
ಡಿಸೆಂಬರ್ 23ರಂದು ಕೇರಳದ ಕೊಚ್ಚಿಯಲ್ಲಿ ನಡೆಯಲಿರುವ 2023ರ ಐಪಿಎಲ್ ಟೂರ್ನಿಗಾಗಿ ಮಿನಿ ಹರಾಜು ಪ್ರಕ್ರಿಯೆಗೆ ಮುನ್ನ ಮುಂಬೈ ಇಂಡಿಯನ್ಸ್ (ಎಂಐ) ಕೆಲವು ಪ್ರಮುಖ ಆಟಗಾರರನ್ನು ಖರೀದಿಸಲು ಎದುರು ನೋಡುತ್ತಿದೆ.
ಕೊಚ್ಚಿಯಲ್ಲಿ ನಡೆಯಲಿರುವ 2023ರ ಇಂಡಿಯನ್ ಪ್ರೀಮಿಯರ್ ಲೀಗ್ ಮಿನಿ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಪ್ರಮುಖ ಸ್ಪಿನ್ನರ್ಗಳಿಗಾಗಿ ಹುಡುಕಾಟ ನಡೆಸಲಿದೆ ಎಂದು ಮಾಜಿ ಪಂಜಾಬ್ ಕಿಂಗ್ಸ್ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ.
ಜಿಯೋ ಸಿನಿಮಾದೊಂದಿಗೆ ಮಾತನಾಡಿದ ಅನಿಲ್ ಕುಂಬ್ಳೆ ಅವರು, ಸ್ಪಿನ್ನರ್ ಕುಮಾರ್ ಕಾರ್ತಿಕೇಯ ಅವರ ಲಭ್ಯತೆಯ ಹೊರತಾಗಿಯೂ, ಮುಂಬೈ ಇಂಡಿಯನ್ಸ್ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ತಮ್ಮ ಅಡುವ 11ರ ಬಳಗವನ್ನು ಹೆಚ್ಚಿಸಲು ವಿದೇಶಿ ಆಯ್ಕೆಗಳನ್ನು ಹುಡುಕುತ್ತಿದೆ ಎಂದು ತಿಳಿಸಿದರು.

"ಕಳೆದ ಬಾರಿ ಕಳಪೆ ಪ್ರದರ್ಶನ ನೀಡಿದ ಮುಂಬೈ ಇಂಡಿಯನ್ಸ್, ತಮ್ಮ ತಂಡದಲ್ಲಿ ಪ್ರಮುಖ ಸ್ಪಿನ್ ಬೌಲರ್ ಹೊಂದಿಲ್ಲ. ಕುಮಾರ್ ಕಾರ್ತಿಕೇಯ ಕಳೆದ ವರ್ಷ ಉತ್ತಮ ಪ್ರದರ್ಶನ ನೀಡಿದರು. ಆದರೆ ಅನುಭವಿ ಭಾರತೀಯ ಸ್ಪಿನ್ನರ್ಗಳನ್ನು ಆಯ್ಕೆ ಮಾಡಿಕೊಳ್ಳಬೇಕಾದರೆ ಬಹುಶಃ ಅಮಿತ್ ಮಿಶ್ರಾ ಅಥವಾ ಪಿಯೂಷ್ ಚಾವ್ಲಾ ಕಡೆ ನೋಡಬೇಕಾಗುತ್ತದೆ. ಅದು ಅಗುತ್ತದೆ ಎಂದು ನಾನು ಭಾವಿಸುವುದಿಲ್ಲ. ಬಹುಶಃ, ವಿದೇಶಿ ಸ್ಪಿನ್ನರ್ ಕಡೆ ಹೋಗುವುದು ಅವರಿಗೆ ಏಕೈಕ ಆಯ್ಕೆಯಾಗಿದೆ. ಅದು ಯಾರಾಗಿರುತ್ತಾರೆ ಎಂದರೆ, ಇಂಗ್ಲೆಂಡ್ನ ಆದಿಲ್ ರಶೀದ್, ದಕ್ಷಿಣ ಆಫ್ರಿಕಾದ ತಬ್ರೈಜ್ ಶಮ್ಸಿ ಮತ್ತು ಆಸ್ಟ್ರೇಲಿಯಾದ ಆಡಮ್ ಝಂಪಾ," ಎಂದು ಮಾಜಿ ಸ್ಪಿನ್ನರ್ ಅನಿಲ್ ಕುಂಬ್ಳೆ ಭವಿಷ್ಯ ನುಡಿದರು.
ಇನ್ನು ಇತ್ತೀಚೆಗೆ ವಿಶ್ವ ಕ್ರಿಕೆಟ್ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಜಿಂಬಾಬ್ವೆಯ ಸಿಕಂದರ್ ರಜಾಗೆ ಟಿ20 ವಿಶ್ವಕಪ್ನಿಂದ ವೈಲ್ಡ್ ಕಾರ್ಡ್ ಆಗಲಿದೆ ಎಂದು ಭಾರತದ ಮಾಜಿ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಹೇಳಿದ್ದಾರೆ.

"ನಾನು ಬಹುಶಃ ಸಿಕಂದರ್ ರಜಾ ಕಡೆಗೆ ನೋಡುತ್ತೇನೆ, ಏಕೆಂದರೆ ಅವರು ನಿಮಗೆ ಅದ್ಭುತ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಅನ್ನು ಸಹ ನೀಡಬಲ್ಲರು. ಜೊತೆಗೆ ಅವರ ಸ್ಪಿನ್ ಬೌಲಿಂಗ್ನಲ್ಲಿ ರನ್ ಗಳಿಸುವುದು ಸುಲಭವಲ್ಲ ಮತ್ತು ಅವರು ಇತ್ತೀಚಿನ ದಿನಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ," ಎಂದು ಭಾರತ ತಂಡದ ಮಾಜಿ ನಾಯಕನೂ ಆಗಿರುವ ಅನಿಲ್ ಕುಂಬ್ಳೆ ಅಭಿಪ್ರಾಯಪಟ್ಟರು.
ಐಪಿಎಲ್ ಪಂದ್ಯಾವಳಿಯ ಹಿಂದಿನ ಆವೃತ್ತಿಯಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಅತ್ಯಂತ ಕಳಪೆ ಪ್ರದರ್ಶನ ನೀಡಿ ಮುಖಭಂಗ ಅನುಭವಿಸಿತು. ಮೊದಲಾರ್ಧದಲ್ಲಿ ಯಾವುದೇ ಪಂದ್ಯಗಳನ್ನು ಗೆಲ್ಲಲು ವಿಫಲವಾದ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್, ಟಿಮ್ ಡೇವಿಡ್ನಿಂದಾಗಿ ಮುಂಬೈ ಇಂಡಿಯನ್ಸ್ ಅಂತಿಮ ಪಂದ್ಯಗಳಲ್ಲಿ ಗೆಲುವಿನ ನಗೆ ಕಂಡಿತು. ಆದರೆ ಟೂರ್ನಿಯಿಂದ ಅದಾಗಲೇ ಹೊರಬಿದ್ದಿತ್ತು.