
ಐಪಿಎಲ್ ಆರಂಭಕ್ಕೆ ಕ್ಷಣಗಣನೆ ಆರಂಬವಾಗಿರುವ ಸಂದರ್ಭದಲ್ಲಿ ನಾನಾ ರೀತಿಯ ವಿಶ್ಲೇಷಣೆಗಳು, ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಕ್ರಿಕೆಟ್ ವಿಶ್ಲೇಷಕರು ತಮ್ಮದೇ ರೀತಿಯಲ್ಲಿ ಅನೇಕ ವಿಧದ ಭವಿಷ್ಯಗಳನ್ನು ನುಡಿಯುತ್ತಿದ್ದಾರೆ. ಈ ಬಾರಿಯ ಐಪಿಎಲ್ನಲ್ಲಿ ಯಾವ ತಂಡ ಗೆಲುವು ಸಾಧಿಸಬಹುದು ಎಂಬುದರ ಬಗ್ಗೆ ಸಾಕಷ್ಟು ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದು ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಕೂಡ ತಮ್ಮ ವಿಶ್ಲೇಷಣೆ ಮಾಡಿದ್ದಾರೆ.
ಈ ಬಾರಿಯ ಐಪಿಎಲ್ನಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡ ಗೆಲುವು ಸಾಧಿಸಲಿದೆ ಎಂದು ಇರ್ಫಾನ್ ಪಠಾಣ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತಮ್ಮ ಈ ಅನಿಸಿಕೆಗೆ ಅವರು ಮೂರು ಪ್ರಮುಖ ಕಾರಣಗಳನ್ನು ಕೂಡ ನೀಡಿದ್ದಾರೆ. ಈ ಮೂಲಕ ಸತತ ಎರಡನೇ ಬಾರಿಗೆ ಐಪಿಎಲ್ ಟ್ರೋಫಿ ಗೆಲ್ಲುವ ಅವಕಾಶ ಗುಜರಾತ್ ಟೈಟನ್ಸ್ ತಂಡಕ್ಕೆ ಇದೆ ಎಂದಿದ್ದಾರೆ ಪಠಾಣ್.
ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟನ್ಸ್ ತಂಡ ಈ ಬಾರಿ ಹಾಲಿ ಚಾಂಪಿಯನ್ ಪಟ್ಟದೊಂದಿಗೆ ಕಣಕ್ಕೆ ಇಳಿಯಲಿದೆ. ಕಳೆದ ವರ್ಷ ಚೊಚ್ಚಲ ಪ್ರಯತ್ನದಲ್ಲಿಯೇ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಚಾಂಪಿಯನ್ ಪಟ್ಟಕ್ಕೇರಿರುವ ಗುಜರಾತ್ ಟೈಟನ್ಸ್ ತಂಡಕ್ಕೆ ಈ ಬಾರಿ ಈ ಅಂಶವೇ ಹೆಚ್ಚು ಆತ್ಮವಿಶ್ವಾಸವನ್ನು ನೀಡಲಿದೆ. ಇದು ಹಾರ್ದಿಕ್ ನೇತೃತ್ವದ ತಂಡಕ್ಕೆ ಈ ಬಾರಿ ಟೂರ್ನಿಯಲ್ಲಿ ಮೇಲುಗೈ ಸಾಧಿಸಲು ಮೊದಲ ಕಾರಣವಾಗಲಿದೆ ಎಂದಿದ್ದಾರೆ ಇರ್ಫಾನ್ ಪಠಾಣ್.
ಇನ್ನು ಗುಜರಾತ್ ಟೈಟನ್ಸ್ ಈ ಬಾರಿ ಮತ್ತೊಮ್ಮೆ ಚಾಂಪಿಯನ್ ಪಟ್ಟಕ್ಕೇರಲು ಕಾರಣವಾಗಬಹುದಾದ ಮತ್ತೊಂದು ಅಂಶವೆಂದರೆ ಅದು ಹಾರ್ದಿಕ್ ಪಾಂಡ್ಯ ನಾಯಕತ್ವ ಎಂದಿದ್ದಾರೆ ಪಠಾಣ್. ಕಳೆದ ಬಾರಿ ನಾಯಕತ್ವದ ಅನುಭವವೇ ಇಲ್ಲದೆ ಅದ್ಭುತವಾಗಿ ಮುನ್ನಡೆಸಿ ಮಿಂಚಿದ್ದ ಹಾರ್ದಿಕ್ ಈ ಬಾರಿ ಭಾರತ ರಾಷ್ಟ್ರೀಯ ತಂಡವನ್ನು ಕೂಡ ಮುನ್ನಡೆಸಿದ ಅನುಭವವೊಂದಿಗೆ ಟೂರ್ನಿಗೆ ಕಣಕ್ಕಿಳಿಯಲಿದ್ದಾರೆ.
ಇನ್ನು ಇರ್ಫಾನ್ ಪಠಾಣ್ ಹೇಳಿದ ಮತ್ತೊಂದು ಕಾರಣ ಎಂದರೆ ಸ್ಪಿನ್ನರ್ ರಶೀದ್ ಖಾನ್. ಟಿ20 ಮಾದರಿಯಲ್ಲಿ ಚಾಂಪಿಯನ್ ಆಟಗಾರ ಎನಿಸಿರುವ ರಶೀದ್ ಖಾನ್ ಹಾರ್ದಿಕ್ ಪಡೆಗೆ ಮತ್ತೊಂದು ದೊಡ್ಡ ಅಸ್ತ್ರ ಎನಿಸಿಕೊಂಡಿದ್ದಾರೆ. ರಶೀದ್ ಖಾನ್ ಬೌಲಿಂಗ್ ಮಾತ್ರವಲ್ಲದೆ ಬ್ಯಾಟಿಂಗ್ನಲ್ಲಿಯೂ ಪರಿಣಾಮಕಾರಿಯಾಗಿ ಕೊಡುಗೆ ನೀಡಬಲ್ಲ ಸಾಮರ್ಥ್ಯ ಹೊಂದಿರುವ ಆಟಗಾರ.
ಹಾರ್ದಿಕ್ ಪಾಂಡ್ಯ (ನಾಯಕ), ಶುಭಮನ್ ಗಿಲ್, ರಾಹುಲ್ ತೆವಾಟಿಯಾ, ಮೊಹಮ್ಮದ್ ಶಮಿ, ಶಿವಂ ಮಾವಿ, ಯಶ್ ದಯಾಳ್, ಆರ್ ಸಾಯಿ ಕಿಶೋರ್, ಅಭಿನವ್ ಮನೋಹರ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಜಯಂತ್ ಯಾದವ್, ವಿಜಯ್ ಶಂಕರ್, ಕೆಎಸ್ ಭರತ್ (ವಿಕೆಟ್ ಕೀಪರ್), ಮೋಹಿತ್ ಶರ್ಮಾ, ದರ್ಶನ್ ನಲ್ಕಂಡೆ, ಉರ್ವಿಲ್ ಪಟೇಲ್, ಸಾಯಿ ಸುದರ್ಶನ್, ಪ್ರದೀಪ್ ಸಾಂಗ್ವಾನ್, ರಶೀದ್ ಖಾನ್, ಡೇವಿಡ್ ಮಿಲ್ಲರ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಅಲ್ಜಾರಿ ಜೋಸೆಫ್, ಕೇನ್ ವಿಲಿಯಮ್ಸನ್, ಜೋಶ್ ಲಿಟಲ್, ಓಡಿಯನ್ ಸ್ಮಿತ್, ನೂರ್ ಅಹ್ಮದ್.