
ಕಳೆದ ಮಾರ್ಚ್ ತಿಂಗಳಿನಲ್ಲಿ ಆರಂಭಗೊಂಡ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಕ್ತಾಯದ ಸನಿಹಕ್ಕೆ ಬಂದಿದ್ದು, ಲೀಗ್ ಹಂತದ ಕೊನೆಯ ಪಂದ್ಯಗಳು ಇಂದು ( ಮೇ 21 ) ನಡೆಯಲಿವೆ.
ಟೂರ್ನಿಯಲ್ಲಿ ಅತಿಹೆಚ್ಚು ಪಂದ್ಯಗಳನ್ನು ಗೆದ್ದು 18 ಅಂಕಗಳನ್ನು ಪಡೆದುಕೊಂಡಿರುವ ಗುಜರಾತ್ ಟೈಟನ್ಸ್ ಮೊದಲಿಗೆ ಪ್ಲೇಆಫ್ ತಲುಪಿದ್ದು, ನಿನ್ನೆ ( ಮೇ 20 ) ನಡೆದ ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಆಫ್ ಪ್ರವೇಶಿಸಿದ್ದು, ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಗೆದ್ದ ಲಕ್ನೋ ಸೂಪರ್ ಜೈಂಟ್ಸ್ ಸಹ ಪ್ಲೇಆಫ್ ಸುತ್ತಿಗೆ ಲಗ್ಗೆ ಇಟ್ಟಿದೆ.
ಸದ್ಯ 13 ಪಂದ್ಯಗಳನ್ನಾಡಿ 9 ಪಂದ್ಯಗಳಲ್ಲಿ ಗೆದ್ದು 4 ಪಂದ್ಯಗಳಲ್ಲಿ ಸೋಲನ್ನು ಕಂಡಿರುವ ಗುಜರಾತ್ ಟೈಟನ್ಸ್ ತಂಡ 18 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ, 14 ಪಂದ್ಯಗಳನ್ನಾಡಿ 8 ಪಂದ್ಯಗಳಲ್ಲಿ ಗೆದ್ದು 5 ಪಂದ್ಯಗಳಲ್ಲಿ ಸೋತು ಒಂದು ಪಂದ್ಯದಲ್ಲಿ ಫಲಿತಾಂಶ ಕಾಣದೇ ಇರುವ ಚೆನ್ನೈ ಸೂಪರ್ ಕಿಂಗ್ಸ್ 17 ಅಂಕಗಳೊಂದಿಗೆ ಎರಡನೇ ಸ್ಥಾನ, 14 ಪಂದ್ಯಗಳನ್ನಾಡಿ 8 ಪಂದ್ಯಗಳಲ್ಲಿ ಗೆದ್ದು 5 ಪಂದ್ಯಗಳಲ್ಲಿ ಸೋತು ಒಂದು ಪಂದ್ಯದಲ್ಲಿ ಫಲಿತಾಂಶ ಕಾಣದೇ ಇರುವ ಲಕ್ನೋ ಸೂಪರ್ ಜೈಂಟ್ಸ್ ತಂಡ 17 ಅಂಕಗಳನ್ನು ಪಡೆದು ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿವೆ.
ಹೀಗಾಗಿ ನಾಲ್ಕನೇ ತಂಡವಾಗಿ ಯಾವ ತಂಡ ಪ್ಲೇಆಫ್ ಪ್ರವೇಶವನ್ನು ಮುಂಬೈ ಇಂಡಿಯನ್ಸ್ ಮಾಡುತ್ತಾ ಅಥವಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಾಡುತ್ತಾ ಎಂಬ ಪ್ರಶ್ನೆ ಮೂಡಿದೆ. ಹೌದು, ಇಂದು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಮುಂಬೈ ಇಂಡಿಯನ್ಸ್ ವಾಂಖೆಡೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸೆಣಸಾಡಲಿದ್ದು, ಬೆಂಗಳೂರಿನ ಚಿನ್ನಸ್ವಾಮಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೆಣಸಾಡಲಿದೆ.
ಈ ಎರಡು ತಂಡಗಳಲ್ಲಿ ಯಾವ ತಂಡ ಗೆದ್ದು ಹೆಚ್ಚಿನ ನೆಟ್ ರನ್ ರೇಟ್ ಪಡೆದುಕೊಳ್ಳಲಿದೆಯೋ ಆ ತಂಡ ಪ್ಲೇಆಫ್ ಪ್ರವೇಶಿಸಲಿದೆ. ಹೀಗೆ ಯಾವ ತಂಡ ಪ್ಲೇಆಫ್ ತಲುಪಬಹುದು ಎಂಬ ಕುತೂಹಲ ಉಂಟಾಗಿರುವಾಗಲೇ ನಿನ್ನೆ ( ಮೇ 21 ) ಬೆಂಗಳೂರು ನಗರದಲ್ಲಿ ಸುರಿದ ಭಾರೀ ಮಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳ ಬೇಸರ ಹಾಗೂ ಆತಂಕಕ್ಕೆ ಕಾರಣವಾಗಿದೆ.
ಟ್ವಿಟರ್ನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಳೆಯಾಗುತ್ತಿರುವ ಬಗ್ಗೆ ಟ್ವೀಟ್ಗಳು ಹರಿದಾಡಿದ್ದು, ಪಂದ್ಯ ನಡೆದರೆ ಸಾಕು ಎಂಬ ಪ್ರಾರ್ಥನೆಗಳು ಕೇಳಿಬಂದಿದ್ದವು. ಈ ಕುರಿತಾಗಿ ಸ್ವತಃ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿ ಬರೆದುಕೊಂಡಿದ್ದು, "ಹೌದು ಮಳೆ ಬಂತು, ಮಳೆ ನಿಂತು ಹೋಯಿತು. ಒಂದು ಗಂಟೆಯ ಬಳಿಕ ಎಲ್ಲವೂ ಸರಿಯಾಗಿದೆ" ಎಂದು ವಿರಾಟ್ ಕೊಹ್ಲಿ ಮಳೆ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತಾಲೀಮಿಗಾಗಿ ಹೋಗುತ್ತಿರುವ ಚಿತ್ರವನ್ನು ಹಂಚಿಕೊಂಡಿದೆ.
ಈ ಮೂಲಕ ಮಳೆಯ ಆತಂಕವಿಲ್ಲ ಎಂಬುದನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಿಳಿಸಿದೆ. ಇನ್ನು ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೆದ್ದು, ನಂತರದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ ಪಂದ್ಯಕ್ಕೆ ಮಳೆ ಅಡ್ಡಿಯಾದರೆ ಆರ್ಸಿಬಿ ಟೂರ್ನಿಯಿಂದ ಹೊರಬೀಳಲಿದ್ದು, ನಾಳಿನ ಪಂದ್ಯಕ್ಕೆ ವರುಣ ಕೃಪೆ ತೋರುತ್ತಾನಾ ಇಲ್ವಾ ಕಾದು ನೋಡಬೇಕಿದೆ.