ಐಪಿಎಲ್ 2023ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅದ್ಭುತ ಗೆಲುವಿನೊಂದಿಗೆ ಆರಂಭಿಸಿದರೂ ನಂತರದ ಎರಡು ಪಂದ್ಯಗಳಲ್ಲಿ ಸತತ ಸೋಲು ಅನುಭವಿಸಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಹೀನಾಯ ಸೋಲು ಕಂಡಿದ್ದ ಆರ್ಸಿಬಿ ತಂಡ ತವರಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಒಂದು ವಿಕೆಟ್ಗಳ ಅಂತರದ ರೋಚಕ ಸೋಲು ಕಂಡಿದೆ. ಹೀಗಾಗಿ ಸತತ ಎರಡು ಪಂದ್ಯದಲ್ಲಿ ಆರ್ಸಿಬಿ ಸೋಲು ಕಂಡಿದ್ದು ಅಂಕಪಟ್ಟಿಯಲ್ಲಿ ಹಿನ್ನಡೆಯಲ್ಲಿದೆ.
ಇದೀಗ ಆರ್ಸಿಬಿ ಮುಂದಿನ ಪಂದ್ಯಕ್ಕಾಗಿ ಎದುರು ನೋಡುತ್ತಿದ್ದು ಗೆಲುವಿನ ಲಯಕ್ಕೆ ಮರಳುವ ಪ್ರಯತ್ನದಲ್ಲಿದೆ. ಈ ಪಂದ್ಯದಲ್ಲಿ ಆರ್ಸಿಬಿ ತಂಡಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಎದುರಾಳಿಯಾಗಿದ್ದು ಡೇವಿಡ್ ವಾರ್ನರ್ ತಂಡದ ಸವಾಲನ್ನು ಯಾವ ರೀತಿಯಾಗಿ ಎದುರಿಸಲಿದೆ ಎಂಬುದು ಕುತೂಹಲ ಮೂಡಿಸಿದೆ. ಈ ಪಂದ್ಯ ಬೆಂಗಳೂರಿನ ತವರು ಕ್ರೀಡಾಂಗಣವಾದ ಚಿನ್ನಸ್ವಾಮಿ ಮೈದಾನದಲ್ಲಿಯೇ ನಡೆಯಲಿದೆ.

ಆರ್ಸಿಬಿ ತಂಡಕ್ಕೆ ಮುಂದಿನ ಪಂದ್ಯದಲ್ಲಿ ಎದುರಾಳಿಯಾಗಿ ಕಣಕ್ಕಿಳಿಯಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ಬಾರಿಯ ಐಪಿಎಲ್ನಲ್ಲಿ ಅತ್ಯಂತ ಕಳಪೆ ಆರಂಭವನ್ನು ಪಡೆದಿದೆ. ಈಗಾಗಲೇ ನಾಲ್ಕು ಪಂದ್ಯಗಳನ್ನು ಡೆಲ್ಲಿ ಕ್ಯಾಪಿಟಲ್ಸ್ ಆಡಿದ್ದು ನಾಲ್ಕರಲ್ಲಿಯೂ ಸೋಲು ಕಂಡಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವಿಗಾಗಿ ತೀವ್ರ ಪೈಪೋಟಿ ನಡೆಸಿದ್ದರೂ ಗೆಲುವು ಕೈತಪ್ಪಿದ್ದು ತೀವ್ರ ಮುಖಭಂಗಕ್ಕೆ ಒಳಗಾಗಿದೆ.
