
ನಿನ್ನೆ ( ಏಪ್ರಿಲ್ 22 ) ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ 30 ಹಾಗೂ 31ನೇ ಪಂದ್ಯಗಳು ಜರುಗಿದವು. ರಾತ್ರಿ ನಡೆದ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ರನ್ ಹೊಳೆ ಹರಿದರೆ, ಮಧ್ಯಾಹ್ನ ನಡೆದ ಗುಜರಾತ್ ಟೈಟನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ಪಂದ್ಯದಲ್ಲಿ ರನ್ ಬರ ಎದ್ದು ಕಾಣುತ್ತಿತ್ತು.
ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಎರಡೂ ತಂಡಗಳೂ ಸಹ ರನ್ ಗಳಿಸಲಾಗದೇ ಪರದಾಡಿದವು. ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಕೇವಲ 135 ರನ್ಗಳನ್ನು ಗುಜರಾತ್ ಟೈಟನ್ಸ್ ಕಲೆಹಾಕಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಗೆಲ್ಲಲು 136 ರನ್ಗಳ ಸುಲಭ ಗುರಿಯನ್ನು ನೀಡಿತ್ತು.
ಲಕ್ನೋ ಸೂಪರ್ ಜೈಂಟ್ಸ್ ಈ ಅಲ್ಪಮೊತ್ತದ ಗುರಿಯನ್ನೂ ಸಹ ಬೆನ್ನತ್ತಲಾಗದೇ ಮಕಾಡೆ ಮಲಗಿತು. 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 128 ರನ್ ಕಲೆಹಾಕಿದ ಲಕ್ನೋ ಸೂಪರ್ ಜೈಂಟ್ಸ್ ತವರಿನ ಸ್ಟೇಡಿಯಂನಲ್ಲಿಯೇ ಇಷ್ಟೊಂದು ಕಡಿಮೆ ಗುರಿಯನ್ನು ಬೆನ್ನತ್ತಲಾಗದೇ ಮುಖಭಂಗ ಅನುಭವಿಸಿತು. ಇನ್ನು ಚೇಸಿಂಗ್ ಆರಂಭಿಸಿದ ಲಕ್ನೋ ಸೂಪರ್ ಜೈಂಟ್ಸ್ ತಂಡ ಈ ಪಂದ್ಯವನ್ನು ಸುಲಭವಾಗಿ ಗೆಲ್ಲಲಿದೆ ಎಂದು ಊಹಿಸಲಾಗಿತ್ತು.
ಆದರೆ ಆಗಿದ್ದೇ ಬೇರೆ. ಲಕ್ನೋ ಸೂಪರ್ ಜೈಂಟ್ಸ್ ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯವನ್ನು ಸೋತಿದೆ. ಅದರಲ್ಲೂ ತಂಡದ ನಾಯಕ ಕೆಎಲ್ ರಾಹುಲ್ ಆರಂಭಿಕನಾಗಿ ಕಣಕ್ಕಿಳಿದು ಪಂದ್ಯದ ಅಂತಿಮ ಓವರ್ವರೆಗೂ ಬ್ಯಾಟಿಂಗ್ ಮಾಡಿದರೂ ಸಹ ತಂಡವನ್ನು ಗೆಲ್ಲಿಸಲಾಗಲಿಲ್ಲ. 36 ಎಸೆತಗಳಿಗೆ 31 ರನ್ ಬೇಕಾಗಿದ್ದಂತಹ ಪಂದ್ಯ ಕೊನೆಯ 6 ಎಸೆತಗಳಲ್ಲಿ 12 ರನ್ ಬಾರಿಸಬೇಕಾದ ಸ್ಥಿತಿಗೆ ತಲುಪಿತ್ತು. ಇಷ್ಟರಮಟ್ಟಿಗೆ ಲಕ್ನೋ ಸೂಪರ್ ಜೈಂಟ್ಸ್ ನೀರಸ ಬ್ಯಾಟಿಂಗ್ ಮಾಡಿತ್ತು.
