ಭಾನುವಾರ, ಮೇ 5ರಂದು ಧರ್ಮಶಾಲಾದಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) 53ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಸೆಣಸಾಡಿದವು.
ಐದು ಬಾರಿಯ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ತಮ್ಮ ವೇಗದ ಬೌಲರ್ ಮಥೀಶ್ ಪತಿರಾನ ಮಂಡಿರಜ್ಜು ಗಾಯದಿಂದ ಚೇತರಿಸಿಕೊಳ್ಳಲು ಭಾರತ ತೊರೆದು ಶ್ರೀಲಂಕಾಕ್ಕೆ ಮರಳಲಿದ್ದಾರೆ ಎಂದು ಘೋಷಿಸಿದೆ. ಏಪ್ರಿಲ್ 28ರಂದು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಆಡಿದ ನಂತರ ಮಥೀಶ್ ಪತಿರಾನ ಆಡುವ 11ರ ಬಳಗದಿಂದ ಕಾಣೆಯಾಗಿದ್ದಾರೆ.

ರುತುರಾಜ್ ಗಾಯಕ್ವಾಡ್ ನಾಯಕತ್ವದ ಸಿಎಸ್ಕೆ ತಂಡಕ್ಕೆ ಮಥೀಶ್ ಪತಿರಾನ ಉತ್ತಮ ಪ್ರದರ್ಶನ ನೀಡಿದ ಬೌಲರ್ ಆಗಿದ್ದಾರೆ ಮತ್ತು ಇದೀಗ ಅವರ ಅನುಪಸ್ಥಿತಿಯು ಐಪಿಎಲ್ 2024ರ ಪ್ಲೇಆಫ್ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಎದುರು ನೋಡುತ್ತಿರುವ ಸಿಎಸ್ಕೆ ತಂಡಕ್ಕೆ ದೊಡ್ಡ ಹಿನ್ನಡೆಯಾದಂತಾಗಿದೆ.
"ಮತೀಶ್ ಪತಿರಾನ ಅವರು ಮಂಡಿರಜ್ಜು ಗಾಯದಿಂದ ಬಳಲುತ್ತಿದ್ದು, ಇನ್ನಷ್ಟು ಚೇತರಿಸಿಕೊಳ್ಳಲು ಶ್ರೀಲಂಕಾಕ್ಕೆ ಮರಳಲಿದ್ದಾರೆ. ಮತೀಶ್ ಪತಿರಾನ ಅವರು ಶೀಘ್ರ ಗುಣಮುಖರಾಗಲಿ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡವು ಹಾರೈಸುತ್ತದೆ," ಎಂದು ಸಿಎಸ್ಕೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಐಪಿಎಲ್ 2024ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಪ್ಲೇಆಫ್ಗೆ ಅರ್ಹತೆ ಪಡೆಯುವ ಹೋರಾಟದಲ್ಲಿದೆ ಮತ್ತು ಭಾನುವಾರ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯವು ರೇಸ್ನಲ್ಲಿ ಅವರಿಗೆ ಒಂದು ದೊಡ್ಡ ಅವಕಾಶ ನೀಡುತ್ತದೆ.

ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ಟಾಸ್ ವೇಳೆ ಮಾತನಾಡಿದ ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್, "ನಾವು ನಮ್ಮ ಆಟಕ್ಕೆ ಅಂಟಿಕೊಂಡಿದ್ದೇವೆ ಮತ್ತು ಸಣ್ಣ ಕೆಲಸಗಳನ್ನು ಸರಿಯಾಗಿ ಮಾಡುತ್ತಿದ್ದೇವೆ. ನಾವು ಹಿಂದಿನ ಸೋಲಿನ ಸರಣಿಯ ದಾಖಲೆಯನ್ನು ನೋಡುವುದಿಲ್ಲ, ನಾವು ನಮ್ಮ ಮೇಲೆ ಕೇಂದ್ರೀಕರಿಸುತ್ತೇವೆ ಮತ್ತು ನಾವು ಸರಿಯಾಗಿ ಏನು ಮಾಡಬಹುದು ಎಂಬುದನ್ನು ನೋಡುತ್ತೇವೆ," ಎಂದರು.
"ಈ ಆವೃತ್ತಿಯಲ್ಲಿ ಆಟಗಾರರಿಗೆ ಹೆಚ್ಚಿನ ಗಾಯಗಳು, ಜ್ವರ ಮತ್ತು ಬಲವಂತದ ಬದಲಾವಣೆಗಳು ಸಂಭವಿಸಿವೆ. ಹೀಗಾಗಿ ನಾವು ನಮ್ಮ ತಂಡದೊಂದಿಗೆ ಅಂಟಿಕೊಳ್ಳಬೇಕಾಗಿತ್ತು. ನಾನು 10 ಟಾಸ್ಗಳನ್ನು ಕಳೆದುಕೊಂಡರೂ 5 ಪಂದ್ಯಗಳನ್ನು ಗೆಲ್ಲುವುದು ಸಕಾರಾತ್ಮಕವಾಗಿದೆ ಎಂದು ಹೇಳುತ್ತೇನೆ. ಮುಸ್ತಾಫಿಜುರ್ ರಹಮಾನ್ ಬದಲಿಗೆ ಮಿಚೆಲ್ ಸ್ಯಾಂಟ್ನರ್ ಆಡುತ್ತಿದ್ದಾರೆ," ಎಂದು ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್ ತಿಳಿಸಿದರು.
ಮತ್ತೊಂದೆಡೆ, ಈ ಉಭಯ ತಂಡಗಳು ಈ ಋತುವಿನಲ್ಲಿ ಮೊದಲು ಮುಖಾಮುಖಿಯಾದಾಗ ಪಂಜಾಬ್ ಕಿಂಗ್ಸ್ ಗೆಲುವು ಸಾಧಿಸಿತ್ತು. ಇದೀಗ ಸಿಎಸ್ಕೆ ವಿರುದ್ಧ ಮತ್ತೊಂದು ಗೆಲುವನ್ನು ಪಡೆಯಲು ಮತ್ತು ಅಂಕಪಟ್ಟಿಯಲ್ಲಿ ಟಾಪ್ 4 ಅವಕಾಶಗಳನ್ನು ಹೆಚ್ಚಿಸಲು ಎದುರು ನೋಡುತ್ತಿದೆ.

"ನಾವು ಮೊದಲು ಬೌಲಿಂಗ್ ಮಾಡಲಿದ್ದೇವೆ. ದಿನದ ಆಟ, ಅದು ಹೇಗೆ ಆಡುತ್ತದೆ ಮತ್ತು ಗುರಿ ಬೆನ್ನಟ್ಟಲು ಪ್ರಯತ್ನಿಸುತ್ತೇವೆ. ನಾವು ಹಿಂದಿನ ತಂಡವನ್ನೇ ಮುಂದುವರೆಸುತ್ತೇವೆ. ಈ ತಂಡದೊಂದಿಗೆ ಎರಡು ಉತ್ತಮ ಗೆಲುವುಗಳನ್ನು ಹೊಂದಿದ್ದೇವೆ. ಪರಿಸ್ಥಿತಿಗಳು ಪಂದ್ಯದುದ್ದಕ್ಕೂ ಸಮನಾಗಿರುತ್ತದೆ. ತಂಡದ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಉತ್ತಮವಾಗಿದೆ," ಎಂದು ಪಂಜಾಬ್ ಕಿಂಗ್ಸ್ ಹಂಗಾಮಿ ನಾಯಕ ಸ್ಯಾಮ್ ಕರ್ರಾನ್ ಟಾಸ್ ವೇಳೆ ತಿಳಿಸಿದರು.
ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ರವೀಂದ್ರ ಜಡೇಜಾ ಅವರ ಸ್ಫೋಟಕ 43 ರನ್ಗಳ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 167 ರನ್ಗಳನ್ನು ಕಲೆಹಾಕಿದ್ದು, ಪಂಜಾಬ್ ಕಿಂಗ್ಸ್ ತಂಡಕ್ಕೆ 168 ರನ್ಗಳ ಗುರಿ ನೀಡಿದೆ.
ಬೌಲಿಂಗ್ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರ ರಾಹುಲ್ ಚಹಾರ್ 4 ಓವರ್ಗಳಲ್ಲಿ 23 ರನ್ ನೀಡಿ 3 ವಿಕೆಟ್ ಕಬಳಿಸಿದರೆ, ಹರ್ಷಲ್ ಪಟೇಲ್ 4 ಓವರ್ಗಳಲ್ಲಿ 24 ರನ್ ನೀಡಿ 3 ವಿಕೆಟ್ ಪಡೆದರು. ಅರ್ಶ್ದೀಪ್ ಸಿಂಗ್ 2 ಪಡೆದರೆ, ಸ್ಯಾಮ್ ಕರ್ರಾನ್ ಒಂದು ವಿಕೆಟ್ ತಮ್ಮದಾಗಿಸಿಕೊಂಡರು.