ಇನ್ನು ಆರ್ಸಿಬಿ ತಂಡ ಕೊನೆಯ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ತವರಿನಲ್ಲಿ ಆಡಿದ್ದು ಗೆಲ್ಲುವ ಅದ್ಭುತ ಅವಕಾಶವನ್ನು ಹೊಂದಿತ್ತು. ಬೃಹತ್ ಮೊತ್ತದ ಗುರಿ ನೀಡಿದ ಬಳಿಕ ಆರ್ಸಿಬಿ ತಂಡದ ಆರಂಭಿಕ ಬೌಲಿಂಗ್ ಕೂಡ ಅದ್ಭುತವಾಗಿತ್ತು. ಆದರೆ ಮಾರ್ಕಸ್ ಸ್ಟೋಯ್ನಿಸ್ ಹಾಗೂ ನಿಕೋಲಸ್ ಪೂರನ್ ಅಬ್ಬರದ ಸ್ಪೋಟಕ ಬ್ಯಾಟಿಂಗ್ನ ಕಾರಣದಿಂದಾಗಿ ಆರ್ಸಿಬಿ ತಂಡ ರೋಚಕ ಸೋಲು ಕಾಣುವಂತಾಯಿತು.
ರಾಯಲ್ ಚಾಲೆಂಜರ್ಸ್ ತಂಡದ ಬೌಲಿಂಗ್ ವಿಭಾಗದ ಅಸ್ಥಿರ ಪ್ರದರ್ಶನ ತಂಡಕ್ಕೆ ಚಿಂತೆ ಹೆಚ್ಚಿಸಿರುವುದಲ್ಲಿ ಅನುಮಾನವಿಲ್ಲ. ಒಂದು ಹಂತದಲ್ಲಿ ಪಂದ್ಯದ ಮೇಲೆ ಸಂಪೂರ್ಣವಾಗಿ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿದ್ದರು ಕೂಡ ಅದರ ಲಾಭವನ್ನು ಪಡೆಯಲು ವಿಫಲವಾಗುತ್ತಿದೆ. ಮಧ್ಯಮ ಓವರ್ಗಳಲ್ಲಿ ವಿಪರೀತ ರನ್ಗಳನ್ನು ಬಿಟ್ಟುಕೊಡುತ್ತಿದೆ. ಸತತ ಎರಡು ಪಂದ್ಯಗಳಲ್ಲಿಯೂ ಆರ್ಸಿಬಿ ಇದೇ ತಪ್ಪನ್ನು ಮಾಡಿದ್ದು ಸೋಲಿಗೆ ಕಾರಣವಾಗಿತ್ತು.
ಇನ್ನು ನಕಾರಾತ್ಮಕ ಮಾತ್ರವಲ್ಲ, ಕೆಲ ವಿಚಾರಗಳಲ್ಲಿ ಆರ್ಸಿಬಿ ತಂಡ ಸಕಾರಾತ್ಮಕವಾಗಿಯೂ ಕಾಣಿಸಿದೆ. ಅದರಲ್ಲಿ ತಂಡದ ಅಗ್ರ ಕ್ರಮಾಂಕ. ತವರಿನಲ್ಲಿ ನಡೆದ ಎರಡು ಪಂದ್ಯದಲ್ಲಿಯೂ ಆರ್ಸಿಬಿ ಅಗ್ರ ಕ್ರಮಾಂಕ ಅಬ್ಬರಿಸಿದೆ. ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ ಇಬ್ಬರು ಕೂಡ ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
ಎಲ್ಎಸ್ಜಿ ವಿರುದ್ಧದ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಕೂಡ ಸ್ಪೋಟಕ ಪ್ರದರ್ಶನ ನೀಡಿದ್ದು ಆತ್ಮವಿಶ್ವಾಸ ಹೆಚ್ಚಿಸಿದೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಸಿರಾಜ್ ಪ್ರದರ್ಶನ ಗಮನಾರ್ಹ. ಅದರಲ್ಲೂ ಸಿರಾಜ್ ಹೊಸ ಚೆಂಡಿನಲ್ಲಿ ಎದುರಾಳಿಗಳಿಗೆ ಅತ್ಯಂತ ಅಪಾಯಕಾರಿಯಾಗಿದ್ದಾರೆ. ಇದು ತಂಡದ ಮತ್ತೊಂದು ಸಕಾರಾತ್ಮಕ ಅಂಶ.