
ರಾಯಲ್ ಚಾಲೆಂಜರ್ಸ್ ಬೆಂಗಳೂರು.. ಇಂಡಿಯನ್ ಪ್ರೀಮಿಯರ್ ಲೀಗ್ನ ಅತಿಮುಖ್ಯ ತಂಡ. ಸದ್ಯ ಹದಿನಾರನೇ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿ ನಡೆಯುತ್ತಿದ್ದು, ಇಷ್ಟು ಆವೃತ್ತಿಗಳಾದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಾತ್ರ ಒಮ್ಮೆಯೂ ಟ್ರೋಫಿ ಎತ್ತಿ ಹಿಡಿದಿಲ್ಲ.
ಹೀಗೆ ಟ್ರೋಫಿಯನ್ನೇ ಗೆಲ್ಲದೇ ಇರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟ್ರೋಫಿ ಗೆಲ್ಲದ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ರೀತಿ ಕ್ರೇಜ್ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಬದಲಾಗಿ ಹೆಚ್ಚು ಟ್ರೋಫಿ ಗೆದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳಷ್ಟೇ ಹಾಗೂ ಅವುಗಳಿಗಿಂತ ಹೆಚ್ಚಿನ ಕ್ರೇಜ್ ಹೊಂದಿವೆ ಎಂದು ಹೇಳಬಹುದು.
ಈಗಲೂ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ರೀಚ್ ಹೊಂದಿರುವ ಫ್ರಾಂಚೈಸಿ ಕ್ರಿಕೆಟ್ ತಂಡವೆಂದರೆ ಅದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವೇ. ಇಷ್ಟರ ಮಟ್ಟಿಗೆ ಮಹತ್ವವನ್ನು ಪಡೆದುಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮೊದಲೇ ಹೇಳಿದ ಹಾಗೆ ಟ್ರೋಫಿ ಗೆಲ್ಲದೇ ಇರುವುದೇ ದೊಡ್ಡ ಮೈನಸ್ ಪಾಯಿಂಟ್ ಆಗಿ ಪರಿಣಮಿಸಿದೆ.
ಇಷ್ಟು ವರ್ಷವಾದರೂ ಟ್ರೋಫಿ ಗೆದ್ದಿಲ್ಲ ಎಂಬ ಟ್ರೋಲ್ ಪ್ರತಿ ಬಾರಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಹರಿದಾಡುತ್ತಲೇ ಇರುತ್ತದೆ. ಕೇವಲ ಕ್ರಿಕೆಟ್ ಅಭಿಮಾನಿಗಳು ಮಾತ್ರವಲ್ಲದೇ ದಿಗ್ಗಜ ಕ್ರಿಕೆಟಿಗರೂ ಸಹ ಆರ್ಸಿಬಿ ಟ್ರೋಫಿ ಗೆಲ್ಲದೇ ಇರುವುದರ ಕುರಿತು ಭಿನ್ನ ವಿಭಿನ್ನ ಹೇಳಿಕೆಗಳನ್ನು ನೀಡಿದ್ದಾರೆ.
ಇದೀಗ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಾಸಿಮ್ ಅಕ್ರಮ್ ಸಹ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟ್ರೋಫಿ ಗೆಲ್ಲದ್ದರ ಕುರಿತು ಸ್ಪೋರ್ಟ್ಸ್ ಕೀಡಾ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಒಂದುವೇಳೆ ಎಂ ಎಸ್ ಧೋನಿ ನಾಯಕನಾಗಿದ್ದರೆ ಏನಾಗಿರುತ್ತಾ ಇತ್ತು ಎಂಬ ಪ್ರಶ್ನೆಗೆ ವಾಸಿಮ್ ಅಕ್ರಮ್ ಉತ್ತರಿಸಿದ್ದಾರೆ.
