ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಗಾಯದಿಂದ ಐಪಿಎಲ್ನ ಉಳಿದ ಪಂದ್ಯಗಳಿಂದ ಹೊರಬಿದ್ದಿದ್ದಾರೆ. ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಗಾಯಗೊಂಡಿದ್ದ ಕೆಎಲ್ ರಾಹುಲ್ ಕಳೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದರು. ಇದೀಗ ಟೂರ್ನಿಯಿಂದಲೇ ಅವರು ಅನಿವಾರ್ಯವಾಗಿ ಔಟಾಗಿದ್ದಾರೆ. ಇಂಥಾ ನಿರ್ಣಾಯಕ ಘಟ್ಟದಲ್ಲಿ ತಂಡದ ನಾಯಕನೇ ಅಲಭ್ಯವಾಗುತ್ತಿರುವುದು ತಂಡಕ್ಕೆ ಸಹಜವಾಗಿಯೇ ಆಘಾತ ನೀಡಿದೆ.
ಈ ಹಂತದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಕೆಎಲ್ ರಾಹುಲ್ಗೆ ಬದಲಿ ಆಟಗಾರನನ್ನು ಸೇರ್ಪಡೆಗೊಳಿಸಲಿದೆಯೇ? ಸೇರ್ಪಡೆಗೊಳಿಸಿದರೆ ಯಾವ ಆಟಗಾರ ಅವಕಾಶ ಗಿಟ್ಟಿಸಿಕೊಳ್ಳಬಹುದು ಎಂಬುದು ಕುತೂಹಲ ಮೂಡಿಸಿದೆ. ವಿದೇಶೀ ಸ್ಟಾರ್ ಆಟಗಾರರು ತುಂಬಿರುವ ಕಾರಣ ಎಲ್ಎಸ್ಜಿ ತಂಡ ಭಾರತದ ಆಟಗಾರರನ್ನೇ ಸೇರ್ಪಡೆಗೊಳಿಸುವ ಸವಾಲನ್ನು ಕೂಡ ಹೊಂದಿದ್ದು ಲಭ್ಯರುವ ಆಟಗಾರರಲ್ಲಿ ಯಾರನ್ನು ಆಯ್ಕೆ ಮಾಡುವುದು ಎಂಬುದು ಎಲ್ಎಸ್ಜಿಗೆ ಸವಾಲಾಗಿದೆ.

ಹಾಗಾದರೆ ಎಲ್ಎಸ್ಜಿ ತಂಡದ ಮುಂದೆ ಕೆಎಲ್ ರಾಹುಲ್ಗೆ ಬದಲಿ ಆಟಗಾರನಾಗಿ ಸೇರಿಕೊಳ್ಳಲು ಯಾವ ಆಟಗಾರರಿಗೆ ಅವಕಾಶವಿದೆ? ಐಪಿಎಲ್ ಹರಾಜಿನಲ್ಲಿ ಯಾರಿಗೂ ಹರಾಜಾಗದೆ ಉಳಿದ ಕನ್ನಡಿಗ ಅನುಭವಿ ಆಟಗಾರನಿಗೆ ಮತ್ತೊಂದು ಅವಕಾಶ ದೊರೆಯಲಿದೆಯಾ ಎಂಬುದು ಈಗ ಇರುವ ಕುತೂಹಲ. ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಸೇರ್ಪಡೆಗೊಳಿಸಲು ಇರುವ ನಾಲ್ಕು ಉತ್ತಮ ಆಯ್ಕೆಗಳ ಬಗ್ಗೆ ಇಲ್ಲಿದೆ ಮಾಹಿತಿ.
ಕನ್ನಡಿಗ ಕರುಣ್ ನಾಯರ್
ಐಪಿಎಲ್ನಲ್ಲಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಲು ಮತ್ತೊಂದು ಅದ್ಭುತವಾದ ಅವಕಾಶ ಕರುನ್ ನಾಯರ್ಗೆ ಬಂದಂತೆ ತೋರುತ್ತಿದೆ. ಅನುಭವಿ ಆಟಗಾರನಾಗಿರುವ ಕರುಣ್ ಕಳೆದ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರವಾಗಿ ಕಣಕ್ಕಿಉಳಿದಿದ್ದರು. ಆದರೆ ಕಳೆದ ಆವೃತ್ತಿಯಲ್ಲಿ ಸಮರ್ಪಕವಾದ ಪಾತ್ರವನ್ನು ಕರುಣ್ ನೀಡಿರಲಿಲ್ಲ. ನಂತರ ಹರಾಜಿಗೆ ಬಿಡುಗಡೆಯಾಗಿದ್ದ ಕರಿಉಣ್ ನಾಯರ್ ಅವರನ್ನು ಯಾವ ತಂಡ ಕೂಡ ಖರೀದಿಸಿರಲಿಲ್ಲ. ಇದೀಗ ಕರುಣ್ ನಾಯರ್ ವೃತ್ತಿ ಜೀವನದಲ್ಲಿ ಹೊಸ ತಿರುವು ದೊರೆಯಲಿದೆಯಾ ಎಂಬುದು ಕುತೂಹಲ ಮೂಡಿಸಿದೆ.