ಹೀಗೆ ನಿರಾಸಾದಾಯಕವಾಗಿ ಗೆಲ್ಲಬೇಕಿದ್ದ ಪಂದ್ಯವನ್ನು ಕೈಚೆಲ್ಲಿದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಕ್ರಿಕೆಟ್ ಪ್ರೇಮಿಗಳು ಟ್ರೋಲ್ ಮಳೆ ಸುರಿಸಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ಕೆಎಲ್ ರಾಹುಲ್ ಇನ್ನಿಂಗ್ಸ್ ಕೆಟ್ಟದಾಗಿ ಟ್ರೋಲ್ ಆಗಿದೆ. ಇದೆಲ್ಲದರ ನಡುವೆ ಪಂದ್ಯ ಮುಕ್ತಾಯವಾದ ಬಳಿಕ ಕೆಎಲ್ ರಾಹುಲ್ ಸೋಲಿಗೆ ಕಾರಣವನ್ನು ನೀಡಿದ್ದು, ಇದು ನಗೆಪಾಟಲಿಗೆ ಕಾರಣವಾಗಿದೆ.
ಮಾತು ಆರಂಭಿಸಿದ ಕೆಎಲ್ ರಾಹುಲ್ ನಾವು ಹೇಗೆ ಸೋತೆವೋ ಅರ್ಥವಾಗುತ್ತಿಲ್ಲ, ಆದರೆ ಸೋತಿದ್ದೇವೆ. ಎಲ್ಲಿ ತಪ್ಪು ನಡೆಯಿತು ಎನ್ನುವ ಕಡೆ ನಾನು ಬೆರಳು ತೋರಿಸುವುದಿಲ್ಲ, ಆದರೆ ನಾವು ಈ ದಿನ ಎರಡು ಅಂಕಗಳನ್ನು ಕಳೆದುಕೊಂಡಿದ್ದೇವೆ ಎಂದಿದ್ದಾರೆ. ಕೆಎಲ್ ರಾಹುಲ್ ಹೇಳಿದ ಈ ಸಾಲುಗಳನ್ನು ಕಂಡು ಟ್ರೋಲ್ ಮಾಡಲಾಗ್ತಿದೆ. ತಾನು ಸರಿಯಾಗಿ ಆಡಲಾಗದೇ ಹೇಗಾಯಿತೋ ಗೊತ್ತಿಲ್ಲ ,ತಪ್ಪಿನ ಕಡೆ ಬೆರಳು ಮಾಡಲ್ಲ ಎಂಬ ಹೇಳಿಕೆಗಳನ್ನು ಕೊಡುವುದಕ್ಕಾದರೂ ಹೇಗೆ ಮನಸ್ಸು ಬರುತ್ತೆ ಎಂದು ಟೀಕಿಸಿದ್ದಾರೆ.
ಇನ್ನೂ ಮುಂದುವರಿದು ಮಾತನಾಡಿದ ಕೆಎಲ್ ರಾಹುಲ್ ತಮ್ಮ ತಂಡ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿತು, ಆರಂಭದಲ್ಲಿ ಒಳ್ಳೆಯ ಬ್ಯಾಟಿಂಗ್ ಮಾಡಿತಾದರೂ ಕೊನೆಯ ಓವರ್ಗಳಲ್ಲಿ ಹಿನ್ನಡೆ ಅನುಭವಿಸಿತು, ಗುಜರಾತ್ ತಂಡ ಉತ್ತಮವಾಗಿ ಬೌಲಿಂಗ್ ಮಾಡಿತು. ವಿಕೆಟ್ ಕೈನಲ್ಲಿರುವಾಗ ಬೌಂಡರಿ ಬಾರಿಸಬಹುದಾದ ಅವಕಾಶಗಳನ್ನು ಮಿಸ್ ಮಾಡಿಕೊಂಡೆವು, ಅದೇ ಅಂತಿಮ ಓವರ್ಗಳಲ್ಲಿ ನಮ್ಮ ಮೇಲೆ ಒತ್ತಡವನ್ನು ಹಾಕಿತು ಎಂದರು. ಅಲ್ಲದೇ ಆಡಿರುವ 7 ಪಂದ್ಯಗಳಲ್ಲಿ 8 ಅಂಕಗಳನ್ನು ಪಡೆದಿದ್ದು, ಇನ್ನೂ ದೊಡ್ಡ ಹಾದಿ ಮುಂದಿದೆ ಎಂದು ಕೆಎಲ್ ರಾಹುಲ್ ತಿಳಿಸಿದ್ದಾರೆ.