
ನಿನ್ನೆ ( ಏಪ್ರಿಲ್ 23 ) ಸದ್ಯ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಎರಡು ಪಂದ್ಯಗಳು ಜರುಗಿದವು. ಮಧ್ಯಾಹ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾದವು ಮತ್ತು ರಾತ್ರಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾದವು.
ರಾಜಸ್ಥಾನ್ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 7 ರನ್ಗಳ ರೋಚಕ ಗೆಲುವು ಕಂಡರೆ, ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 49 ರನ್ಗಳ ಗೆಲುವನ್ನು ಕಂಡಿತು. ಈ ಗೆಲುವಿನ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.
ಕೊಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಪರ ಡಿವಾನ್ ಕಾನ್ವೆ, ಅಜಿಂಕ್ಯಾ ರಹಾನೆ ಹಾಗೂ ಶಿವಮ್ ದುಬೆ ಅರ್ಧಶತಕಗಳನ್ನು ಸಿಡಿಸಿದ ಪರಿಣಾಮ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 235 ರನ್ ಗಳಿಸಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಗೆಲ್ಲಲು 236 ರನ್ಗಳ ಗುರಿಯನ್ನು ನೀಡಿತು.
ಇನ್ನು ಇಷ್ಟು ದೊಡ್ಡ ಮೊತ್ತವನ್ನು ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಎಲ್ಲಿಯೂ ಸಹ ಬೆನ್ನತ್ತುವ ಭರವಸೆಯನ್ನೇ ಮೂಡಿಸಲಿಲ್ಲ. ಒಂದೇ ರನ್ನಿಗೆ ತನ್ನ ಇಬ್ಬರೂ ಓಪನರ್ಗಳ ವಿಕೆಟ್ ಅನ್ನು ಕಳೆದುಕೊಂಡ ಕೊಲ್ಕತ್ತಾ ನೈಟರ್ ರೈಡರ್ಸ್ ಆರಂಭದಲ್ಲಿಯೇ ಸೋಲಿನ ದವಡೆಗೆ ಸಿಲುಕಿಕೊಂಡಿತ್ತು. ಮಧ್ಯಮ ಕ್ರಮಾಂಕದಲಲಿ ಜೇಸನ್ ರಾಯ್ ಹಾಗೂ ರಿಂಕು ಸಿಂಗ್ ಅರ್ಧಶತಕಗಳನ್ನು ಬಾರಿಸಿದರಾದರೂ ಗೆಲುವಿನ ಸನಿಹಕ್ಕೆ ತಂಡವನ್ನು ಕೊಂಡೊಯ್ಯಲಾಗಲಿಲ್ಲ.
ಹೀಗಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿ ಸೋಲನ್ನು ಅನುಭವಿಸಿತು. ಈ ಮೂಲಕ ಕೊಲ್ಕತ್ತಾ ನೈಟ್ ರೈಡರ್ಸ್ ಈ ಬಾರಿಯ ಟೂರ್ನಿಯಲ್ಲಿ ಐದನೇ ಸೋಲನ್ನು ಕಂಡು ತೀವ್ರ ಹಿನ್ನಡೆ ಅನುಭವಿಸಿದೆ. ಹೀಗೆ ತಮ್ಮ ತಂಡ ಹೀನಾಯ ಸೋಲು ಕಂಡ ಬಳಿಕ ಮಾತನಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ನಿತಿಶ್ ರಾಣಾ ಸೋಲಿಗೆ ಕಾರಣ ತಿಳಿಸಿದರು.
"ಅರಗಿಸಿಕೊಳ್ಳಲು ಕಷ್ಟವಾಗ್ತಿದೆ. 236 ರೀತಿಯ ದೊಡ್ಡ ಮೊತ್ತವನ್ನು ಬೆನ್ನತ್ತುವುದು ಕಷ್ಟ. ಅದರಲ್ಲಿಯೂ ಕೆಟ್ಟ ಪವರ್ಪ್ಲೇ ಆಡಿದಾಗಂತೂ ಇದು ಇನ್ನೂ ಕಷ್ಟ. ಗೆಲುವಿನ ಕ್ರೆಡಿಟ್ ರಹಾನೆಗೆ ಸಲ್ಲುತ್ತೆ. ಮೊದಲೇ ಹೇಳಿದಂತೆ ಅಷ್ಟು ದೊಡ್ಡ ರನ್ ಬಿಟ್ಟುಕೊಟ್ಟೆವು ಎಂಬುದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ನಮ್ಮಲ್ಲಿ ಕೆಲ ಪಾಸಿಟಿವ್ ಅಂಶಗಳಿರಬೇಕಿತ್ತು. ಆದರೆ ಮುಂದಿನ ಪಂದ್ಯಗಳಲ್ಲಿ ಬದಲಾಗದಿದ್ದರೆ, ಅಭಿವೃದ್ಧಿ ಹೊಂದದಿದ್ದರೆ, ಇದೇ ರೀತಿಯ ತಪ್ಪುಗಳನ್ನು ಅಂತಹ ದೊಡ್ಡ ತಂಡದ ವಿರುದ್ಧ ಪದೇ ಪದೇ ಮಾಡುತ್ತಿದ್ದರೆ ಸೋಲುತ್ತಲೇ ಇರಬೇಕಾಗುತ್ತದೆ" ಎಂದು ನಿತಿಶ್ ರಾಣಾ ಹೇಳಿಕೆ ನೀಡಿದರು.
ಈ ಮೂಲಕ ನಿತಿಶ್ ರಾಣಾ ತಮ್ಮ ತಂಡದಲ್ಲಿ ನೆಗೆಟಿವ್ ಅಂಶಗಳು ತುಂಬಿದ್ದು ಪದೇ ಪದೇ ತಪ್ಪುಗಳು ಜರುಗುತ್ತಿವೆ, ಹೀಗಾಗಿಯೇ ಪದೇ ಪದೇ ಸೋಲನ್ನು ಅನುಭವಿಸುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ. 236 ರನ್ಗಳ ಬೃಹತ್ ಮೊತ್ತವನ್ನು ಚೇಸ್ ಮಾಡಬೇಕಿದ್ದ ಕೊಲ್ಕತ್ತಾ ನೈಟ್ ರೈಡರ್ಸ್ ಪರ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ನಿತಿಶ್ ರಾಣಾ 20 ಎಸೆತಗಳಲ್ಲಿ 27 ರನ್ ಕಲೆಹಾಕಿದರು. ರವೀಂದ್ರ ಜಡೇಜಾ ಎಸೆತದಲ್ಲಿ ರುತುರಾಜ್ ಗಾಯಕ್ವಾಡ್ಗೆ ಕ್ಯಾಚ್ ನೀಡಿದರು.