ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಾಕಷ್ಟು ಏರಿಳಿತಗಳನ್ನು ಕಂಡಿದೆ. ಕೆಲ ಗೆಲ್ಲುವ ಪಂದ್ಯಗಳನ್ನು ಕಳೆದುಕೊಂಡಿದ್ದರೆ ಸವಾಲಿನ ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ನೀಡಿ ಗೆಲುವು ಸಾಧಿಸಿದೆ. ಈ ಮಧ್ಯೆ ಈ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿ ಪರವಾಗಿ ಬೌಲಿಂಗ್ನಲ್ಲಿ ಅಮೋಘ ಪ್ರದರ್ಶನ ನೀಡಿ ಎಲ್ಲರ ಗಮನಸೆಳೆದಿರುವ ಆಟಗಾರ ಎಂದರೆ ಅದು ಮೊಹಮ್ಮದ್ ಸಿರಾಜ್. ಅದರಲ್ಲೂ ಪವರ್ಪ್ಲೇ ಅವಧಿಯಲ್ಲಿ ಸಿರಾಜ್ ಎದುರಾಳಿಗಳ ಪಾಲಿಗೆ ಅಕ್ಷರಶಃ ದುಃಸ್ವಪ್ನವಾಗಿ ಕಾಡುತ್ತಿದ್ದಾರೆ.
ಆರ್ಸಿಬಿ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರ ಈ ಬೌಲಿಂಗ್ ಪ್ರದರ್ಶನಕ್ಕೆ ಕ್ರಿಕೆಟ್ ಪಂಡಿತರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಭಾರತದ ಮಾಜಿ ಕ್ರಿಕೆಟಿಗ ಆರ್ಪಿ ಸಿಂಗ್ ಸಿರಾಜ್ ಬೌಲಿಂಗನ್ನು ವಿಶೇಷವಾಗಿ ಕೊಂಡಾಡಿದ್ದು ಆತನ ಪರಿಶ್ರಮದ ಕಾರಣದಿಂದಾಗಿ ಈ ಯಶಸ್ಸು ಆತನಿಗೆ ದೊರೆತಿದೆ ಎಂದಿದ್ದಾರೆ ಆರ್ಪಿ ಸಿಂಗ್.

"ಸುದೀರ್ಘ ಕಾಲದಿಂದ ನಾನು ಸಿರಾಜ್ ಅವರನ್ನು ನೋಡಿಕೊಂಡು ಬಂದಿದ್ದೇನೆ. ಅವರು ಭಾರತ ತಂಡವನ್ನು ಸೇರಿಕೊಂಡಾಗ ಅವರ ಯಶಸ್ಸಿನ ಮಟ್ಟ ಬಹಳ ಉನ್ನತವಾಗಿತ್ತು. ಆದರೆ ಅದು ನಿಧಾನವಾಗಿ ಕುಸಿಯಲು ಆರಂಭಿಸಿತ್ತು. ಆದರೆ ಈ ಬಾರಿ ಅವರು ಸಾಕಷ್ಟು ಪರಿಶ್ರಮಪಟ್ಟಿರುವುದು ವ್ಯಕ್ತವಾಗುತ್ತಿದೆ. ಅವರ ಫಿಟ್ನೆಸ್ ಕೂಡ ಅದ್ಭು್ವಾಗಿದೆ" ಎಂದಿದ್ದಾರೆ ಮಾಜಿ ವೇಗಿ ಆರ್ಪಿ ಸಿಂಗ್.
