
ಪ್ರಸ್ತುತ ನಡೆಯುತ್ತಿರುವ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ತಂಡಗಳ ನಡುವಿನ ಜಗಳ ಹಾಗೂ ಕಾಲೆಳೆತ ಸರ್ವೇಸಾಮಾನ್ಯವಾಗಿಬಿಟ್ಟಿದೆ.
ತಂಡಗಳು ತಮ್ಮ ವಿರುದ್ಧ ಕಣಕ್ಕಿಳಿದ ಎದುರಾಳಿ ತಂಡಗಳ ವಿರುದ್ಧ ಜಗಳಕ್ಕೆ ಇಳಿದ ಉದಾಹರಣೆಗಳು ಈ ಬಾರಿ ಹೆಚ್ಚೇ ಇವೆ. ಅದರಲ್ಲೂ ಇತ್ತೀಚೆಗಷ್ಟೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ನಡೆದ ಜಗಳ ದೊಡ್ಡ ಮಟ್ಟದಲ್ಲೇ ಇತ್ತು.
ಒಂದೆಡೆ ಆಟಗಾರರು ಎದುರಾಳಿ ತಂಡದ ಆಟಗಾರರ ಜತೆ ತಾಳ್ಮೆ ಕಳೆದುಕೊಂಡು ಕಿತ್ತಾಡುತ್ತಿದ್ದರೆ ಮತ್ತೊಂದೆಡೆ ಫ್ರಾಂಚೈಸಿಗಳೂ ಸಹ ವಾರ್ ನಡೆಸುತ್ತಿವೆ. ಹೌದು, ಫ್ರಾಂಚೈಸಿಗಳ ಅಧಿಕೃತ ಟ್ವಿಟರ್ ಖಾತೆಗಳು 'ಟೀಮ್ ವಾರ್' ಮಾಡುವುದರಲ್ಲಿ ನಿರತವಾಗಿವೆ.
ಹೌದು, ಕೆಲ ತಂಡಗಳು ಪಂದ್ಯ ನಡೆಯುವ ಮುನ್ನ ತಮ್ಮ ಎದುರಾಳಿ ತಂಡಗಳನ್ನು ಕೆರಳಿಸುವಂತಹ ಪೋಸ್ಟ್ ಹಂಚಿಕೊಳ್ಳುತ್ತಿವೆ. ಇದರಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಎತ್ತಿದ ಕೈ. ತಾವು ಎದುರಿಸಲಿರುವ ತಂಡಗಳ ಕೆಲ ಮೈನಸ್ ಅಂಶಗಳ ಬಗ್ಗೆ ಬೇಕಂತಲೇ ವ್ಯಂಗ್ಯಾತ್ಮಕ ಟ್ವೀಟ್ ಮಾಡಿ ಕೆರಳುವ ಹಾಗೆ ಮಾಡುತ್ತಿವೆ.
ಹೀಗೆ ಎದುರಾಳಿ ತಂಡಗಳ ಬಗ್ಗೆ ವ್ಯಂಗ್ಯವಾಗಿ ಟ್ವೀಟ್ ಮಾಡಿದ ಈ ತಂಡಗಳು ತಕ್ಕ ಪ್ರತಿಕ್ರಿಯೆ ಪಡೆದುಕೊಂಡು ಸೈಲೆಂಟ್ ಆಗಿ ಮುಖಭಂಗಕ್ಕೊಳಗಾದ ಪ್ರಸಂಗಗಳೂ ನಡೆದಿವೆ.
ಹೌದು, ಇಂತಹ ಅವಮಾನಕ್ಕೊಳಗಾದ ಘಟನೆ ನಿನ್ನೆ ( ಮೇ 7 ) ಪಂದ್ಯದ ಬಳಿಕವೂ ನಡೆದಿದೆ. ರಾಜಸ್ಥಾನ್ ರಾಯಲ್ಸ್ ತಂಡ ತನ್ನ ತವರು ಜೈಪುರದಲ್ಲಿ ನಡೆದ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧದ ಪಂದ್ಯದಲ್ಲಿ ಸೋತು ಮುಖಭಂಗಕ್ಕೊಳಗಾಗಿದ್ದು ಮಾತ್ರವಲ್ಲದೇ ಸಂಜು ಸ್ಯಾಮ್ಸನ್ ಜತೆ ಆರ್ ಆರ್ ಆರ್ ಸಿನಿಮಾವನ್ನು ಹೋಲಿಸಿ ಅವಮಾನ ಎದುರಿಸಿದೆ.
