ಮುಂಬೈ ಇಂಡಿಯನ್ಸ್ ವಿರುದ್ಧ ಆರ್ಸಿಬಿ ತಂಡ ಆಘಾತಕಾರಿ ಸೋಲು ಕಂಡಿದೆ. 199 ರನ್ಗಳನ್ನು ಗಳಿಸಿಯೂ ಆರ್ಸಿಬಿ ಈ ಪಂದ್ಯವನ್ನು ಕಳೆದುಕೊಂಡಿದ್ದು ಪ್ಲೇಆಫ್ ಹಾದಿಯನ್ನು ದುರ್ಗಮಗೊಳಿಸಿದೆ., ಈ ಸೋಲಿನಿಂದಾಗಿ ಆರ್ಸಿಬಿ ತಂಡ ಮುಂದಿನ ಹಂತಕ್ಕೇರುವುದು ಬಹಳ ಕಠಿಣವಾಗಲಿದೆ. ಬ್ಯಾಟಿಂಗ್ ವಿಭಾಗದಲ್ಲಿ ಆರ್ಸಿಬಿ ಉತ್ತಮ ಪ್ರದರ್ಶನ ನೀಡಿದರೂ ಬೌಲಿಂಗ್ ವಿಭಾಗದಿಂದ ನಿರೀಕ್ಷಿತ ಪ್ರದರ್ಶನ ಬಾರದ ಕಾರಣ ಆರ್ಸಿಬಿ ಈ ಪಂದ್ಯದಲ್ಲಿ ಸೋಲು ಕಾಣುವಂತಾಯಿತು.
ಇನ್ನು ಆರ್ಸಿಬಿ ಈ ಪಂದ್ಯದಲ್ಲಿಯೂ ಈ ಹಿಂದಿನ ಪಂದ್ಯಗಳಲ್ಲಿ ಮಾಡಿದ ತಪ್ಪನ್ನೇ ಪುನರಾವರ್ತಿಸಿದೆ. ಬ್ಯಾಟಿಂಗ್ನಲ್ಲಿ ಅಗ್ರ ಕ್ರಮಾಂಕದ ಆಟಗಾರರನ್ನು ಅವಲಂಬಿಸಿರುವ ಆರ್ಸಿಬಿ ತಂಡಕ್ಕೆ ಈ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಕೆಳ ಕ್ರಮಾಂಕದಲ್ಲಿ ವೇಗವಾಗಿ ರನ್ಗಳಿಸಿದ್ದು ತಂಡದ ಮೊತ್ತ 200ರ ಗಡಿ ತಲುಪಲು ಕಾರಣವಾಯಿತು. ಆದರೆ ಬೌಲಿಂಗ್ನಲ್ಲಿ ಎಂದಿನಂತೆಯೇ ಆರ್ಸಿಬಿ ನೀರಸ ಪ್ರದರ್ಶನ ನೀಡಿದೆ. ಹಾಗಾದರೆ ಈ ಪಂದ್ಯದಲ್ಲಿ ಆರ್ಸಿಬಿ ಸೋಲಿಗೆ ಕಾರಣವಾದ ಮೂರು ಪ್ರಮುಖ ಅಂಶಗಳು ಯಾವುದು? ಇಲ್ಲಿದೆ ಮುಂದೆ ಓದಿ..

ಸೂರ್ಯಕುಮಾರ್ ಸ್ಪೋಟಕ ಆಟ
ಆರ್ಸಿಬಿ ತಂಡದ ಈ ಸೋಲಿಗೆ ಪ್ರಮುಖ ಕಾರಣ ಮುಂಬೈ ಇಂಡಿಯನ್ಸ್ ತಂಡದ ಮಧ್ಯಮ ಕ್ರಮಾಂಕದ ಆಟಗಾರ ಸೂರ್ಯಕುಮಾರ್ ಯಾದವ್ ಅವರ ಸ್ಪೋಟಕ ಪ್ರದರ್ಶನ. ಕಳೆದ ಮೂರ್ನಾಲ್ಕು ಪಂದ್ಯಗಳಲ್ಲಿ ಅಮೋಘ ಫಾರ್ಮ್ನಲ್ಲಿರುವ ಸೂರ್ಯ ಈ ಪಂದ್ಯದಲ್ಲಿಯೂ ತಮ್ಮ ಫಾರ್ಮ್ ಮುಂದುವರಿಸಿದ್ದಾರೆ. ಕೇವಲ 35 ಎಸೆತಗಳನ್ನು ಎದುರಿಸಿದ ಸೂರ್ಯ ಬರೊಬ್ಬರಿ 83 ರನ್ಗಳನ್ನು ಕಲೆಹಾಕಿದರು. ಹೀಗಾಗಿ ಮುಂಬೈ ಇಂಡಿಯನ್ಸ್ಗೆ ಆರ್ಸಿಬಿ ನೀಡಿದ 200 ರನ್ಗಳ ಗುರಿ ಕೂಡ ಸಾಧಾರಣದಂತೆ ಗೋಚರಿಸಿತು. ಹೀಗಾಗಿ 16.3 ಓವರ್ಗಳಲ್ಲಿಯೇ ಮುಂಬೈ ಇಂಡಿಯನ್ಸ್ ಈ ಪಂದ್ಯವನ್ನು ಗೆದ್ದುಕೊಂಡಿದೆ.
