ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಮೋಘ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಆರ್ಸಿಬಿ ಪಾಲಿಗೆ ಅತ್ಯಂತ ಮಹತ್ವದ್ದಾಗಿದ್ದ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿಯ ಶತಕ ತಂಡಕ್ಕೆ ಮಹತ್ವದ ಗೆಲುವು ತಂದುಕೊಟ್ಟಿದೆ. ಈ ಗೆಲುವಿನೊಂದಿಗೆ ಫಾಫ್ ಡು ಪ್ಲೆಸಿಸ್ ನೇತೃತ್ವದ ಆರ್ಸಿಬಿ ತಂಡ ಪ್ಲೇಆಫ್ ಹಂತಕ್ಕೇರುವ ಅವಕಾಶವನ್ನು ಹೆಚ್ಚಿಸಿಕೊಂಡಿದೆ.
ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಶತಕವನ್ನು ಸಿಡಿಸಿದ್ದು ಇದು ಐಪಿಎಲ್ನಲ್ಲಿ ಕೊಹ್ಲಿ ಸಿಡಿಸಿದ 6ನೇ ಶತಕ. ಈ ಮೂಲಕ ಐಪಿಎಲ್ನಲ್ಲಿ ಅತ್ಯಂತ ಹೆಚ್ಚು ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಮೊದಲ ಸ್ಥಾನವನ್ನು ಕ್ರಿಸ್ ಗೇಲ್ ಜೊತೆಗೆ ಹಂಚಿಕೊಂಡಿದ್ದಾರೆ. ಇನ್ನು ಈ ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಮಾತನಾಡಿದ್ದು ಕೊಹ್ಲಿ ಈ ಟೂರ್ನಿಯ ಜೊತೆಗೆ ಮುಂದಿನ ತಿಂಗಳು ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯಕ್ಕೂ ತಮ್ಮೊಳಗೇ ತಯಾರಿ ಆರಂಭಿಸಿರುವ ಸೂಚನೆ ನೀಡಿದ್ದಾರೆ.

IPL 2023: 6ನೇ ಐಪಿಎಲ್ ಶತಕ ಸಿಡಿಸಿದ ವಿರಾಟ್: ಕ್ರಿಸ್ ಗೇಲ್ ದಾಖಲೆ ಸರಿಗಟ್ಟಿದ ಆರ್ಸಿಬಿ ದಿಗ್ಗಜ
ಫ್ಯಾನ್ಸಿ ಶಾಟ್ ಆಡಲ್ಲ.. ಕಾರಣ WTC ಫೈನಲ್!
ಪಂದ್ಯದ ಮುಕ್ತಾಯದ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ ತಾವು ತೆಗೆದುಕೊಂಡ ಒಂದು ದೃಢ ನಿರ್ಧಾರವನ್ನು ಹೇಳಿಕೊಂಡಿದ್ದಾರೆ. ಅಲ್ಲದೆ ಅದಕ್ಕೆ ಕಾರಣ ಮುಂದಿನ ತಿಂಗಳು ನಡೆಯಲಿರುವ ಟೆಸ್ಟ್ ಪಂದ್ಯವಾಗಿದ್ದು ತನ್ನ ಬ್ಯಾಟಿಂಗ್ ಕೌಶಲ್ಯದ ಮೇಲೆ ಹೆಚ್ಚು ಗಮನಹರಿಸಬೇಕಾಗಿದೆ ಎಂಬ ಮಾತನ್ನು ಹೇಳಿದ್ದಾರೆ. ಈ ಮೂಲಕ ಅನಗತ್ಯ ಹೊಡೆತಗಳಿಗೆ ಮುಂದಾದಗಂತೆ ಎಚ್ಚರಿವಹಿಸಿರುವುದಾಗಿ ಹೇಳಿದ್ದಾರೆ.