ಹೌದು, ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ 20 ಓವರ್ಗಳಲ್ಲಿ 2 ವಿಕೆಟ್ 214 ರನ್ ಬಾರಿಸಿತು. ರಾಜಸ್ಥಾನ್ ರಾಯಲ್ಸ್ ಪರ ನಾಯಕ ಸಂಜು ಸ್ಯಾಮ್ಸನ್ 38 ಎಸೆತಗಳಲ್ಲಿ 4 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ ಅಜೇಯ 66 ರನ್ ಗಳಿಸಿದರು. ಹೀಗೆ ಸಂಜು ಸ್ಯಾಮ್ಸನ್ ಅಬ್ಬರದ ಬ್ಯಾಟಿಂಗ್ ನಡೆಸಿದ ಕಾರಣ ರಾಜಸ್ಥಾನ್ ರಾಯಲ್ಸ್ ಆರ್ಆರ್ಆರ್ ಚಿತ್ರಕ್ಕಿಂತ ಸಂಜು ಸ್ಯಾಮ್ಸನ್ ಗ್ರೇಟ್ ಎಂದು ಟ್ವೀಟ್ ಮಾಡಿತ್ತು.
ಅತ್ಯುತ್ತಮ ಹಂತಕ್ಕೆ ತಲುಪಿರುವ ಆರ್ಆರ್ಆರ್ ಚಿತ್ರಕ್ಕಿಂತ ಒಂದು ಇನ್ನಿಂಗ್ಸ್ನಲ್ಲಿ ಅಬ್ಬರಿಸಿದ ಸಂಜು ಸ್ಯಾಮ್ಸನ್ ಗ್ರೇಟ್ ಎಂದ ರಾಜಸ್ಥಾನ್ ವಿರುದ್ಧ ಹೀನಾಯ ಟ್ರೋಲ್ಗಳು ಎದುರಾದವು. ಅದರಲ್ಲಿಯೂ ಆರ್ಆರ್ಆರ್ ಚಿತ್ರಕ್ಕೆ ಬಂಡವಾಳ ಹೂಡಿರುವ ಡಿವಿವಿ ಎಂಟರ್ಟೈನ್ಮೆಂಟ್ ರಾಜಸ್ಥಾನ್ ರಾಯಲ್ಸ್ ಮಾಡಿದ ಈ ಟ್ವೀಟ್ಗೆ ಮಾಡಿದ ರಿಪ್ಲೈ ರಾಜಸ್ಥಾನ್ ತಂಡದ ಮಾನವನ್ನು ಹರಾಜು ಹಾಕಿದೆ.
ಹೌದು, ತಮ್ಮ ಚಿತ್ರವನ್ನು ಎಳೆದುತಂದ ಕಾರಣಕ್ಕೆ ಮಧ್ಯ ಪ್ರವೇಶಿಸಿದ ಡಿವಿವಿ ಪೊಲೀಸರು ಠಾಣೆಯಲ್ಲಿ ಖೈದಿಯೋರ್ವನಿಗೆ ಸಹಿ ಹಾಕೋ ಎಂದು ತಲೆ ಮೇಲೆ ಬಾರಿಸುವ ದೃಶ್ಯವೊಂದನ್ನು ಟ್ವೀಟ್ ಮಾಡಿದೆ. ಈ ಮೂಲಕ ನೀವು ಎರಡು ವರ್ಷ ಬ್ಯಾನ್ ಆದವರು, ಶಿಕ್ಷೆಗೆ ಒಳಗಾದ ಖೈದಿಗಳು ಎಂದು ಆರ್ಆರ್ಆರ್ ನಿರ್ಮಾಪಕರು ರಾಜಸ್ಥಾನ್ ರಾಯಲ್ಸ್ ತಂಡದ ಮಾನವನ್ನು ಟ್ವೀಟ್ ಮೂಲಕ ಕಳೆದಿದೆ.
ಸುಮ್ಮನೆ ಇರಲಾರದೇ ಆರ್ಆರ್ಆರ್ ಚಿತ್ರವನ್ನು ಎಳೆತಂಡ ರಾಜಸ್ಥಾನ್ ರಾಯಲ್ಸ್ ಅತಿ ಕೆಟ್ಟ ರೀತಿಯಲ್ಲಿ ಟ್ರೋಲ್ ಆಗಿ ನಗೆಪಾಡಲಿಗೀಡಾಗಿದೆ. ಅಲ್ಲದೇ ಪಂದ್ಯ ಸೋತ ಬಳಿಕ ಈ ಟ್ವೀಟ್ ಬಗ್ಗೆ ಕ್ಷಮೆಯನ್ನೂ ಸಹ ಯಾಚಿಸಿದೆ.