
ಕಳೆದ ಬಾರಿಯ ಐಪಿಎಲ್ನಲ್ಲಿ ಕಳಪೆ ಪ್ರದರ್ಶನ ನೀಡಿ 7ನೇ ಸ್ಥಾನವನ್ನು ಪಡೆದುಕೊಂಡಿದ್ದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಈ ಬಾರಿ ಟೂರ್ನಿಯ ಆರಂಬಕ್ಕೂ ಮುನ್ನವೇ ಹಿನ್ನಡೆ ಅನುಭವಿಸಿದೆ. ತಂಡದ ನಾಯಕನಾಗಿದ್ದ ಶ್ರೇಯಸ್ ಐಯ್ಯರ್ ಬೆನ್ನುನೋವಿಗೆ ಒಳಗಾಗಿದ್ದು ಈ ಬಾರಿ ಐಪಿಎಲ್ನಲ್ಲಿ ಆಡುವುದು ಇನ್ನೂ ಅಸ್ಪಷ್ಟವಾಗಿಯೇ ಇದೆ. ಈ ಸಂದರ್ಭದಲ್ಲಿ ಶ್ರೇಯಸ್ ಐಯ್ಯರ್ ಲಭ್ಯತೆಯ ಬಗ್ಗೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಕೋಚ್ ಚಂದ್ರಕಾಂತ್ ಪಂಡಿತ್ ಪ್ರತಿಕ್ರಿಯೆ ನೀಡಿದ್ದಾರೆ.
ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಕೋಚ್ ಚಂದ್ರಕಾಂತ್ ಪಂಡಿತ್ ಶ್ರೇಯಸ್ ಐಯ್ಯರ್ ಈ ಬಾರಿಯ ಐಪಿಎ್ನಲ್ಲಿ ಆಡುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಶ್ರೇಯಸ್ ಐಯ್ಯರ್ ಈ ಐಪಿಎಲ್ನಲ್ಲಿ ಕೆಕೆಆರ್ ಪರವಾಗಿ ಕಣಕ್ಕಿಳಿಯುವ ಭರವಸೆಯಿದೆ ಎಂದಿದ್ದಾರೆ ಕೆಕೆಆರ್ ಕೋಚ್.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಈ ಮುನ್ನ ನಾಯಕತ್ವದ ಜವಾಬ್ಧಾರಿ ವಹಿಸಿಕೊಂಡು ಅನುಭವವಿಲ್ಲದ ನಿತೀಶ್ ರಾಣಾಗೆ ಈ ಜವಾಬ್ಧಾರಿ ನೀಡುವ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ ಕೆಕೆಆರ್ ಫ್ರಾಂಚೈಸಿ. ಈ ಜವಾಬ್ಧಾರಿ ನಿರ್ವಹಿಸಲು ತಾನು ಸಿದ್ದನಿದ್ದೇನೆ ಎಂದಿರುವ ನಿತೀಶ್ ರಾಣಾ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
"ನಾಯಕತ್ವದ ಹೊಣೆಗಾರಿಗೆ ನನಗೆ ಹೊಸತಲ್ಲ. ಕಳೆದ ಎರಡ್ಮೂರು ವರ್ಷಗಳಿಂದ ನಾನು ನಾಯಕತ್ವದ ಗುಂಪಿನಲ್ಲಿದ್ದೇನೆ. ಈ ಬಾರಿ ನನಗೆ ನಾಯಕತ್ವದ ಹಣೆಪಟ್ಟಿ ದೊರೆತಿದೆ. ಕಳೆದ ಎರಡ್ಮೂರು ವರ್ಷಗಳಿಂದ ನಾಯಕತ್ವದ ಗುಂಪಿನಲ್ಲಿರುವ ಕಾರಣ ನಾಯಕತ್ವದ ಜವಾಬ್ಧಾರಿ ಬಂದಿದೆ ಎಂಬ ಕಾರಣಕ್ಕೆ ಹೆಚ್ಚಿನ ಒತ್ತಡವನ್ನು ಹೇರಿಕೊಳ್ಳುವುದಿಲ್ಲ. ಅದು ನನ್ನ ಆಟಕ್ಕೂ ಒಳ್ಳೆಯದಲ್ಲ. ಇದರಲ್ಲಿ ಹೊಸತೇನೂ ಇದೆ ಎಂದು ನನಗೆ ಅನಿಸುತ್ತಿಲ್ಲ. ಜವಾಬ್ಧಾರಿ ವಹಿಸಿಕೊಳ್ಳುವುದೆಂದರೆ ನನಗೆ ಇಷ್ಟ" ಎಂದಿದ್ದಾರೆ ನಿತೀಶ್ ರಾಣಾ.
ಇನ್ನು 29ರ ಹರೆಯದ ನಿತೀಶ್ ರಾಣಾ, ದೇಶೀಯ ಕ್ರಿಕೆಟ್ನಲ್ಲಿ ನಾಯಕತ್ವದ ಅನುಭವ ಹೊಂದಿದ್ದಾರೆ. ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ದೆಹಲಿ ತಂಡವನ್ನು ಮುನ್ನಡೆಸಿದ್ದಾರೆ. ಇನ್ನು ಐಪಿಎಲ್ನಲ್ಲಿ ನಿತೀಶ್ ರಾಣಾ ಕೆಕೆಆರ್ ತಂಡದ ಪರವಾಗಿ 74 ಪಂದ್ಯಗಳನ್ನು ಆಡಿದ್ದು 135.61ರ ಸ್ಟ್ರೈಕ್ರೇಟ್ನಲ್ಲಿ 1744 ರನ್ಗಳನ್ನು ಗಳಿಸಿದ್ದಾರೆ.