ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಮೂರನೇ ಸೋಲಿನ ರುಚಿನ ಕಂಡಿದೆ. ಈ ಬಾರಿ ಗುಜರಾತ್ ಟೈಟನ್ಸ್ ಸೋಲು ಕಂಡಿದ್ದು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ತನ್ನದೇ ತವರಿನ ಮೈದಾನದಲ್ಲಿ. ಅಲ್ಪ ಮೊತ್ತದ ಗುರಿಯನ್ನು ಪಡೆದ ಹೊರತಾಗಿಯೂ ಗುಜರಾತ್ ಟೈಟನ್ಸ್ ಈ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ.
ಈ ಪಂದ್ಯದ ಸೋಲಿನ ಬಗ್ಗೆ ಯುವ ಆಟಗಾರ ಶುಬ್ಮನ್ ಗಿಲ್ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ತಂಡ ಎಲ್ಲಿ ಎಡವಿತು ಎಂಬುದನ್ನು ವಿವರಿಸಿದ್ದು ಸೋಲಿಗೆ ಕಾರಣವಾದ ಅಂಶವನ್ನು ಬೊಟ್ಟುಮಾಡಿದ್ದಾರೆ. ತಂಡದಲ್ಲಿ ಉತ್ತಮ ಜೊತೆಯಾಟ ಬಾರದಿರುವುದು ಕೆಳ ಕ್ರಮಾಂಕದ ಮೇಲೆ ಒತ್ತಡವನ್ನುಂಟು ಮಾಡಿತು ಎಂದಿರುವ ಗಿಲ್ ಇದೇ ಸೋಲಿಗೂ ಕಾರಣವಾಯಿತು ಎಂದಿದ್ದಾರೆ.

ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಒಂದು ಹಂತದಲ್ಲಿ 23 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಕೆಳ ಕ್ರಮಾಂಕ ಆಟಗಾರರಿಂದ ಬಂದ ಅದ್ಭುತ ಪ್ರದರ್ಶನದಿಂದಾಗಿ ತಂಡ 130 ರನ್ಗಳ ಗೌರವಯುತ ರನ್ಗಳಿಸಲು ಸಾಧ್ಯವಾಯಿತು. ಅಕ್ಷರ್ ಪಟೇಲ್ 30 ಎಸೆತಗಳಲ್ಲಿ 27 ರನ್ಗಳಿಸಿದರೆ ಅಮನ್ ಹಕಿಮ್ ಖಾನ್ 44 ಎಸೆತಗಳಲ್ಲಿ 51 ರನ್ಗಳಿಸಿದ್ದು ತಂಡಕ್ಕೆ ದೊಡ್ಡ ಆಸರೆಯಾಯಿತು. ರಿಪಲ್ ಪಟೇಲ್ ಕೂಡ 13 ಎಸೆತಗಳಲ್ಲಿ 23 ರನ್ಗಳಿಸಿದರು. ಮೊಹಮ್ಮದ್ ಶಮಿ ಕೇವಲ 11 ರನ್ ನೀಡಿ 4 ವಿಕೆಟ್ ಕಬಳಿಸಿದ್ದಾರೆ.
ಈ ಮೊತ್ತವನ್ನು ಬೆನ್ನಟ್ಟಿದ ಗುಜರಾತ್ ಟೈಟನ್ಸ್ ತಂಡ ಕೂಡ ಆರಂಭದಲ್ಲಿಯೇ ವಿಕೆಟ್ ಕಳೆದುಕೊಳ್ಳಲು ಆರಂಭಿಸಿತ್ತು.32 ರನ್ಗಳಿಸುವಷ್ಟರಲ್ಲಿ ಪ್ರಮುಖ 4 ವಿಕೆಟ್ಗಳು ಉರುಳಿದ್ದವು. ಆದರೆ ನಾಯಕ ಹಾರ್ದಕ್ ಪಾಂಟ್ಯ ಎಚ್ಚರಿಕೆಯ ಬ್ಯಾಟಿಂಗ್ ನಡೆಸುತ್ತಾ ಕೊನೆಯ ಹಂತದವರೆಗೂ ಕ್ರೀಸ್ನಲ್ಲಿ ನಲೆಯೂರಿ ನಿಂತರು. ಆದರೆ ರನ್ ವೇಗ ಹೆಚ್ಚದಿರುವುದು ತಂಡಕ್ಕೆ ಹಿನ್ನಡೆಯಾಯಿ. ಡೆಲ್ಲಿ ಕ್ಯಾಪಿಟಲ್ಸ ಬೌಲರ್ಗಳು ಅದ್ಭುತ ಬೌಲಿಂಗ್ ಪ್ರದರ್ಶಿಸಿ ಹಾಲಿ ಚಾಂಪಿಯನ್ ತಂಡವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಹೀಗಾಗಿ ಜಿಟಿ ತಂಡ ಈ ಪಂದ್ಯದಲ್ಲಿ 125 ರನ್ಗಳನ್ನು ಮಾತ್ರವೇ ಗಳಿಸಲು ಶಕ್ತವಾಯಿತು. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ 5 ರನ್ಗಳ ಅಂತರದ ಗೆಲುವು ಸಾಧಿಸಿದೆ.
