ದಕ್ಷಿಣ ಆಫ್ರಿಕಾ ಮತ್ತು ಆರ್ಸಿಬಿ ತಂಡದ ಲೆಜೆಂಡ್ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಅವರು ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ಅವರ ಐಪಿಎಲ್ ಕ್ರಿಕೆಟ್ ಭವಿಷ್ಯದ ಬಗ್ಗೆ ದಿಟ್ಟ ಭವಿಷ್ಯ ನುಡಿದಿದ್ದಾರೆ.
ಎಂಎಸ್ ಧೋನಿ ಅವರನ್ನು ಐಪಿಎಲ್ 2024ರ ಆವೃತ್ತಿಗೆ ಸಿಎಸ್ಕೆ ನಾಯಕನಾಗಿ ಉಳಿಸಿಕೊಳ್ಳಲಾಗಿದೆ. ಮುಂದಿನ ಐಪಿಎಲ್ ಋತುವಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಉಳಿಸಿಕೊಂಡ ಆಟಗಾರರ ಪಟ್ಟಿಯಲ್ಲಿ ಲೆಜೆಂಡ್ ಕ್ರಿಕೆಟಿಗನ ಹೆಸರನ್ನು ನೋಡಲು ಸಂತೋಷವಾಗಿದೆ ಎಂದು ಎಬಿ ಡಿವಿಲಿಯರ್ಸ್ ತಿಳಿಸಿದ್ದಾರೆ.

ಐಪಿಎಲ್ 2023ರ ಋತುವಿನಲ್ಲಿ ಎಂಎಸ್ ಧೋನಿ ಮೊಣಕಾಲು ನೋವಿನ ನಡುವೆಯೂ ಆಡಿದರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ತಮ್ಮ ಐದನೇ ಪ್ರಶಸ್ತಿಗೆ ಮುನ್ನಡೆಸಿದರು.
ಅನುಭವಿ ವಿಕೆಟ್ಕೀಪರ್-ಬ್ಯಾಟರ್ ಎಂಎಸ್ ಧೋನಿ ಕಳೆದ ಐಪಿಎಲ್ನಲ್ಲಿ ಆಡಿದ 16 ಪಂದ್ಯಗಳಲ್ಲಿ 184ರ ಅದ್ಭುತ ಸ್ಟ್ರೈಕ್ ರೇಟ್ನಲ್ಲಿ 104 ರನ್ ಗಳಿಸಿದರು ಮತ್ತು ಫಿನಿಶರ್ ಕೆಲಸವನ್ನು ಪರಿಪೂರ್ಣವಾಗಿ ನಿರ್ವಹಿಸಿದರು.

2023ರ ಐಪಿಎಲ್ ಪ್ರಶಸ್ತಿಯನ್ನು ಗೆದ್ದ ನಂತರ ಎಂಎಸ್ ಧೋನಿ ತಮ್ಮ ಭವಿಷ್ಯದ ಬಗ್ಗೆ ಊಹಾಪೋಹಗಳಿಗೆ ತೆರೆ ಎಳೆದರು ಮತ್ತು 2024ರಲ್ಲಿ ಸಿಎಸ್ಕೆ ತಂಡಕ್ಕಾಗಿ ಆಡಲು ಮರಳುವುದಾಗಿ ಘೋಷಿಸಿದರು. ಈ ಮೂಲಕ ತಮ್ಮನ್ನು ಬೆಂಬಲಿಸಿದ ಅಭಿಮಾನಿಗಳಿಗೆ ಉಡುಗೊರೆ ನೀಡಿದರು.