"ಹೊರಗಡೆ ಜನರು ಏನು ಹೇಳುತ್ತಿದ್ದಾರೆ ಎಂಬುದರ ಬಗ್ಗೆ ನಾನು ಗಮನಗರಿಸುತ್ತಿಲ್ಲ. ಅದು ಅವರ ಅಭಿಪ್ರಾಯಗಳು. ಆದರೆ ನಾನು ಇಲ್ಲಿ ಫ್ಯಾನ್ಸಿ ಶಾಟ್ಗಳು ಹೊಡೆಯಬಾರದು ಎಂದು ನಿರ್ಧರಿಸಿದ್ದು ಆ ಮೂಲಕ ವಿಕೆಟ್ ಕೈಚೆಲ್ಲುವುದು ಇಷ್ಟವಿರಲಿಲ್ಲ. ಯಾಕೆಂದರೆ ಮುಂದಿನ ತಿಂಗಳು ನಾವು ಟೆಸ್ಟ್ ಪಂದ್ಯವನ್ನು ಆಡಬೇಕಿದ್ದು ನನ್ನ ಕೌಶಲ್ಯದ ಮೇಲೆ ಗಮನಹರಿಸಬೇಕಿತ್ತು" ಎಂದಿದ್ದಾರೆ ವಿರಾಟ್ ಕೊಹ್ಲಿ.
ಆರಂಭದಿಂದಲೇ ಆಕ್ರಮಣಕಾರಿ ಆಟ
ಈ ಭಾರಿಯ ಐಪಿಎಲ್ ಆವೃತ್ತಿಯಲ್ಲಿ ಕೊಹ್ಲಿ ಬ್ಯಾಟ್ನಿಂದ ಉತ್ತಮವಾಗಿ ರನ್ಗಳು ಹರಿದುಬರುತ್ತಿದ್ದರೂ ಕೊಹ್ಲಿ ಸ್ಟ್ರೈಕ್ರೇಟ್ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದ್ದಿದ್ದವು. ಅನೇಕ ಟೀಕೆಗಳನ್ನು ಕೂಡ ಕೊಹ್ಲಿ ಎದುರಿಸಿದ್ದಾರೆ. ಆದರೆ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆರಂಭದಿಂದಲೇ ಆಕ್ರಮಣಕಾರಿ ಆಟದ ಮೊರೆಹೋದರು. ಭುವನೇಶ್ವರ್ ಕುಮಾರ್ ಎಸೆದ ಮೊದಲ ಓವರ್ನ ಆರಂಭಿಕ ಎರಡು ಎಸೆತಗಳಲ್ಲಿಯೇ ಸತತ ಎರಡು ಬೌಂಡರಿ ಬಾರಿಸಿದ ಕೊಹ್ಲಿ ಬಳಿಕ ಹಿಂದಿರುಗಿ ನೋಡಲೇ ಇಲ್ಲ. ಒಟ್ಟು 63 ಎಸೆತ ಎದುರಿಸಿದ ಕೊಹ್ಲಿ 12 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 100 ರನ್ ಬಾರಿಸಿ ವಿಕೆಟ್ ಕಳೆದುಕೊಂಡರು.
ಪ್ಲೇಆಫ್ ಪ್ರವೇಶಕ್ಕೆ ಇನ್ನು ಒಂದು ಗೆಲುವು
ಆರ್ಸಿಬಿ ಟೂರ್ನಿಯಲ್ಲಿ ಈಗಾಗಲೇ 13 ಪಂದ್ಯಗಳನ್ನು ಆಡಿದೆ. ಲೀಗ್ ಹಂತದಲ್ಲಿ ಆರ್ಸಿಬಿ ತಂಡಕ್ಕೆ ಇನ್ನು ಕೇವಲ ಒಂದು ಪಂದ್ಯ ಮಾತ್ರವೇ ಬಾಕಿಯಿದೆ. ಭಾನುವಾರ ಲೀಗ್ ಹಂತದ ಕೊನೆಯ ಪಂದ್ಯವನ್ನು ಆರ್ಸಿಬಿ ಗುಜರಾತ್ ಟೈಟನ್ಸ್ ವಿರುದ್ಧ ಆಡಲಿದೆ. ಆ ಪಂದ್ಯದಲ್ಲಿ ಆರ್ಸಿಬಿ ಗೆಲುವು ಸಾಧಿಸಿದರೆ ತಂಡ ಪ್ಲೇಆಫ್ಗೆ ಪ್ರವೇಶಿಸುವುದು ಖಚಿತ. ಹೀಗಾಗಿ ಆ ನಿರ್ಣಾಯಕ ಪಂದ್ಯದಲ್ಲಿ ಆರ್ಸಿಬಿ ಗೆಲುವಿನ ಮೇಲೆ ಅಭಿಮಾನಿಗಳ ಚಿತ್ತ ನೆಟ್ಟಿದೆ.