ಚೆನ್ನೈ ಸೂಪರ್ ಕಿಂಗ್ಸ್ 4 ವರ್ಷಗಳ ಬಳಿಕ ತವರಿನಲ್ಲಿ ಪಂದ್ಯಗಳನ್ನಾಡುತ್ತಿದೆ. ತವರಿನಲ್ಲಿ ನಡೆದ ಈ ಐಪಿಎಲ್ನ ಮೊದಲ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗೆಲುವು ಸಾಧಿಸಿದೆ. ಇಂದು ರಾಜಸ್ಥಾನ ರಾಯಲ್ಸ್ ವಿರುದ್ಧ ಮತ್ತೆ ಚೆಪಾಕ್ ಅಂಗಳದಲ್ಲಿ ಆಡಲು ಸಜ್ಜಾಗಿದೆ. ಧೋನಿ ಆಟವನ್ನು ಕಣ್ತುಂಬಿಕೊಳ್ಳಲು ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ.
ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯಕ್ಕೆ ಮುನ್ನವೇ ಸಿಎಸ್ಕೆ ತಂಡವನ್ನು ಐಪಿಎಲ್ನಿಂದ ಬ್ಯಾನ್ ಮಾಡಬೇಕು ಎಂದು ಶಾಸಕರೊಬ್ಬರು ಒತ್ತಾಯಿಸಿದ್ದಾರೆ. ಪಟ್ಟಾಲಿ ಮಕ್ಕಳ್ ಕಚ್ಚಿ (ಪಿಎಂಕೆ) ಶಾಸಕ ಎಸ್ ಪಿ ವೆಂಕಟೇಶ್ವರನ್ ಈ ಬಾರಿ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಸಿಎಸ್ಕೆಯನ್ನು ಏಕೆ ನಿಷೇಧಿಸಬೇಕು ಎಂಬುದರ ಕುರಿತು ಎಸ್ ಪಿ ವೆಂಕಟೇಶ್ವರನ್ ಹೇಳಿಕೆ ನೀಡಿದ್ದಾರೆ.

ಚೆನ್ನೈ ಸೂಪರ ಕಿಂಗ್ಸ್ ತಂಡ ತಮಿಳುನಾಡು ತಂಡ ಎನ್ನುವಂತೆ ಬ್ರಾಂಡ್ ಆಗಿದ್ದರೂ, 2023ರ ಐಪಿಎಲ್ನಲ್ಲಿ ಸಿಎಸ್ಕೆ ತಂಡದಲ್ಲಿ ರಾಜ್ಯದ ಆಟಗಾರರಿಗೆ ಸ್ಥಾನ ನೀಡಿಲ್ಲ ಎಂದು ವೆಂಕಟೇಶ್ವರನ್ ಹೇಳಿದ್ದಾರೆ. ವಿಧಾನಸಭೆಯಲ್ಲಿ ಯುವ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಇಲಾಖೆಗೆ ಅನುದಾನದ ಬೇಡಿಕೆಯ ಮೇಲಿನ ಚರ್ಚೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕರು ತಮ್ಮ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.
ಇದು ತಮಿಳುನಾಡಿದ ತಂಡವೆಂದು ಜಾಹೀರಾತು ನೀಡುವ ಮೂಲಕ ನಮ್ಮ ಜನರಿಂದ ಲಾಭ ಮಾಡಿಕೊಳ್ಳುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಹಲವು ಪ್ರತಿಭಾವಂತ ಆಟಗಾರರು ಇದ್ದರೂ, ಅವರಿಗೆ ಸಿಎಸ್ಕೆ ತಂಡದಲ್ಲಿ ಸ್ಥಾನ ನೀಡಿಲ್ಲ ಎಂದು ಆರೋಪ ಮಾಡಿದ್ದು ತಂಡದ ಮೇಲೆ ನಿಷೇಧ ಹೇರಬೇಕು ಎಂದು ಆಗ್ರಹಿಸಿದ್ದಾರೆ.

ಸ್ಥಳೀಯ ಆಟಗಾರರಿಗೆ ಯಾಕಿಲ್ಲ ಅವಕಾಶ ?
