ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಶನಿವಾರ ನಡೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಸೋಲು ಕಂಡಿತು. ಆದರೆ ಈ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಪರವಾಗಿ ಅದ್ಭುತ ಪ್ರದರ್ಶನ ನೀಡಿ ಗಮನಸೆಳೆದ ಆಟಗಾರ ಎಂದರೆ ಅದು ಕೆಕೆಆರ್ ಪರ ಆರಂಭಿಕನಾಗಿ ಕಣಕ್ಕಿಳಿದ ರಹ್ಮನುಲ್ಲಾಹ್ ಗುರ್ಬಾಜ್. ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಗುರ್ಜಾಬ್ ತಂಡದ ಪರವಾಗಿ ಏಕಾಂಗಿ ಹೋರಾಟ ನೀಡಿದರು.
ಈ ಪಂದ್ಯದಲ್ಲಿ ಗುರ್ಬಾಜ್ ಅವರ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನವನ್ನು ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಪ್ರಶಂಸಿಸಿದ್ದಾರೆ. ಈ ಸಂದರ್ಭದಲ್ಲಿ ತನ್ನ ರಾಷ್ಟ್ರೀಯ ತಂಡದ ನಾಯಕ ರಶೀದ್ ಖಾನ್ ಎವರನ್ನು ಗುರ್ಬಾಜ್ ಸಾಧಾರಣ ಜೂನಿಯರ್ ಲೆಗ್ ಸ್ಪಿನ್ನರ್ಗೆ ಬಾರಿಸಿದಂತೆ ಅಬ್ಬರಿಸಿದ್ದಾರೆ ಎಂದು ಮೈಕಲ್ ವಾನ್ ಹೇಳಿದ್ದಾರೆ. ಈ ಪಂದ್ಯದಲ್ಲಿ ಪವರ್ಪ್ಲೇಯ ಕೊನೆಯ ಓವರ್ನಲ್ಲಿ ರಶೀದ್ ಖಾನ್ ಅವರ ಎಸೆತದಲ್ಲಿ ಒಂದು ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿದ್ದ ಗುರ್ಬಾಜ್ ಬಳಿಕ 15ನೇ ಓವರ್ನಲ್ಲಿ ಸತತ ಎರಡು ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ ಒಂದು ಬೌಂಡರಿ ಬಾರಿಸಿದ್ದರು.

"ರಹ್ಮನುಲ್ಲಾಹ್ ಗುರ್ಬಾಜ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಕೆಕೆಆರ್ ತಂಡವನ್ನು ಹೋರಾಟದಲ್ಲಿರುವಂತೆ ಮಾಡಿದ್ದೇ ಅವರು. ಇನ್ನು ರಶೀದ್ ಖಾನ್ ಅವರನ್ನು ಸಾಧಾರಣ ಜೂನಿಯರ್ ಲೆಗ್ ಸ್ಪಿನ್ನರ್ಗೆ ಬಾರಿಸಿದಂತೆ ಬಾರಿಸಿದ್ದಾರೆ. ಮೈದಾನದ ಎಲ್ಲಾ ಭಾಗಕ್ಕೂ ಅವರು ಅಟ್ಟಿದ್ದು ಅದನ್ನು ನೋಡಲು ಬಹಳ ಸುಂದರವಾಗಿತ್ತು" ಎಂದಿದ್ದಾರೆ ಮೈಕಲ್ ವಾನ್.
ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಗುರ್ಬಾಜ್ ಕೇವಲ 39 ಎಸೆತಗಳಲ್ಲಿ 81 ರನ್ ಬಾರಿಸಿದರು. ಐದು ಬೌಂಡರಿ ಹಾಗೂ 7 ಭರ್ಜರಿ ಸಿಕ್ಸರ್ ಸಿಡಿಸಿದ ಅವರು ಕೆಕೆಆರ್ ಪರ ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರದರ್ಶನದ ಪರಿಣಾಮವಾಗಿ ಕೆಕೆಆರ್ ಈ ಪಂದ್ಯದಲ್ಲಿ 179 ರನ್ಗಳನ್ನು ಗಳಿಸಲು ಸಾಧ್ಯವಾಯಿತು. ಈ ಪಂದ್ಯದಲ್ಲಿ ಕೆಕೆಆರ್ ಪರವಾಗಿ ಗುರ್ಬಾಜ್ ಹಾಗೂ ಆಂಡ್ರೆ ರಸೆಲ್ ಹೊರತುಪಡಿಸಿದರೆ ಉಳಿದ ಯಾವುದೇ ಬ್ಯಾಟರ್ನಿಂದಲೂ ಉತ್ತಮ ಪ್ರದರ್ಶನ ಬಾರಲಿಲ್ಲ.
