ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡುವಲ್ಲಿ ಯಶಸ್ವಿಯಾಗಿದೆ. ಆರಂಭದಲ್ಲಿ ಸೂರ್ಯಕುಮಾರ್ ಯಾದವ್ ಸ್ಪೋಟಕ ಬ್ಯಾಟಿಂಗ್ ಅಭಿಮಾನಿಗಳ ಮನಸೂರೆಗೊಳಿಸಿದರೆ ಬಳಿಕ ಗುಜರಾತ್ ತಂಡದ ಪರವಾಗಿ ರಶೀದ್ ಖಾನ್ ನಡೆಸಿದ ಏಕಾಂಗಿ ಹೋರಾಟ ಕೂಡ ಮನರಂಜನೆ ನೀಡಿದೆ. ಈ ಹೈವೋಲ್ಟೇಜ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ 27 ರನ್ಗಳ ಅಂತರದಿಂದ ಗೆಲುವು ಸಾಧಿಸಿದೆ.
ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ನಡೆಸಿದ ಮುಂಬೈ ಇಂಡಿಯನ್ಸ್ ತಂಡ 219 ರನ್ಗಳ ಬೃಹತ್ ಗುರಿ ನೀಡಿತ್ತು. ಈ ಬೃಹತ್ ಮೊತ್ತವನ್ನು ಬೆನ್ನಟ್ಟಲು ಆರಂಬಿಸಿದ ಗುಜರಾತ್ ಟೈಟನ್ಸ್ ತಂಡಕ್ಕೆ ಆರಂಭಿಕ ಆಘಾತವುಂಟಾಯಿತು. ಅಗ್ರ ಕ್ರಮಾಂಕದ ಪ್ರಮುಖ ಆಟಗಾರರೆಲ್ಲಾ ಅಲ್ಪಮೊತ್ತಕ್ಕೆ ವಿಕೆಟ್ ಕಳೆದುಕೊಂಡ ಕಾರಣ ಜಿಟಿ ತಂಡ 55 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು.

ನಂತರ ಡೇವಿಡ್ ಮಿಲ್ಲರ್ ಸ್ಪಿಟಕ ಪ್ರದರ್ಶನ ನೀಡಿದ ಪರಿಣಾಮ ಸಣ್ಣ ಚೇತರಿಕೆಯನ್ನು ಕಂಡಿತು ಜಿಟಿ. ಆದರೆ ತಂಡ 100 ರನ್ಗಳಿಸಿದ ವೇಳೆಗೆ 12ನೇ ಓವರ್ನ ಮುಕ್ತಾಯದಲ್ಲಿ ಮಿಲ್ಲರ್ ತಮ್ಮ ವಿಕೆಟ್ ಕಳೆದುಕೊಂಡರು. ಅದಾದ ಬಳಿಕ ಮತ್ತೆ ಕುಸಿತ ಕಂಡ ಟೈಟನ್ಸ್ ರಾಹುಲ್ ತೆವಾಟಿಯಾ ಹಾಗೂ ನೂರ್ ಅಹ್ಮದ್ ವಿಕೆಟನ್ನು ಕೂಡ ಕಳೆದುಕೊಂಡಿತು. ಈ ಸಂದರ್ಭದಲ್ಲಿ ಗುಜರಾತ್ ಟೈಟನ್ಸ್ ತಂಡದ ಸ್ಕೋರ್ 103 ರನ್ಗಳಿಗೆ 8 ವಿಕೆಟ್. ಆದರೆ ಗುಜರಾತ್ ಟೈಟನ್ಸ್ ತಂಡದ ನಿಜವಾದ ಆಟ ಆರಂಭವಾಗಿದ್ದೇ ಅಲ್ಲಿಂದ!
