ಭಾರತೀಯ ಕ್ರಿಕೆಟ್ ಅಭಿಮಾನಿಗಳ ಬಹುನಿರೀಕ್ಷಿತ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 16ನೇ ಋತುವಿಗೆ ಅದ್ಧೂರಿ ಸಮಾರಂಭದ ಮೂಲಕ ಚಾಲನೆ ಸಿಕ್ಕಿದ್ದು, ಶುಕ್ರವಾರ, ಮಾರ್ಚ್ 31ರಂದು ಅಹಮದಾಬಾದ್ನ ನರೇಂದ್ರ ಸ್ಟೇಡಿಯಂನಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಎಂಎಸ್ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಇದೇ ವೇಳೆ ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ತನ್ನ ಪ್ರಮುಖ ಬೌಲರ್ ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಆಡುತ್ತಿದೆ. ಬೆನ್ನು ನೋವಿನಿಂದಾಗಿ ಈ ಬಾರಿಯ ಸಂಪೂರ್ಣ ಐಪಿಎಲ್ ಟೂರ್ನಿಯಿಂದ ಹೊರಗುಳಿದಿರುವ ಜಸ್ಪ್ರೀತ್ ಬುಮ್ರಾ ಬದಲಿಗೆ ಬೇರೊಬ್ಬ ಬೌಲರ್ ಸ್ಥಾನ ಪಡೆದಿದ್ದಾರೆ.

2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಜಸ್ಪ್ರೀತ್ ಬುಮ್ರಾ ಬದಲಿಯಾಗಿ ತಮಿಳುನಾಡಿನ ವೇಗದ ಬೌಲರ್ ಸಂದೀಪ್ ವಾರಿಯರ್ ಅವರನ್ನು ಹೆಸರಿಸಿದೆ. ರಣಜಿ ಸೇರಿದಂತೆ ದೇಶೀಯ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವ ಸಂದೀಪ್ ವಾರಿಯರ್ ಮುಂಬೈ ತಂಡದ ಆಯ್ಕೆ ಹೇಗೆ ಸಮರ್ಥನೆ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಭಾರತ ತಂಡದ ಪರ ಆಡಿರುವ ಸಂದೀಪ್ ವಾರಿಯರ್ ಇದುವರೆಗೆ 68 ಟಿ20 ಪಂದ್ಯಗಳನ್ನು ಆಡಿದ್ದು, 62 ವಿಕೆಟ್ ಪಡೆದಿದ್ದಾರೆ. ಅವರು ಈ ಹಿಂದೆ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿ, 5 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. ಸಂದೀಪ್ ವಾರಿಯರ್ ಅವರೊಂದಿಗೆ 50 ಲಕ್ಷ ರೂ.ಗೆ ಸಹಿ ಹಾಕಿದೆ.

ಪದೇಪದೇ ಬೆನ್ನುನೋವಿಗೆ ತುತ್ತಾಗುತ್ತಿರುವ ಜಸ್ಪ್ರೀತ್ ಬುಮ್ರಾ ಕಳೆದ 2022ರ ಸೆಪ್ಟೆಂಬರ್ನಿಂದ ಹೊರಗುಳಿದಿದ್ದಾರೆ. 2022ರ ಏಷ್ಯಾ ಕಪ್, 2022ರ ಟಿ20 ವಿಶ್ವಕಪ್, ದ್ವಿಪಕ್ಷೀಯ ಸರಣಿ, ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಸೇರಿದಂತೆ ಹಲವು ಸರಣಿಗಳನ್ನು ತಪ್ಪಿಸಿಕೊಂಡಿರುವ ಜಸ್ಪ್ರೀತ್ ಬುಮ್ರಾ ಮುಂಬರುವ ಏಕದಿನ ವಿಶ್ವಕಪ್ ವೇಳೆಗೆ ಮರಳುವ ನಿರೀಕ್ಷೆ ಇದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ರಿಷಭ್ ಪಂತ್ ಬದಲಿಗೆ ಅಭಿಷೇಕ್ ಪೊರೆಲ್
ಕಳೆದ ಡಿಸೆಂಬರ್ 2022ರಲ್ಲಿ ನಡೆದ ಭೀಕರ ಕಾರು ಅಪಘಾತದ ಗಾಯಗೊಂಡ ರಿಷಭ್ ಪಂತ್ ಇನ್ನೂ ಚೇತರಿಸಿಕೊಳ್ಳುತ್ತಿದ್ದು, 2023ರ ಐಪಿಎಲ್ ಪಂದ್ಯಾವಳಿಯಿಂದ ಹೊರಬಿದ್ದಿದ್ದಾರೆ. ಇದೀಗ ಪಂತ್ ಬದಲಿಗೆ ಡೇವಿಡ್ ವಾರ್ನರ್ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡವು ರಿಷಭ್ ಪಂತ್ ಬದಲಿಗೆ ಬಂಗಾಳದ ವಿಕೆಟ್ ಕೀಪರ್ ಅಭಿಷೇಕ್ ಪೊರೆಲ್ ಅವರನ್ನು ಆಯ್ಕೆ ಮಾಡಿದೆ. ವಿಕೆಟ್ಕೀಪರ್-ಬ್ಯಾಟರ್ ಆಗಿರುವ ಅಭಿಷೇಕ್ ಪೊರೆಲ್, 3 ಲಿಸ್ಟ್ ಎ ಜೊತೆಗೆ 16 ಪ್ರಥಮ ದರ್ಜೆ ಪಂದ್ಯಗಳನ್ನು ಮತ್ತು ಬಂಗಾಳದ ಪರ ಟಿ20 ಪಂದ್ಯಗಳನ್ನು ಆಡಿದ್ದಾರೆ. ಅಭಿಷೇಕ್ ಪೊರೆಲ್ ಅವರನ್ನು 20 ಲಕ್ಷ ರೂ.ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾಗಿದ್ದಾರೆ.