"ನಾನು ಎಂಎಸ್ ಧೋನಿ ಹೆಸರನ್ನು ಉಳಿಸಿಕೊಂಡ ಆಟಗಾರರ ಪಟ್ಟಿಯಲ್ಲಿ ನೋಡಿದೆ ಮತ್ತು ಅದು ನನಗೆ ಸಂತೋಷವನ್ನು ನೀಡುತ್ತದೆ. ಕಳೆದ ಸೀಸನ್ನಲ್ಲಿ ಅದು ಅವನ ಕೊನೆಯ ಸೀಸನ್ ಆಗಲಿದೆಯೇ ಎಂಬುದರ ಕುರಿತು ಸಾಕಷ್ಟು ಚರ್ಚೆಗಳು ನಡೆದಿದ್ದವು".
"2024ರಲ್ಲಿ ಮತ್ತೊಂದು ಐಪಿಎಲ್ ಸೀಸನ್ ಆಡಲು ಎಂಎಸ್ ಧೋನಿ ಸಜ್ಜಾಗುತ್ತಿದ್ದಾರೆ. ಅವರು ಯಾವಾಗಲೂ ಆಶ್ಚರ್ಯಗಳಿಂದ ತುಂಬಿರುವ ವ್ಯಕ್ತಿ. ಬಹುಶಃ ಅವರು ಇನ್ನೂ ಮೂರು ಐಪಿಎಲ್ ಆವೃತ್ತಿಗಳನ್ನು ಆಡಬಹುದು, ಯಾರಿಗೆ ಗೊತ್ತು? ಆದರೆ ತಂಡದಲ್ಲಿ ಅವರ ಹೆಸರನ್ನು ನೋಡುವುದು ಅದ್ಭುತವಾಗಿದೆ," ಎಂದು ಎಬಿ ಡಿವಿಲಿಯರ್ಸ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಭವಿಷ್ಯ ನುಡಿದರು.
ಇಡೀ ಐಪಿಎಲ್ 2023ರ ಆವೃತ್ತಿಯಲ್ಲಿ ಮೊಣಕಾಲಿನ ಮೇಲೆ ದೊಡ್ಡ ಪಟ್ಟಿಯನ್ನು ಧರಿಸಬೇಕಾಗಿದ್ದರೂ, ಧೋನಿ ಸಿಎಸ್ಕೆ ತಂಡದ ಐದನೇ ಪ್ರಶಸ್ತಿ ಗೆಲುವಿಗೆ ಕಾರಣರಾದರು. ಇನ್ನು ಐಪಿಎಲ್ 2024ರ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ನಿಂದ ಬಿಡುಗಡೆಯಾದ ಶಾರುಖ್ ಖಾನ್ ಅವರನ್ನು ತೆಗೆದುಕೊಳ್ಳುವ ಕುರಿತು ಆರ್ಸಿಬಿ ಶ್ರೇಷ್ಠ ಕ್ರಿಕೆಟಿಗ ಚರ್ಚಿಸಿದ್ದಾರೆ.
"ಶಾರುಖ್ ಖಾನ್ ಪ್ರಬಲ ಆಟಗಾರ ಮತ್ತು ಸಾಕಷ್ಟು ಸ್ಥಿರರಾಗಿದ್ದಾರೆ. ಕೆಲವು ತಂಡಗಳು ಅವರನ್ನು ಖರೀದಿಸಲು ತುಂಬಾ ಉತ್ಸುಕರಾಗಿರುತ್ತವೆ ಎಂದು ನನಗೆ ಖಾತ್ರಿಯಿದೆ. ಅವರು ಚೆಂಡನ್ನು ಬಹಳ ದೂರದಲ್ಲಿ ಹೊಡೆಯುತ್ತಾರೆ. ಅದರಲ್ಲಿ ಸಿಎಸ್ಕೆ ಎದ್ದು ಕಾಣುತ್ತದೆ. ಬಿಡುಗಡೆಯಾದ ಆಟಗಾರರನ್ನು ಆಯ್ಕೆ ಮಾಡುವಲ್ಲಿ ಸಿಎಸ್ಕೆ ಉತ್ತಮರಾಗಿದ್ದಾರೆ," ಎಂದು ಎಬಿ ಡಿವಿಲಿಯರ್ಸ್ ಅಭಿಪ್ರಾಯಪಟ್ಟರು.