ಈ ಹೈಸ್ಕೋರಿಂಗ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಭಾರೀ ಅಂತರದಿಮದ ಸೋಲು ಅನುಭವಿಸುವುದು ನಿಚ್ಚಳವಾಗಿತ್ತು. ಆದರೆ ರಶೀದ್ ಖಾನ್ ಕ್ರಿಕೆಟ್ ಅಭಿಮಾನಿಗಳು ನಿಬ್ಬೆರಗಾಗುವಂತಾ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದರು. ಅಲ್ಜಾರಿ ಜೋಸೆಪ್ ಜೊತೆಗೆ ಬರೊಬ್ಬರಿ 88 ರನ್ಗಳ ಜೊತೆಯಾಟವನ್ನು ಆಡಿದ ರಶೀದ್ ಖಾನ್ ತಂಡದ ಮೊತ್ತವನ್ನು 191ಕ್ಕೇರಿಸಿದರು. ಇದರಲ್ಲಿ ಅಲ್ಜಾರಿ ಜೋಸೆಫ್ ಪಾಲು 7 ರನ್ ಮಾತ್ರ. ಕೇವಲ 31 ಎಸೆತ ಎದುರಿಸಿದ ರಶೀದ್ ಖಾನ್ 3 ಬೌಂಡರಿ ಹಾಗೂ 10 ಭರ್ಜರಿ ಸಿಕ್ಸರ್ ಸಿಡಿಸಿ 79 ರನ್ ಕಲೆಹಾಕಿದರು. 246.88ರ ಸ್ಟ್ರೈಕ್ರೆಟ್ನಲ್ಲಿ ಬ್ಯಾಟ್ ಬೀಸಿ ಅಬ್ಬರಿಸಿದ್ದಾರೆ ಅಫ್ಘನ್ ಮೂಲದ ಈ ಆಟಗಾರ.
ಅಂತಿಮವಾಗಿ ಈ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ 27 ರನ್ಗಳ ಅಂತರದ ಸೋಲು ಕಂಡಿದೆ. ಈ ಮೂಲಕ ಅಗ್ರಸ್ಥಾನದಲ್ಲಿರುವ ಜಿಟಿ ತಂಡ ಈ ಬಾರಿಯ ಐಪಿಎಲ್ನಲ್ಲಿ 4ನೇ ಸೋಲು ಅನುಭವಿಸಿದಂತಾಗಿದೆ. ಮುಂಬೈ ಇಂಡಿಯನ್ಸ್ ತಂಡ ಟೂರ್ನಿಯಲ್ಲಿ 7ನೇ ಗೆಲುವು ಸಾಧಿಸಿದ್ದು ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ.
ಇನ್ನು ಇದಕ್ಕೂ ಮುನ್ನ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸಿದ ಮುಂಬೈ ಇಂಡಿಯನ್ಸ್ ತಂಡಕ್ಕೆ ಉತ್ತಮ ಆರಂಭ ದೊರೆಯಿತು. ಇಶಾನ್ ಕಿಶನ್ ಹಾಗೂ ರೋಹಿತ್ ಶರ್ಮಾ ಜೋಡಿ ಮೊದಲ ವಿಕೆಟ್ಗೆ 61 ರನ್ಗಳ ಜೊತೆಯಾಟ ನೀಡಿದರು. ಆದರೆ 7ನೇ ಓವರ್ನಲ್ಲಿ ಈ ಇಬ್ಬರು ಆಟಗಾರರು ಕೂಡ ರಶೀದ್ ಖಾನ್ಗೆ ವಿಕೆಟ್ ಒಪ್ಪಿಸುವ ಮೂಲಕ ಮುಂಬೈ ಇಂಡಿಯನ್ಸ್ ಸಂಕಷ್ಟಕ್ಕೆ ಸಿಲುಕುವ ಸೂಚನೆಯಿತ್ತು. ಆದರೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಮತ್ತೆ ಆಧಾರವಾಗುದ್ದು ಸೂರ್ಯಕುಮಾರ್ ಯಾದವ್.
ಈ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಏಕಾಂಗಿಯಾಗಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದು ತಂಡ 216 ರನ್ಗಳ ಬೃಹತ್ ಮೊತ್ತವನ್ನು ಗಳಿಸಲು ಕಾರಣವಾದರು. ಕೇವಲ 49 ಎಸೆತಗಳನ್ನು ಎದುರಿಸಿದ ಸೂರ್ಯಕುಮಾರ್ 210.20 ಸ್ಟ್ರೈಕ್ರೇಟ್ನಲ್ಲಿ ಬರೊಬ್ಬರಿ 103 ರನ್ಗಳಿಸಿದ್ದಾರೆ. ಇದರಲ್ಲಿ 11 ಬೌಂಡರಿ ಹಾಗೂ 6 ಸಿಕ್ಸರ್ಗಳು ಒಳಗೊಂಡಿತ್ತು. ವಿಷ್ಣು ವಿನೋದ್ 30 ರನ್ಗಳ ಕೊಡುಗೆ ನಿಡುವ ಮೂಲಕ ಸೂರ್ಯಕುಮಾರ್ಗೆ ಕೆಲ ಕಾಲ ಉತ್ತಮ ಸಾಥ್ ನೀಡಿದರು.