ಇದನ್ನು ಬೆನ್ನಟ್ಟಿದ ಗುಜರಾತ್ ಟೈಟನ್ಸ್ ತಂಡ ಉತ್ತಮ ಆರಂಭವನ್ನು ಪಡೆಯಿತು. ಶುಬ್ಮನ್ ಗಿಲ್ ಭರ್ಜರಿ ಪ್ರದರ್ಶನ ನೀಡಿ 49 ರನ್ಗಳಿಗೆ ಔಟಾದರೆ ಹಾರ್ದಿಕ್ ಪಾಂಡ್ಯ 26 ರನ್ಗಳಿಸಿದರು. ಅಂತಿಮ ಹಂತದಲ್ಲಿ ವಿಜತ್ ಶಂಕರ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದು 24 ಎಸೆತಗಳಲ್ಲಿ 51 ರನ್ ಬಾರಿಸಿ ಅಬ್ಬರಿಸಿದರು. ಈ ಮೂಲಕ ಜಿಟಿ ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದರು. ಮತ್ತೊಂದು ತುದಿಯಲ್ಲಿ ಡೇವಿಡ್ ಮಿಲ್ಲರ್ 32 ರನ್ಗಳಿಸಿ ಅಜೇಯವಾಗುಳಿದರು.
ಇನ್ನು ಈ ಸೋಲಿನ ಬಳಿಕ ಕೆಕೆಆರ್ ನಾಯಕ ನಿತೀಶ್ ರಾಣಾ ಕೂಡ ಬೇಸರ ಹೊರಹಾಕಿದ್ದಾರೆ. "ನಾವು 20-25ರಷ್ಟು ಕಡಿಮೆ ರನ್ಗಳಿಸಿದೆವು. ಇನ್ನು ದೊಡ್ಡ ತಂಡಗಳ ವಿರುದ್ಧದ ಪಂದ್ಯದಲ್ಲಿ ಕ್ಯಾಚ್ಗಳನ್ನು ಕೈಚೆಲ್ಲಿದರೆ ಫಲಿತಾಂಶ ಇದಕ್ಕಿಂತ ಭಿನ್ನವಾಗಿರಲಿದೆ ಎಂದು ನನಗೆ ಅನಿಸುತ್ತಿಲ್ಲ. ಗುರ್ಬಾಜ್ ಹಾಗೂ ರಸೆಲ್ ಹೊರತುಪಡಿಸಿದರೆ ಉಳಿದವರ್ಯಾರಿಂದಲೂ ನಿರೀಕ್ಷಿತ ಪ್ರದರ್ಶನ ಬಾರಲಿಲ್ಲ. ಅಗತ್ಯವಾದ ಜೊತೆಯಾಟ ಬಾರಲೇ ಇಲ್ಲ. 40-50 ರನ್ಗಳ ಜೊತೆಯಾಟ ಬಂದಿದ್ದರೆ ನಮ್ಮ ತಂಡದ ಸ್ಕೋರ್ ಇನ್ನೂ ಹೆಚ್ಚಿನದಾಗಿರುತ್ತಿತ್ತು. ಇನ್ನು ಮಧ್ಯಮ ಓವರ್ಗಳನ್ನು ಅವರನ್ನು ಸುಮ್ಮನಿರಿಸಬೇಕಾಗಿತ್ತು. ಇಂಥಾ ತಂಡಗಳ ವಿರುದ್ಧ ಸಿಕ್ಕ ಅವಕಾಶವನ್ನು ಬಳಸಿಕೊಳ್ಳದಿದ್ದರೆ ನಾವು ಸೋಲನ್ನೂ ಕಾಣಲೇಬೇಕಾಗುತ್ತದೆ" ಎಂದಿದ್ದಾರೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ನಿತೀಶ್ ರಾಣಾ.