ಮುಂದುವರಿದು ಮಾತನಾಡಿದ ಆರ್ಪಿ ಸಿಂಗ್, "ತಾಂತ್ರಿಕವಾಗಿಯೂ ಅವರು ಸಾಕಷ್ಟು ಬಲಿಷ್ಠವಾಗಿದ್ದಾರೆ. ಅವರ ಮೊಣಕೈ ಭಾಗದ ಮೇಲೆ ಸಾಕಷ್ಟು ಕಾರ್ಯನಿರ್ವಹಿಸಿರುವುದು ಸ್ಪಷ್ಟವಾಗಿದೆ. ಬೌನ್ಸ್ ಪಡೆಯುವುದ ಮೇಲೆ ಹಾಗೂ ಚೆಂಡನ್ನು ಸತತವಾಗಿ ವಿಕೆಟ್ಗೆ ಎಸೆಯುವದರ ಮೇಲೆ ಹೆಚ್ಚಿನ ಪರಿಶ್ರಮಪಟ್ಟಿರುವುದು ಸ್ಪಷ್ಟವಾಗುತ್ತಿದೆ" ಎಂದಿದ್ದಾರೆ ಆರ್ಪಿ ಸಿಂಗ್.
ಇನ್ನು ಇದೇ ಸಂದರ್ಭದಲ್ಲಿ ಆರ್ಪಿ ಸಿಂಗ್ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಹೆಚ್ಚಿನ ಬಲ ತುಂಬಿಸುತ್ತದೆ ಎಂದಿದ್ದಾರೆ. ಸತತವಾಗಿ ಗಾಯಕ್ಕೆ ತುತ್ತಾಗುತ್ತಿರುವ ಜಸ್ಪ್ರೀತ್ ಬೂಮ್ರಾ ಬದಲಿಯಾಗಿ ಸೇರ್ಪಡೆಗೊಳಿಸಲು ಸಿರಾಜ್ ಅತ್ಯುತ್ತಮ ಆಯ್ಕೆ ಎಂದಿದ್ದಾರೆ ಆರ್ಪಿ ಸಿಂಗ್.
"ಖಂಡಿತವಾಗಿಯೂ ಸಿರಾಜ್ ಜಸ್ಪ್ರಿತ್ ಬೂಮ್ರಾ ಅವರಿಗೆ ಉತ್ತಮ ಬದಲಿ ಆಟಗಾರ ಎನಿಸಿಕೊಳ್ಳಲಿದ್ದಾರೆ. ಅವರ ಈ ಗ್ರಾಫ್ ಇದೇ ರೀತಿಯಾಗಿ ಏರಿಕೆ ಕಂಡರೆ ಅವರು ಭಾರತ ತಂಡಕ್ಕೆ ಮುಂದಿನ ಮೊಹಮ್ಮದ್ ಶಮಿ ಆಗಲಿದ್ದಾರೆ" ಎಂದು ಬಣ್ಣಿಸಿದ್ದಾರೆ ಮಾಜಿ ಕ್ರಿಕೆಟಿಗ ಆರ್ಪಿ ಸಿಂಗ್.
ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿಯೂ ಕಳೆದ ಒಂದು ವರ್ಷದಿಂದ ಮೊಹಮ್ಮದ್ ಸಿರಾಜ್ ಪ್ರದರ್ಶನ ಅಮೋಘವಾಗಿತ್ತು. ಅದಕ್ಕೆ ಪೂರಕವಾಗಿ ಏಕದಿನ ಕ್ರಿಕೆಟ್ ಮಾದರಿಯಲ್ಲಿ ಸಿರಾಜ್ ಕಳೆದ ಜನವರಿಯಲ್ಲಿ ಐಸಿಸಿ ಬೌಲಿಂಗ್ ಶ್ರೇಯಾಂಕಪಟ್ಟಿಯಲ್ಲಿ ನಂಬರ್1 ಸ್ಥಾನಕ್ಕೇರಿದ್ದರು. ಸದ್ಯ ಸಿರಾಜ್ 2ನೇ ಸ್ಥಾನದಲ್ಲಿದ್ದಾರೆ. ಅಂತಾರಾಷ್ಟ್ರೀಯ ಟಿ20 ಹಾಗೂ ಟೆಸ್ಟ್ ಮಾದರಿಯಲ್ಲಿಯೂ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ ಸಿರಾಜ್.