ಮತ್ತೊಂದು ಐಪಿಎಲ್ ಆವೃತ್ತಿಯಲ್ಲಿಯೂ ಆರ್ಸಿಬಿ ತಂಡ ಟ್ರೋಫಿಯಿಲ್ಲದೆ ತನ್ನ ಅಭಿಯಾನವನ್ನು ಅಂತ್ಯಗೊಳಿಸಿದೆ. ಈ ಬಾರಿಯ ಟೂರ್ನಿಯಲ್ಲಿ ಆರ್ಸೊಬಿ ಪ್ಲೇಆಫ್ ಪ್ರವೇಶಿಸಲು ಕೂಡ ಸಾಧ್ಯವಾಗದೆ ನಿರಾಸೆ ಮೂಡಿಸಿತು. ಮಹತ್ವದ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ತಂಡ ಸೋಲು ಕಾಣುವ ಮೂಲಕ ಲೀಗ್ ಹಂತಕ್ಕೆ ತನ್ನ ಆಟವನ್ನು ಕೊನೆಗೊಳಿಸಿದೆ.
ಈ ವರ್ಷದ ಐಪಿಎಲ್ನಲ್ಲಿ ಆರ್ಸಿಬಿ ಸಾಕಷ್ಟು ನಕಾರಾತ್ನಕ ಅಂಶಗಳನ್ನು ಹೊಂದಿರುವುದು ಸ್ಪಷ್ಟವಾಗಿತ್ತು. ತಂಡ ಕೆಲವೇ ಆಟಗಾರರನ್ನು ಸಂಪೂರ್ಣವಾಗಿ ನೆಚ್ಚಿಕೊಂಡಿತ್ತು. ಸಂಪೂರ್ಣ ತಂಡವಾಗಿ ಆಡಲು ಆರ್ಸಿಬಿ ಸಫಲವಾಗಲೇ ಇಲ್ಲ. ಇನ್ನು ಬೌಲಿಂಗ್ ವಿಭಾಗದಲ್ಲಿ ಸಾಕಷ್ಟು ಕೊರತೆಗಳು ಕಂಡಿದ್ದವು. ಇದೇ ಕಾರಣಕ್ಕಾಗಿ ಸ್ವತಃ ಆರ್ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ನಾವು ಈ ಆವೃತ್ತಿಯಲ್ಲಿ ಟ್ರೋಫಿ ಗಲ್ಲಲು ಅರ್ಹವಾಗಿರಲಿಲ್ಲ ಎಂದು ನೇರವಾಗಿ ಒಪ್ಪಿಕೊಂಡಿದ್ದಾರೆ.

ಇನ್ನು ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಆರ್ಸಿಬಿ ಈ ಇಬ್ಬರು ಆಟಗಾರರ ಸೇವೆಯಿಂದ ವಂಚಿತವಾಗಿದ್ದು ದೊಡ್ಡ ಹಿನ್ನಡೆಗೆ ಕಾರಣವಾಯಿತು. ಆದರೆ ಆರ್ಸಿಬಿಯ ಶ್ರೇಷ್ಠ ಆಟಗಾರರು ಎನಿಸಿಕೊಂಡ ಎಬಿ ಡಿವಲಿಯರ್ಸ್ ಆಗಲಿ, ಕ್ರಿಸ್ ಗೇಲ್ ಆಗಲಿ ಅಲ್ಲ. ಹಾಗಾದರೆ ಆ ಇಬ್ಬರು ಆಟಗಾರರು ಯಾರು? ಮುಂದೆ ಓದಿ..
ಆರ್ಸಿಬಿಗೆ ಹಿನ್ನಡೆಯಾಗಿದ್ದೇ ಇಲ್ಲಿ!