ಕುರ್ಕೀರತ್ ಸಿಂಗ್ ದೊರೆಯುತ್ತಾ ಅವಕಾಶ
ಕಳೆದ ಐಪಿಎಲ್ ಆವೃತ್ತಿಯಲ್ಲಿ ಚಾಂಪಿಯನ್ ಆಗಿದ್ದ ಗುಜರಾತ್ ಟೈಟನ್ಸ್ ತಂಡದ ಸದಸ್ಯನಾಗಿದ್ದ ಆಟಗಾರ ಗುರ್ಕೀರತ್ ಸಿಂಗ್ ಮನ್. ಆದರೆ ಈ ಆವೃತ್ತಿಗೆ ಮುನ್ನ ಅವರನ್ನು ಹರಾಜಿಗೆ ಬಿಡಲಾಗಿತ್ತು. ಫಿನಿಷರ್ ಆಗಿರುವ ಗುರ್ಕೀರತ್ ಸಿಂಗ್ ಎಲ್ಎಸ್ಜಿ ತಂಡದ ಬ್ಯಾಟಿಂಗ್ ಲೈನಲ್ಗೆ ಮತ್ತಷ್ಟು ಬಲ ತುಂಬುವ ಸಾಮರ್ಥ್ಯ ಹೊಂದಿರುವ ಆಟಗಾರ. ಅಲ್ಲದೆ ಬೌಲಿಂಗ್ನಲ್ಲಿಯೂ ಕೆಲ ಓವರ್ಗಳನ್ನು ಎಸೆಯುವ ಸಾಮರ್ಥ್ಯ ಹೊಂದಿದ್ದಾರೆ.
ಮೊಹಮ್ಮದ್ ಅಜರುದ್ದೀನ್
ಕೇರಳದ ಯುವ ಆಟಗಾರ ಮೊಹಮ್ಮದ್ ಅಜರುದ್ದೀನ್ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮುಂಬೈ ವಿರುದ್ಧ ಶತಕ ಸಿಡಿಸಿ ಅಬ್ಬರಿಸಿದ್ದರು. ಐಪಿಎಲ್ನಲ್ಲಿ ಈವರೆಗೂ ಅವಕಾಶ ದೊರೆಯದ ಅಜರುದ್ದೀನ್ ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ. ಕೆಎಲ್ ರಾಹುಲ್ ಬದಲಿಗೆ ಆರಂಭಿಕನಾಗಿ ಅತ್ಯುತ್ತಮ ಆಯ್ಕೆಯಾಗಲಿದ್ದಾರೆ ಈ ಯುವ ಆಟಗಾರ.
ಅಭಿಮನ್ಯು ಈಶ್ವರನ್
ಲಕ್ನೋ ಸೂಪರ್ಜೈಂಟ್ಸ್ ತಂಡ ಆರಂಬಿಕನಾಗಿ ಆಂಕರ್ ಪಾತ್ರವನ್ನು ನಿಭಾಯಿಸಬಲ್ಲ ಆಟಗಾರನನ್ನು ಎದುರುನೋಡುತ್ತಿದ್ದರೆ ಅಭಿಮನ್ಯು ಈಶ್ವರನ್ ಅದಕ್ಕೆ ಸೂಕ್ತವಾದ ಆಯ್ಕೆ ಎನಿಸಲಿದ್ದಾರೆ. ಅಭಿಮನ್ಯು ಈಶ್ವರನ್ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೇರಿಕೊಳ್ಳುವ ಅವಕಾಶವಿತ್ತು. ಆದರೆ ಅದು ಕೊನೆಯ ಹಂತದಲ್ಲಿ ಸಾಧ್ಯವಾಗಲಿಲ್ಲ. ಇದೀಗ ಎಲ್ಎಸ್ಜಿ ಈ ಸೇರ್ಪಡೆ ಮಾಡಿಕೊಳ್ಳಲಿದೆಯಾ ಎಂಬುದು ಕುತೂಹಲ ಮೂಡಿಸಿದೆ.