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆಡುವ ಬಹುತೇಕ ತಂಡಗಳಲ್ಲಿ ಇದೇ ಸಮಸ್ಯೆ ನೋಡಬಹುದು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕೇವಲ ಇಬ್ಬರು ಕರ್ನಾಟಕದ ಆಟಗಾರರು ಮಾತ್ರ ಇದ್ದರೂ, ಅವರು ಒಂದು ಪಂದ್ಯದಲ್ಲಿ ಕೂಡ ಆಡಲು ಅವಕಾಶ ಪಡೆದುಕೊಂಡಿಲ್ಲ. ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡದಲ್ಲಿ ಮಾತ್ರ ಸ್ಥಳೀಯ ಆಟಗಾರರಿಗೆ ಅವಕಾಶ ಸಿಗುತ್ತಿದೆ. ಫ್ರಾಂಚೈಸಿ ಆಗಿರುವುದರಿಂದ ಸ್ಥಳೀಯ ಆಟಗಾರರನ್ನು ಸೇರಿಸಿಕೊಳ್ಳಲೇಬೇಕು ಎನ್ನುವ ನಿಯಮ ಇಲ್ಲ. ಆದರೂ, ಸ್ಥಳೀಯ ಆಟಗಾರರು ಆಡಿದರೆ, ಆ ತಂಡಕ್ಕೆ ಲಾಭ ಹೆಚ್ಚು ಎನ್ನುವುದು ಕೂಡ ಇದೆ.
ಸಿಎಸ್ಕೆ ತಂಡದಲ್ಲಿ ಸ್ಥಳೀಯ ಆಟಗಾರರು ಇಲ್ಲದೇ ಇದ್ದರೂ ತಂಡದ ನಾಯಕ ಎಂಎಸ್ ಧೋನಿಯನ್ನು ಅಲ್ಲಿಯ ತಮ್ಮ ಮನೆ ಮಗ ಎನ್ನುವಂತೆಯೇ ಪ್ರೀತಿಸುತ್ತಾರೆ ಎನ್ನುವುದು ಕೂಡ ನಿಜ, ಅದಕ್ಕೆ ಧೋನಿಯನ್ನು ತಲಾ ಎಂದು ಕೂಡ ಕರೆಯುತ್ತಾರೆ. ರವೀಂದ್ರ ಜಡೇಜಾ, ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಅವರ ಮೇಲೂ ಕೂಡ ಅಪಾರ ಗೌರವ ಹೊಂದಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ: ಡೆವೊನ್ ಕಾನ್ವೆ, ರುತುರಾಜ್ ಗಾಯಕ್ವಾಡ್, ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ಎಂಎಸ್ ಧೋನಿ (ನಾಯಕ), ಶಿವಂ ದುಬೆ, ಡ್ವೈನ್ ಪ್ರಿಟೋರಿಯಸ್, ದೀಪಕ್ ಚಾಹರ್, ಮಿಚೆಲ್ ಸ್ಯಾಂಟ್ನರ್, ಸಿಸಂದಾ ಮಗಾಲ, ತುಷಾರ್ ದೇಶಪಾಂಡೆ, ಅಂಬಟಿ ರಾಯುಡು, ಆಕಾಶ್ ಸಿಂಗ್, ಮೊಯಿನ್ ಅಲಿ, ಬೆನ್ ಸ್ಟೋಕ್ಸ್, ನಿಶಾಂತ್ ಸಿಂಧು, ಅಜಯ್ ಜಾದವ್ ಮಂಡಲ್, ಪ್ರಶಾಂತ್ ಸೋಲಂಕಿ, ಸಿಮರ್ಜೀತ್ ಸಿಂಗ್, ಭಗತ್ ವರ್ಮಾ, ಮಹೀಶ್ ತೀಕ್ಷಣ, ಮಥೀಶ ಪತಿರಾನಾ, ಸುಬ್ರಾಂಶು ಸೇನಾಪತಿ, ಆರ್ ಎಸ್ ಹಂಗರ್ಗೇಕರ್.