ಈ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿ ತಂಡ ತೀರಾ ಕಳಪೆ ಪ್ರದರ್ಶನವನ್ನೇನೂ ನೀಡಿರಲಿಲ್ಲ. ಆದರೆ ತಂಡದ ಸಮತೋಲನ ಸಂಪೂರ್ಣವಾಗಿ ಕಳೆದುಕೊಂಡಿತ್ತು. ಇದಕ್ಕೆ ತಂಡದ ಆಟಗಾರರ ಆಯ್ಕೆಯಲ್ಲಿ ಮ್ಯಾನೇಜ್ಮೆಂಟ್ ಎಡವಿದ್ದು ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಅಗ್ರ ಕ್ರಮಾಂಕದ ಆಟಗಾರರಾದ ನಾಯಕ ಫಾಫ್ ಡು ಪ್ಲೆಸಿಸ್, ವಿರಾಟಟ್ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ಟೂರ್ನಿಯಲ್ಲಿ ಅಬ್ಬರದ ಪ್ರದರ್ಶನ ನೀಡಿದ್ದರು. ಆದರೆ ಆರ್ಸಿಬಿ ತಂಡದ ಮಧ್ಯಮ ಕ್ರಮಾಂಕ ಸಂಪೂರ್ಣವಾಗಿ ವಿಫಲವಾಗಿತ್ತು. ಈ ಹಂತದಲ್ಲಿ ಆರ್ಸಿಬಿ ತಂಡಕ್ಕೆ ಬಲನೀಡುವ ಆಟಗಾರನ ಕೊರತೆಯಿತ್ತು. ಇನ್ನು ಬೌಲಿಂಗ್ ವಿಭಾಗದಲ್ಲಿಯೂ ಆರ್ಸಿಬಿ ತಂಡಕ್ಕೆ ದೊಡ್ಡ ಮಟ್ಟದ ಹಿನ್ನಡೆಯಾಯಿತು.
ಆರ್ಸಿಬಿಗೆ ಕಾಡಿದ ರಜತ್ ಪಾಟಿದಾರ್ ಅಲಭ್ಯತೆ
ಈ ಬಾರಿಯ ಐಪಿಎಲ್ನಲ್ಲಿ ಯುವ ಆಟಗಾರ ರಜತ್ ಪಾಟಿದಾರ್ ಅಲಭ್ಯತೆ ಆರ್ಸಿಬಿ ತಂಡಕ್ಕೆ ಅತಿಯಾಗಿ ಕಾಡಿದೆ. ತಂಡದ ಅಗ್ರ ಕ್ರಮಾಂಕದ ಆಟಗಾರರನ್ನು ಹೊರತುಪಡಿಸಿ ಉಳಿದ ಆಟಗಾರರು ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದ್ದು ತಂಡಕ್ಕೆ ದೊಡ್ಡ ಹಿನ್ನಡೆಯಾಯಿತು. ಅದರಲ್ಲೂ ಡೆತ್ ಓವರ್ನಲ್ಲಿ ಆರ್ಸಿಬಿ ಬ್ಯಾಟಿಂಗ್ ವಿಭಾಗ ಸಂಪೂರ್ಣವಾಗಿ ವೈಫಲ್ಯ ಕಂಡಿತ್ತು. ಈ ಹಂತದಲ್ಲಿ ರಜತ್ ಪಾಟಿದಾರ್ ಅವರಂಥಾ ಆಟಗಾರ ತಂಡದಲ್ಲಿ ಇದ್ದಿದ್ದರೆ ತಂಡದ ಬ್ಯಾಟಿಂಗ್ ಬಲ ಮತ್ತಷ್ಟು ಹೆಚ್ಚಾಗಿರುತ್ತಿದ್ದರಲ್ಲಿ ಅನುಮಾನವಿಲ್ಲ. ಆದರೆ ಗಾಯದ ಕಾರಣದಿಂದಾಗಿ ರಜತ್ ಪಾಟಿದಾರ್ ಈ ಬಾರಿಯ ಐಪಿಎಲ್ ಟೂರ್ನಿಗೆ ಲಭ್ಯವಾಗಲಿಲ್ಲ.
