ಐಪಿಎಲ್ನಲ್ಲಿ ಶನಿವಾರ ಆರ್ಸಿಬಿ ತಂಡ ಈ ಬಾರಿಯ ಆವೃತ್ತಿಯಲ್ಲಿ ತನ್ನ ನಾಲ್ಕನೇ ಪಂದ್ಯವನ್ನಾಡಲು ಸಜ್ಜಾಗುತ್ತಿದೆ. ಅದ್ಭುತ ಗೆಲುವಿನೊಂದಿಗೆ ಈ ಟೂರ್ನಿಯನ್ನು ಆರಂಭಿಸಿದರೂ ಆರ್ಸಿಬಿ ಸತತ ಎರಡು ಸೋಲಿನಿಂದ ಕಂಗೆಟ್ಟಿದ್ದು ಗೆಲುವಿನ ಲಯಕ್ಕೆ ಮರಳುವ ಒತ್ತಡದಲ್ಲಿದೆ. ಅದ್ಭುತ ಆಟಗಾರರ ಪಡೆಯನ್ನು ಹೊಂದಿದ್ದರೂ ಗೆಲುವು ದೂರವಾಗುತ್ತಿರುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಈ ಬಾರಿಯ ಐಪಿಎಲ್ನಲ್ಲಿ ಇತರ ತಂಡಗಳೊಂದಿಗೆ ಸ್ಪರ್ಧೆಯಲ್ಲಿ ಉತ್ಸಾಹದಿಂದ ಮುಂದುವರಿಯ ಬೇಕಾದರೆ ಆರ್ಸಿಬಿಗೆ ಮುಂದಿನ ಪಂದ್ಯದಲ್ಲಿ ಗೆಲುವು ಅನಿವಾರ್ಯ.
ಇತ್ತ ಡೆಲ್ಲಿ ತಂಡ ಆಡಿರುವ ನಾಲ್ಕು ಪಂದ್ಯಗಳಲ್ಲಿಯೂ ಸೋಲು ಕಂಡಿದ್ದು ಹೀನಾಯ ಸ್ಥಿತಿಯಲ್ಲಿದೆ. ಮೊದಲ ಗೆಲುವಿನ ಹುಡುಕಾಟದಲ್ಲಿರುವ ವಾರ್ನರ್ ಪಡೆ ಆರ್ಸಿಬಿ ವಿರುದ್ಧ ಅಬ್ಬರಿಸುವ ವಿಶ್ವಾಶದಲ್ಲಿದೆ. ತಂಡ ಗೆಲುವಿನ ಲಯಕ್ಕೆ ಮರಳಲು ಚೆನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯ ಉತ್ತಮ ವೇದಿಕೆ ಒದಗಿಸಲಿದೆ ಎಂದು ತಂಡದ ನಿರ್ದೇಶಕ ಸೌರವ್ ಗಂಗೂಲಿ ಹೇಳಿಕೆ ನೀಡಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ 4 ಪಂದ್ಯಗಳಲ್ಲಿ ಆಡಿದ್ದರೂ ಮೊದಲ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ಹಾಗಂತ ಆರ್ಸಿಬಿ ತಂಡಕ್ಕೆ ವಾರ್ನರ್ ಪಡೆ ಸುಲಭ ಎದುರಾಳಿ ಎಂದು ಪರಿಗಣಿಸುವುದು ಸಾಧ್ಯವಿಲ್ಲ. ತಂಡದಲ್ಲಿ ಕೆಲ ಪ್ರಮುಖ ಆಟಗಾರರು ಇದ್ದು ತಂಡಕ್ಕೆ ಮೊದಲ ಗೆಲುವು ತಂದುಕೊಡುವ ವಿಶ್ವಾಸದಲ್ಲಿದ್ದಾರೆ. ಶನಿವಾರ ನಡೆಲಿರುವ ಪಂದ್ಯದಲ್ಲಿ ಆರ್ಸಿಬಿ ಬಳಗಕ್ಕೆ ಅಪಾಯವನ್ನುಂಟು ಮಾಡಬಲ್ಲ ನಾಲ್ವರು ಆಟಗಾರರು ಯಾರು ಎಂಬುದನ್ನು ನೋಡೋಣ. ಮುಂದೆ ಓದಿ..
ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಆಟಗಾರರ ಪೈಕಿ ಡೇವಿಡ್ ವಾರ್ನರ್ ಕೂಡ ಒಬ್ಬರು. ಈ ಬಾರಿ ರಿಷಭ್ ಪಂತ್ ಅಲಭ್ಯತೆಯಲ್ಲಿ ವಾರ್ನರ್ ಡೆಲ್ಲಿ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಒಟ್ಟಾರೆಯಾಗಿ ಅತ್ಯುತ್ತಮ ಪ್ರದರ್ಶನ ಬಾರದಿದ್ದರೂ ವಾರ್ನರ್ ಈ ಭಾರಿಯ ಆವೃತ್ತಿಯಲ್ಲಿಯೂ ಉತ್ತಮ ಫಾರ್ಮ್ನಲ್ಲಿರುವುದು ಪ್ರಮುಖ ಅಂಶ. ಆದರೆ ವಾರ್ನರ್ ಕಳೆದ ಪಂದ್ಯಗಳಲ್ಲಿ ಸ್ಟ್ರೈಕ್ರೇಟ್ನಲ್ಲಿ ಹಿಂದೆ ಬಿದ್ದಿದ್ದು ಟೀಕೆಗೂ ಗುರಿಯಾಗಿದ್ದರು. ಆದರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ವಿರುದ್ಧ ಮಿಂಚಿನ ಪ್ರದರ್ಶನ ನಿಡುವ ಮೂಲಕ ತಂಡಕ್ಕೆ ಆಸರೆಯಾಗುವ ಅವಕಾಶ ಹೊಂದಿದ್ದಾರೆ.