"ಪಿಚ್ ಕೆಟ್ಟದಾಗಿ ಇರಲಿಲ್ಲ. ನಮ್ಮ ಬೌಲರ್ಗಳು ಅದ್ಭುತವಾಗಿ ಪ್ರದರ್ಶನ ನೀಡಿದ್ದರು. ಆದರೆ ಅಗ್ರ ಕ್ರಮಾಂಕದಲ್ಲಿ ಜೊತೆಯಾಟವನ್ನು ನೀಡಲು ನಾವು ವಿಫಲವಾದೆವು. ಅದು ಕೆಳ ಕ್ರಮಾಂಕದ ಮೇಲೆ ಒತ್ತಡ ಬೀಳುವಂತೆ ಮಾಡಿತು. ಇಲ್ಲಿನ ಪಿಚ್ ಬ್ಯಾಟಿಂಗ್ ನಡೆಸಲು ಸವಾಲಿನಿಂದ ಕೂಡಿದೆ. ಆದರೆ ನಮ್ಮಲ್ಲಿರುವ ಬ್ಯಾಟಿಂಗ್ ಸಾಮರ್ಥ್ಯಕ್ಕೆ 131 ರನ್ಗಳಿಸಿವುದು ಕಷ್ಟವಾಗಿರಲಿಲ್ಲ" ಎಂದಿದ್ದಾರೆ ಶುಬ್ಮನ್ ಗಿಲ್.
ಇನ್ನು ಇದೇ ಸಂದರ್ಭದಲ್ಲಿ ಶುಬ್ಮನ್ ಗಿಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಇಬ್ಬರು ಬೌಲರ್ಗಳು ಡಿಸಿ ದಾಂಡಿಗರಿಗೆ ದುಸ್ವಪ್ನವಾದರು ಎಂಬುದನ್ನು ಹೇಳಿದ್ದಾರೆ. ಸ್ಪಿನ್ನರ್ಗಳಾದ ಅಕ್ಷರ್ ಪಟೃಲ್ ಹಾಗೂ ಕುಲ್ದೀಪ್ ಯಾದವ್ ಟೈಟನ್ಸ್ ತಂಡದ ರನ್ ಬೆನ್ನಟ್ಟುವ ಕಾರ್ಯವನ್ನು ಮತ್ತಷ್ಟು ಕಠಿಣಗೊಳಿಸಿದರು ಎಂದಿದ್ದಾರೆ. ಈ ಪಂದ್ಯದಲ್ಲಿ ಅಕ್ಷರ್ ವಿಕೆಟ್ ಪಡೆಯದಿದ್ದರೂ ರನ್ ನೀಡದ ಎದುರಾಳಿಗೆ ಕಠಿಣ ಸವಾಲಾದರು.
ಮುಂದುವರಿದು ಗಿಲ್ "ಆಟಗಾರನಾಗಿ ಹಾಗೂ ಬ್ಯಾಟರ್ ಆಗಿ ನಾವೆಲ್ಲರೂ ಒಂದು ಕೆಟ್ಟ ದಿನವನ್ನು ಕಾಣುತ್ತೇವೆ. ಇಂಥಾ ದಿನಗಳಲ್ಲಿ ನಮಗೆ ನಾವೇ ಬೆಂಬಲವನ್ನು ನೀಡಬೇಕು. ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅಂಥಾದ್ದೇ ಕಠೀಣ ದಿನವನ್ನು ಹೊಂದಿದ್ದರು ಕೂಡ ಕೊನೆಯ ತನಕ ಬ್ಯಾಟಿಂಗ್ ನಡೆಸಿ ಗೆಲುವಿಗಾಗಿ ಶ್ರಮಿಸಿದರು. ಆದರೆ ಡಿಸಿ ಬೌಲರ್ಗಳು ಕೊನೆಯ ಹಂತದಲ್ಲಿ ಅದ್ಭುತ ಯಾರ್ಕರ್ಗಳನ್ನು ಎಸೆದು ಸವಾಲಾದರು" ಎಂದಿದ್ದಾರೆ ಶುಬ್ಮನ್ ಗಿಲ್.