"ಎಂ ಎಸ್ ಧೋನಿ ನಾಯಕನಾಗಿದ್ದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೂರು ಟ್ರೋಫಿಗಳನ್ನು ಗೆದ್ದಿರುತ್ತಿತ್ತು. ಆರ್ಸಿಬಿಗೆ ಅಭಿಮಾನಿಗಳ ಅಭೂತಪೂರ್ವ ಬೆಂಬಲವಿದೆ ಹಾಗೂ ಈ ಯುಗದ ಅತ್ಯುತ್ತಮ ಆಟಗಾರ ವಿರಾಟ್ ಕೊಹ್ಲಿ ತಂಡದಲ್ಲಿದ್ದಾರೆ. ವಿರಾಟ್ ಕೊಹ್ಲಿ ಐಪಿಎಲ್ ಆರಂಭದಿಂದ ಆರ್ಸಿಬಿ ತಂಡದಲ್ಲಿದ್ದಾರೆ. ಆದರೆ ದುರಾದೃಷ್ಟವಶಾತ್ ಆರ್ಸಿಬಿ ಟ್ರೋಫಿ ಗೆಲ್ಲಲಾಗಿಲ್ಲ. ಧೋನಿ ಏನಾದರೂ ಆರ್ಸಿಬಿ ನಾಯಕನಾಗಿದ್ರೆ ಖಂಡಿತ ಆರ್ಸಿಬಿ ಟ್ರೋಫಿ ಗೆದ್ದಿರುತ್ತಿತ್ತು" ಎಂದು ವಾಸಿಮ್ ಅಕ್ರಮ್ ಹೇಳಿಕೆ ನೀಡಿದ್ದಾರೆ.
ಇನ್ನೂ ಮುಂದುವರಿದು ಮಾತನಾಡಿದ ವಾಸಿಮ್ ಅಕ್ರಮ್ ವಿರಾಟ್ ಕೊಹ್ಲಿ ನಾಯಕನಾಗಿ ವಿಫಲವಾಗಿದ್ದೇಕೆ ಎಂಬುದರ ಬಗ್ಗೆಯೂ ಸಹ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. "ವಿರಾಟ್ ಕೊಹ್ಲಿ ಎಲ್ಲಿ ವಿಫಲವಾದರೋ ನನಗೆ ಗೊತ್ತಿಲ್ಲ. ಆತನೊಬ್ಬ ಶ್ರಮ ವಹಿಸಿ ಆಡುವ ಆಟಗಾರ. ಬಹುಶಃ ರಾಷ್ಟ್ರೀಯ ತಂಡದತ್ತ ಆತ ಹೆಚ್ಚು ಗಮನ ಹರಿಸಿದ ಕಾರಣ ಐಪಿಎಲ್ ನಾಯಕತ್ವದ ಮೇಲೆ ಹೆಚ್ಚು ನಿಗಾ ವಹಿಸಲಾಗಲಿಲ್ಲವೇನೋ. ಸದ್ಯ ಆತ ಉತ್ತಮವಾಗಿ ಆಡುತ್ತಿದ್ದು, ಆತನ ಆಟವನ್ನು ಸಂತೋಷದಿಂದ ಅನುಭವಿಸುತ್ತಿದ್ದಾನೆ" ಎಂದು ಹೇಳಿದರು.
ವಿರಾಟ್ ಕೊಹ್ಲಿ ಸದ್ಯ ಕೇವಲ ಆಟಗಾರನಾಗಿ ಮಾತ್ರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದು, ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಿಂದ ಫಾಫ್ ಡು ಪ್ಲೆಸಿಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನಾಗಿದ್ದಾರೆ. ಈ ಬಾರಿಯ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಫಾಫ್ ಡು ಪ್ಲೆಸಿಸ್ ಗಾಯಕ್ಕೊಳಗಾದ ಕಾರಣ ಮೂರು ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದರು. ಈ ಪೈಕಿ ಎರಡು ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆದ್ದಿತ್ತು ಹಾಗೂ ಉಳಿದೊಂದು ಪಂದ್ಯದಲ್ಲಿ ಸೋತಿತ್ತು.