
ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಹರ್ಷಲ್ ಪಟೇಲ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಅತ್ಯಂತ ದುಬಾರಿ ಭಾರತೀಯ ಆಟಗಾರರಲ್ಲಿ ಒಬ್ಬರಾದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡ ಹರ್ಷಲ್ ಪಟೇಲ್ರನ್ನು 2022ರ ಮೆಗಾ-ಹರಾಜಿನಲ್ಲಿ 10.75 ಕೋಟಿ ರೂಪಾಯಿಗಳ ದೊಡ್ಡ ಮೊತ್ತಕ್ಕೆ ಖರೀದಿಸಿತು.
ಮೆಗಾ-ಹರಾಜಿಗೂ ಹಿಂದಿನ ಋತುವಿನಲ್ಲಿ ಪರ್ಪಲ್ ಕ್ಯಾಪ್ ಹೊಂದಿದ್ದ ಹರ್ಷಲ್ ಪಟೇಲ್ ಐಪಿಎಲ್ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಎರಡರಲ್ಲೂ ವೃತ್ತಿಜೀವನದ ಉತ್ತುಂಗ ಸ್ಥಾನದಲ್ಲಿದ್ದರು.
ಆರ್ಸಿಬಿ ಪಾಡ್ಕ್ಯಾಸ್ಟ್ನ ಇತ್ತೀಚಿನ ಸಂಚಿಕೆಯಲ್ಲಿ 2022ರ ಮೆಗಾ-ಹರಾಜಿನ ಸಮಯದಲ್ಲಿ ತಮ್ಮ ಅನುಭವದ ಬಗ್ಗೆ ಮಾತನಾಡಿದ ಹರ್ಷಲ್ ಪಟೇಲ್, ಹಿಂದಿನ ಋತುವಿನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರಿಂದ ತಮ್ಮ ಬೆಲೆ ಸುಮಾರು 7 ಕೋಟಿ ರೂಪಾಯಿಗಳಾಗಬಹುದೆಂದು ನಿರೀಕ್ಷಿಸಿದ್ದೆ ಎಂದು ಹೇಳಿದರು.
"ಐಪಿಎಲ್ ಮೆಗಾ ಹರಾಜಿನ ನಂತರ ನನ್ನ ನಿರೀಕ್ಷೆ ಏನಿತ್ತು ಎಂದು ಬಹಳಷ್ಟು ಜನರು ನನ್ನನ್ನು ಕೇಳಿದರು. ನಾನು 6ರಿಂದ 7 ಕೋಟಿ ರೂ. ನಡುವೆ ನಿರೀಕ್ಷಿಸುತ್ತಿದ್ದೆ ಎಂದು ನಾನು ಹೇಳಿದೆ. ನಾನು ಕಳೆದ 3-4 ಸೀಸನ್ಗಳಲ್ಲಿ ನನ್ನ ವರ್ಗದ ಜನರನ್ನು ನೋಡಿದ್ದೇನೆ. ಅವರ್ಯಾರೂ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಗಳಿಸಿರಲಿಲ್ಲ," ಎಂದು ಹರ್ಷಲ್ ಪಟೇಲ್ ಆರ್ಸಿಬಿ ಪಾಡ್ಕ್ಯಾಸ್ಟ್ನಲ್ಲಿ ತಿಳಿಸಿದರು.

"ಆದ್ದರಿಂದ, ನಾನು 5ರಿಂದ 7 ಕೋಟಿ ರೂಪಾಯಿಗಳ ನಡುವೆ ನಿರೀಕ್ಷಿಸಿದ್ದೆ. ನನ್ನ ಸುತ್ತಮುತ್ತಲಿನ ಅನೇಕರು ಎರಡು ಅಂಕಿಗಳಿಗೆ ಹೋಗಬಹುದು ಎಂದು ನನಗೆ ಹೇಳಿದರು. ಆದರೆ, ನಾನು ಅವರನ್ನು ನಂಬಿರಲಿಲ್ಲ. 10.75 ಕೋಟಿ ರೂ.ಗಳನ್ನು ಪಡೆದುಕೊಂಡಾಗ ಆಹ್ಲಾದಕರ ಶಾಕ್ಗೆ ಒಳಗಾಗಿದ್ದೆ," ಎಂದು ಹರ್ಷಲ್ ಪಟೇಲ್ ಹೇಳಿದರು.
ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ನೆಕ್-ಟು-ನೆಕ್ ಬಿಡ್ಡಿಂಗ್ನಲ್ಲಿ ಅಂತಿಮವಾಗಿ ಆರ್ಸಿಬಿ ಹರ್ಷಲ್ ಪಟೇಲ್ ಅವರನ್ನು ಖರೀದಿಸಿತು.
ಐಪಿಎಲ್ನಲ್ಲಿ ಹಣದ ಹರಿವಿನಿಂದ ತಮ್ಮ ಜೀವನ ಹೇಗೆ ಬದಲಾಗಿದೆ ಎಂದು ಕೇಳಿದಾಗ, ತಾವು ದುಂದುವೆಚ್ಚದ ವ್ಯಕ್ತಿಯಲ್ಲದ ಕಾರಣ, ಹೆಚ್ಚಿನ ಹಣವನ್ನು ಹೊಂದಿರುವುದು ತಮಗೆ ಮುಖ್ಯವಲ್ಲ ಎಂದು ಹರ್ಷಲ್ ಪಟೇಲ್ ಅಭಿಪ್ರಾಯಪಟ್ಟಿದ್ದಾರೆ.

"ಹಣವು ನನಗೆ ಆಯ್ಕೆ ಮತ್ತು ಸ್ವಾತಂತ್ರ್ಯವನ್ನು ನೀಡುತ್ತದೆ. ನಾನು ಕ್ರಿಕೆಟ್ ಆಟವಾಡುವುದನ್ನು ಮುಂದುವರಿಸದಿದ್ದರೆ, ನಾನು ಎಷ್ಟು ಹಣವನ್ನು ಪಡೆಯುತ್ತಿದ್ದೇನೆ ಎಂಬುದರ ಆಧಾರದ ಮೇಲೆ ನನ್ನ ಜೀವನದ ಆಯ್ಕೆಗಳು ಇರುತ್ತವೆ ಎಂದು ಭಾವಿಸುವುದಿಲ್ಲ. ನಾನು ಅತಿರಂಜಿತ ವ್ಯಕ್ತಿಯಲ್ಲ ಮತ್ತು ನನಗೆ ಹೆಚ್ಚು ಹಣದ ಅಗತ್ಯವಿಲ್ಲ. ಹಣವು ಸ್ವಾತಂತ್ರ್ಯದ ಸಾಧನವಾಗಿದೆ, ನಾನು ಅದನ್ನು ಹಾಗೇ ನೋಡುತ್ತೇನೆ," ಎಂದು ಹರ್ಷಲ್ ಪಟೇಲ್ ಹೇಳಿದ್ದಾರೆ.
2023ರ ಐಪಿಎಲ್ 16ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಏಪ್ರಿಲ್ 2ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.