ಚಾಹಲ್ ಬಗ್ಗೆ ಆರ್ಸಿಬಿ ಮಾಡಿದ್ದು ಅತಿ ಕೆಟ್ಟ ನಿರ್ಧಾರ!
ಇನ್ನು ಆರ್ಸಿಬಿ ತಂಡಕ್ಕೆ ಕಾಡಿದ ಮತ್ತೋರ್ವ ಪ್ರಮುಖ ಆಟಗಾರ ಎಂದರೆ ಅದು ಯುಜುವೇಂದ್ರ ಚಾಹಲ್. ಆರ್ಸಿಬಿ ತಂಡದ ಪ್ರಮುಖ ಸ್ಪಿನ್ ಬೌಲರ್ ಆಗಿದ್ದ ಚಾಹಲ್ ವಿಚಾರವಾಗಿ ಮ್ಯಾನೇಜ್ಮೆಂಟ್ ತೆಗೆದುಕೊಂಡ ಕೆಟ್ಟ ನಿರ್ಧಾರ ಆರ್ಸಿಬಿ ಅಭಿಮಾನಿಗಳನ್ನು ಸತತ ಎರಡನೇ ಆವೃತ್ತಿಯಲ್ಲಿಯೂ ಕಾಡುವಂತೆ ಮಾಡಿದೆ. ಕಳೆದ ವರ್ಷದ ಆವೃತ್ತಿಗೂ ಮುನ್ನ ನಡೆದ ಮೆಗಾ ಹರಾಜಿನಲ್ಲಿ ಯುಜುವೇಂದ್ರ ಚಾಹಲ್ ಅವರನ್ನು ತಂಡದಿಂದ ಕೈಬಿಡುವ ನಿರ್ಧಾರವನ್ನು ಆರ್ಸಿಬಿ ಮ್ಯಾನೇಜ್ಮೆಂಟ್ ಮಾಡಿತ್ತು. ಅದ್ಭುತ ದಾಖಲೆಯನ್ನು ಹೊಂದಿದ್ದರೂ ಮ್ಯಾನೇಜ್ಮೆಂಟ್ನ ಈ ನಿರ್ಧಾರ ಈಗಲೂ ಪ್ರಶ್ನಾರ್ಥಕವಾಗಿಯೇ ಉಳಿದುಕೊಂಡಿದೆ. ಚಾಹಲ್ ಬದಲಿಗೆ ಹಸರಂಗ ಅವರನ್ನು ತಂಡಕ್ಕೆ ಸೇರಿಕೊಂಡಿದ್ದರೂ ವಿದೇಶಿ ಆಟಗಾರನಾಗಿರುವ ಕಾರಣ ತಂಡದ ಹೊಂದಾಣಿಕೆಯಲ್ಲಿ ದೊಡ್ಡ ಹಿನ್ನಡೆಯಾಗಿದೆ.
ಯುಜುವೇಂದ್ರ ಚಾಹಲ್ ಬದಲಿಗೆ ಆರ್ಸಿಬಿ ದುಬಾರಿ ಮೊತ್ತಕ್ಕೆ ವನಿಂದು ಹಸರಂಗ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಿತ್ತು. ಆಲ್ರೌಂಡರ್ ಎಂಬ ಕಾರಣದಿಂದಾಗಿ ತಂಡಕ್ಕೆ ಹೆಚ್ಚಿನ ನೆರವು ದೊರೆಯಬಹುದು ಎಂಬ ನಿರೀಕ್ಷೆಯಿತ್ತಾದರೂ ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಹಸರಂಗ ಬ್ಯಾಟಿಂಗ್ನಲ್ಲಿ ಸಂಪೂರ್ಣ ವಿಫಲವಾದರು. ಹಸರಂಗ ವಿದೇಶಿ ಆಟಗಾರನ ಕೋಟಾದಲ್ಲಿ ಆಡುವ ಕಾರಣ ಇದು ತಂಡದ ಹೊಂದಾಣಿಕೆಗೆ ದೊಡ್ಡ ಹಿನ್ನಡೆಯಾಯಿತು.