ಅನುಭವಿ ಆಟಗಾರ ಮನೀಶ್ ಪಾಂಡೆ ಈ ಬಾರಿಯ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮನೀಶ್ ಪಾಂಡೆ ಬ್ಯಾಟ್ನಿಂದ ಪರಿಣಾಮಕಾರಿ ಪ್ರದರ್ಶನಗಳು ಬರುತ್ತಿಲ್ಲ. ಅದರಲ್ಲೂಈ ಕಳೆದ ಎರಡು ಆವೃತ್ತಿಗಳಿಂದ ಮನೀಶ್ ಪಾಂಡೆ ಮಂಕಾದಂತೆ ಕಂಡು ಬಂದಿದ್ದಾರೆ. ಕನ್ನಡಿಗ ಮನೀಶ್ ಪಾಂಡೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ತವರು ಮೈದಾನವಾಗಿರುವ ಕಾರಣ ಇಲ್ಲಿನ ಮೈದಾನದ ಹಾಗೂ ಪಿಚ್ನ ಬಗ್ಗೆ ಸಂಪೂರ್ಣ ಅರಿವಿದೆ. ಇದರ ಲಾಭವನ್ನುಜ ಮನೀಶ್ ಬಳಸಿಕೊಂಡರೆ ಆರ್ಸಿಬಿಗೆ ಖಂಡಿತವಾಗಿಯೂ ಮನೀಶ್ ಅಪಾಯಕಾರಿಯಾಗಲಿದ್ದಾರೆ.
ಆಲ್ರೌಂಡರ್ ಅಕ್ಷರ್ ಪಟೇಲ್ ಈ ಬಾರಿಯ ಆವೃತ್ತಿಯಲ್ಲಿಯೂ ಅದ್ಭುತ ಪ್ರದರ್ಶನ ನೀಡುತ್ತಿದ್ದು ಗಮನ ಸೆಳೆದಿದ್ದಾರೆ. ಬ್ಯಾಟಿಂಗ್ನಲ್ಲಿ ಸ್ಪೋಟಕವಾಗಿ ಪ್ರದರ್ಶನ ನೀಡುವ ಸಾಮರ್ಥ್ಯಹೊಂದಿರುವ ಅಕ್ಷರ್ ಪಟೇಲ್ಗೆ ಚಿನ್ನಸ್ವಾಮಿ ಕ್ರೀಡಾಂಗಣ ತನ್ನ ಬ್ಯಾಟಿಂಗ್ ಕೌಶಲ್ಯ ಪ್ರದರ್ಶಿಸಲು ಅದ್ಭುತ ವೇದಿಕೆಯಾಗುವುದರಲ್ಲಿ ಅನುಮಾನವಿಲ್ಲ. ಅಲ್ಲದೆ ಬೌಲಿಂಗ್ನಲ್ಲಿಯೂ ಮಿಂಚುವ ಸಾಮರ್ಥ್ಯವಿರುವ ಕಾರಣ ಅಕ್ಷರ್ ಪಟೇಲ್ ಆರ್ಸಿಬಿ ತಂಡಕ್ಕೆ ಅಪಾಯಕಾರಿಯಾಗುವದರಲ್ಲಿ ಅನುಮಾನವಿಲ್ಲ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರಮುಖ ಬೌಲಿಂಗ್ ಅಸ್ತ್ರ ಕುಲ್ದೀಪ್ ಯಾದವ್. ತಮ್ಮ ಸ್ಪಿನ್ ಕೌಶಲ್ಯದ ಮೂಲಕ ಎದುರಾಳಿ ದಾಂಡಿಗರಿಗೆ ಕುಲ್ದೀಪ್ ಸಿಂಹಸವಪ್ನವಾಗುತ್ತಾರೆ. ಇನ್ನು ಆರ್ಸಿಬಿ ತಂಡದ ಪ್ರಮುಖ ಆಟಗಾರರು ಸ್ಪಿನ್ನರ್ಗಳ ವಿರುದ್ಧ ತಿಣುಕಾಡುವುದು ಸಾಬೀತಾಗಿದೆ. ಇದರ ಲಾಭವನ್ನು ಅದ್ಭುತವಾಗಿ ಪಡೆದುಕೊಳ್ಳುವ ಸಾಮರ್ಥ್ಯ ಕುಲ್ದೀಪ್ ಯಾದವ್ಗೆ ಇದೆ. ಹೀಗಾಗಿ ಆರ್ಸಿಬಿ ತಂಡಕ್ಕೆ ಕುಲ್ದೀಪ್ ಯಾದವ್ ಬೌಲಿಂಗ್ ಎದುರಿಸಿವುದು ಪ್ರಮುಖ ಸವಾಲಾಗುವುದರಲ್ಲಿ ಅನುಮಾನವಿಲ್ಲ.