ಸೂರ್ಯ-ವಧೇರಾ ಜೊತೆಯಾಟ
ಆರ್ಸಿಬಿ ತಂಡಕ್ಕೆ ಈ ಪಂದ್ಯದಲ್ಲಿ ಗೆಲುವಿಗೆ ಅವಕಾಶವೇ ಇಲ್ಲದಂತೆ ಮಾಡಿದ್ದು ಸೂರ್ಯಕುಮಾರ್ ಯಾದವ್ ಹಾಗೂ ನೇಹಲ್ ವಧೇರಾ ಜೊತೆಯಾಟ. ಆರಂಭಿಕ ಹಿನ್ನಡೆಯ ಬಳಿಕ ಆರ್ಸಿಬಿ 5ನೇ ಓವರ್ನಲ್ಲಿ ಇಶಾನ್ ಕಿಶನ್ ಹಾಗೂ ನಾಯಕ ರೋಹಿತ್ ಶರ್ಮಾ ವಿಕೆಟ್ ಪಡೆಯುವ ಮೂಲಕ ಎದುರಾಳಿ ವಿರುದ್ಧ ಮೇಲುಗೈ ಸಾಧಿಸುವ ಮುನ್ಸೂಚನೆ ನೀಡಿತಾದರೂ ಅದಕ್ಕೆ ಈ ಜೋಡಿ ಅವಕಾಶವನ್ನೇ ನೀಡಲಿಲ್ಲ. ಅದ್ಭುತವಾಗಿ ಇನ್ನಿಂಗ್ಸ್ ಕಟ್ಟುತ್ತಾ ಸಾಗಿದ ಸೂರ್ಯಕುಮಾರ್ ಯಾದವ್ ಜಾಗೂ ನೇಹಲ್ ವಧೇರಾ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟುತ್ತಾ ರನ್ ವೇಗವನ್ನು ಹೆಚ್ಚಿಸಿದರು. ಹೀಗಾಗಿ ಆರ್ಸಿಬಿಗೆ ಗೆಲ್ಲುವ ಎಲ್ಲಾ ಅವಕಾಶಗಳು ಮುಚ್ಚಿಹೋಯಿತು.
ನೀರಸವಾದ ಆರ್ಸಿಬಿ ಬೌಲಿಂಗ್
ಬ್ಯಾಟಿಂಗ್ ಸ್ನೇಹಿ ಪಿಚ್ಗಳಲ್ಲಿ ಆರ್ಸಿಬಿ ಬೌಲರ್ಗಳು ಸ್ವಲ್ಪವೂ ಪರಿಣಾಮಕಾರಿಯಾಗದಿರುವುದು ತಂಡಕ್ಕೆ ದೊಡ್ಡ ಆಘಾತ. ಹೀಗಾಗಿ ಎಷ್ಟೇ ದೊಡ್ಡ ಮೊತ್ತದ ಗುರಿಯನ್ನು ನಿಗದಿಪಡಿಸಿದರೂ ಅದನ್ನು ರಕ್ಷಿಸುವುದು ಆರ್ಸಿಬಿಗೆ ಅಸಾಧ್ಯವಾಗುತ್ತಿದೆ. ಆರಂಭದಲ್ಲಿ ಅಬ್ಬರಿಸಿದ ಇಶಾನ್ ಕಿಶನ್ ಹಾಗೂ ರೋಹಿತ್ ಶರ್ಮಾ ಅವರನ್ನು ಒಂದೇ ಓವರ್ನಲ್ಲಿ ವಟ್ ಮಾಡಿದ ಬಳಿಕವೂ ಎದುರಾಳಿ ತಂಡದ ಮೇಲೆ ಒತ್ತಡ ಹೇರುವಲ್ಲಿ ಆರ್ಸಿಬಿ ಬೌಲರ್ಗಳು ವಿಫಲವಾದರು.