ಚೆನ್ನಾಗಿ ಬೌಲಿಂಗ್ ಮಾಡುತ್ತಿದ್ದೀಯಾ ಎಂದು ಪ್ರಶಂಸಿಬಹುದು. ಅವರ ಬಳಿಗೆ ಹೋಗಿ ಅವರಲ್ಲಿ ಮಾತುಕತೆ ನಡೆಸುವುದರಿಂದ ಆತ ತನ್ನ ಗಮನ ಕಳೆದುಕೊಳ್ಳಬಹುದು. ಆತ ಅಷ್ಟು ಏಕಾಗ್ರಥೆಯಲ್ಲಿದ್ದಾಗ ಅವರು ನಡೆದುಕೊಂಡ ರೀತಿ ಸರಿ ಎಂದು ನನಗೆ ಅನಿಸುವುದಿಲ್ಲ ಅದಾದ ಬಳಿಕವೇ ಆತನ ಚೆಂಡಿನಿಂದ ರನ್ಗಳು ಹರಿದುಹೋಯಿತು" ಎಂದಿದ್ದಾರೆ ಸುನಿಲ್ ಗವಾಸ್ಕರ್.
ಚೆನ್ನೈ ಸೂಪರ್ ಕಿಂಗ್ಸ್ ಆಡುವ ಬಳಗ: ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ, ಮೊಯಿನ್ ಅಲಿ, ಅಂಬಟಿ ರಾಯುಡು, ರವೀಂದ್ರ ಜಡೇಜಾ, ಎಂಎಸ್ ಧೋನಿ (ನಾಯಕ & ವಿಕೆಟ್ ಕೀಪರ್), ದೀಪಕ್ ಚಾಹರ್, ಮಥೀಶ ಪತಿರಣ, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ
ಬೆಂಚ್: ಶಿವಂ ದುಬೆ, ಮಿಚೆಲ್ ಸ್ಯಾಂಟ್ನರ್, ಸುಭ್ರಾಂಶು ಸೇನಾಪತಿ, ಶೇಕ್ ರಶೀದ್, ಆಕಾಶ್ ಸಿಂಗ್, ಭಗತ್ ವರ್ಮಾ, ನಿಶಾಂತ್ ಸಿಂಧು, ಆರ್ ಎಸ್ ಹಂಗರ್ಗೇಕರ್, ಸಿಮರ್ಜೀತ್ ಸಿಂಗ್, ಪ್ರಶಾಂತ್ ಸೋಲಂಕಿ, ಅಜಯ್ ಜಾದವ್ ಮಂಡಲ್, ಸಿಸಂದಾ ಮಗಳ, ಡ್ವೈನ್ ಪ್ರಿಟೋರಿಯಸ್, ಬೆನ್ ಸ್ಟೋಕ್ಸ್
ಗುಜರಾತ್ ಟೈಟನ್ಸ್: ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಶುಬ್ಮನ್ ಗಿಲ್, ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ (ನಾಯಕ), ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೋಹಿತ್ ಶರ್ಮಾ, ನೂರ್ ಅಹ್ಮದ್, ಮೊಹಮ್ಮದ್ ಶಮಿ
ಬೆಂಚ್: ಜೋಶುವಾ ಲಿಟಲ್, ಶ್ರೀಕರ್ ಭರತ್, ಶಿವಂ ಮಾವಿ, ಒಡೆಯನ್ ಸ್ಮಿತ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ದಾಸುನ್ ಶನಕ, ದರ್ಶನ್ ನಲ್ಕಂಡೆ, ಜಯಂತ್ ಯಾದವ್, ಪ್ರದೀಪ್ ಸಾಂಗ್ವಾನ್, ಮ್ಯಾಥ್ಯೂ ವೇಡ್, ಅಭಿನವ್ ಮನೋಹರ್, ಅಲ್ಜಾರಿ ಜೋಸೆಫ್, ಉರ್ವಿಲ್ ಪಟೇಲ್, ಯಶ್ ದಯಾಳ್