ಶುಕ್ರವಾರ, ಮಾರ್ಚ್ 31ರಂದು ನಡೆದ 2023ರ ಐಪಿಎಲ್ನ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಪ್ರಮುಖ ಆಟಗಾರ ಕೇನ್ ವಿಲಿಯಮ್ಸನ್ ಗಾಯಗೊಂಡು ಪಂದ್ಯಾವಳಿಯಿಂದ ಹೊರಬಿದ್ದರು. ಇಂಪ್ಯಾಕ್ಟ್ ಪ್ಲೇಯರ್ ಆಗಿ ಸಾಯಿ ಸುದರ್ಶನ್ ಅವರನ್ನು ಆಡುವ 11ರ ಬಳಗಕ್ಕೆ ಸೇರಿಸಿಕೊಳ್ಳಲಾಯಿತು.
ಗುಜರಾತ್ ಟೈಟನ್ಸ್ ಆಡಿದ ಎರಡು ಪಂದ್ಯಗಳಲ್ಲಿ ತಂಡದ ಗೆಲುವಿನಲ್ಲಿ ಸಾಯಿ ಸುದರ್ಶನ್ ಪ್ರಮುಖ ಪಾತ್ರ ವಹಿಸಿದ್ದಾರೆ. ಅದಕ್ಕಾಗಿ ಭಾರತದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಅವರು ಯುವ ಬ್ಯಾಟರ್ ಸಾಯಿ ಸುದರ್ಶನ್ ಅವರ ಪ್ರಸ್ತುತ ಐಪಿಎಲ್ನ ಪ್ರದರ್ಶನವನ್ನು ಶ್ಲಾಘಿಸಿದ್ದಾರೆ.

IPL 2023: ರಾಜಸ್ಥಾನ ರಾಯಲ್ಸ್ vs ಪಂಜಾಬ್ ಕಿಂಗ್ಸ್ ಫ್ಯಾಂಟಸಿ ಡ್ರೀಮ್ ಟೀಂ
"ಸಾಯಿ ಸುದರ್ಶನ್ ಟಿಎನ್ಪಿಎಲ್ನಲ್ಲೂ ಉತ್ತಮ ಬ್ಯಾಟಿಂಗ್ ಮಾಡಿದ್ದರು. ಐಪಿಎಲ್ಗಿಂತ ಟಿಎನ್ಪಿಎಲ್ನಲ್ಲಿ ಅವರ ಸಂಭಾವನೆ ಹೆಚ್ಚಾಗಿದೆ. ಕಳೆದ ಒಂದು ವರ್ಷದಲ್ಲಿ ಅವರು ಗಳಿಸಿದ ಅನುಭವವನ್ನು ನೋಡುವುದು ಅತ್ಯಂತ ಸಂತೋಷವಾಗಿದೆ. ಒಬ್ಬರ ನಷ್ಟವು ಇನ್ನೊಬ್ಬರಿಗೆ ಲಾಭವಾಗಿದೆ," ಎಂದು ಇರ್ಫಾನ್ ಪಠಾಣ್ ಅವರು ಕೇನ್ ವಿಲಿಯಮ್ಸನ್ ಗಾಯಗೊಂಡು ಹೊರಬಿದ್ದಿದ್ದರಿಂದ ಸಾಯಿ ಸುದರ್ಶನ್ ಅವರಿಗೆ ಆಡಲು ಮತ್ತು ಪ್ರತಿಭೆ ತೋರಿಸಲು ಅವಕಾಶ ಸಿಕ್ಕಿತು ಎಂದು ತಿಳಿಸಿದರು.

"ಕೇನ್ ವಿಲಿಯಮ್ಸನ್ ಅವರಿಗೆ ನಷ್ಟವಾದರೆ, ಯುವ ಆಟಗಾರ ಸಾಯಿ ಸುದರ್ಶನ್ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡರು. ಎಡಗೈ ಬ್ಯಾಟರ್ ಆಗಿದ್ದರಿಂದ ಗುಜರಾತ್ ಟೈಟನ್ಸ್ ತಂಡಕ್ಕೆ ತುಂಬಾ ಉಪಯುಕ್ತವಾಗುತ್ತಾರೆ. 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ ಎದುರಾಳಿ ಬೌಲರ್ಗಳಿಗೆ ಗೊಂದಲವಾಗುತ್ತದೆ," ಎಂದು ಇರ್ಫಾನ್ ಪಠಾಣ್ ತಿಳಿಸಿದರು.

ಸಾಯಿ ಸುದರ್ಶನ್ ಆಟವನ್ನು ಮೆಚ್ಚಿದ ಕನ್ನಡಿಗ ಅನಿಲ್ ಕುಂಬ್ಳೆ
ಭಾರತ ತಂಡದ ಮಾಜಿ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಅವರು ಗುಜರಾತ್ ಟೈಟನ್ಸ್ ತಂಡದ ಯುವ ಆಟಗಾರ ಸಾಯಿ ಸುದರ್ಶನ್ ಅವರ ಪ್ರದರ್ಶನವನ್ನು ಮೆಚ್ಚಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸಾಯಿ ಸುದರ್ಶನ್ 48 ಎಸೆತಗಳಲ್ಲಿ ಅಜೇಯ 62 ರನ್ ಗಳಿಸಿ ತಮ್ಮ ತಂಡದ ಗೆಲುವಿಗೆ ಕಾರಣರಾದರು ಮತ್ತು ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದರು.
"ಸಾಯಿ ಸುದರ್ಶನ್ ಅತ್ಯಂತ ಸಂಘಟಿತ ಆಟಗಾರನಂತೆ ಕಾಣುತ್ತಿದ್ದರು. ವೇಗದ ಬೌಲಿಂಗ್, ಸ್ವಿಂಗ್ ವಿರುದ್ಧ ಉತ್ತಮ ಬ್ಯಾಟಿಂಗ್ ಮಾಡಿದರು. ಆತ ಮೊದಲ ಪಂದ್ಯಕ್ಕೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದು, ತಂಡಕ್ಕೆ ಪಂದ್ಯ ವಿಜೇತ ಆಟವಾಡಿದರು," ಎಂದು ಪಂಜಾಬ್ ಕಿಂಗ್ಸ್ ತಂಡದ ಮಾಜಿ ಕೋಚ್ ಕೂಡ ಆಗಿರುವ ಅನಿಲ್ ಕುಂಬ್ಳೆ ಹೇಳಿದರು.