wpl 2024 ಯಶಸ್ವಿಯಾಗಿ ಮುಗಿದಿದೆ. ಇನ್ನೇನು ನಾಲ್ಕು ದಿನದಲ್ಲಿ ಐಪಿಎಲ್ ಆರಂಭವಾಗಲಿದೆ. ಈ ಟೂರ್ನಿಗಾಗಿ ಆಟಗಾರರು ಅಷ್ಟೇ ಅಲ್ಲಾ ಫ್ಯಾನ್ಸ್ ಸಹ ಕಾಯುತ್ತಿದ್ದಾರೆ. ಉದ್ಘಾಟನಾ ಪಂದ್ಯದಲ್ಲಿ ಆರ್ಸಿಬಿ ಹಾಗೂ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯವನ್ನು ಅಂಗಳದಲ್ಲಿ ಹೋಗಿ ನೋಡಬೇಕು ಎಂದು ಕನಸು ಕಾಣುತ್ತಿರುವ ಅಭಿಮಾನಿಗಳ ಸಂಖ್ಯೆ ಏರುತಲೇ ಇದೆ.
ಸೋಮವಾರ ಬೆಳಗ್ಗೆಯಿಂದಲೇ ಈ ಪಂದ್ಯದ ಟಿಕೆಟ್ಗಳ ಮಾರಾಟ ಆರಂಭಗೊಂಡಿದೆ. ಸಾವಿರಾರು ಅಭಿಮಾನಿಗಳು ಹಣ ನೀಡಿ ಟಿಕೆಟ್ ಖರೀದಿಸಲು ಆಫಿಸಿಯಲ್ ವೆಬ್ ಸೈಟ್ಗೆ ಭೇಟಿ ನೀಡಿದ್ದಾರೆ. ಆದರೆ ಟಿಕೆಟ್ ಸಿಗದೆ ಹತಾಶರಾಗಿದ್ದಾರೆ. ಐಪಿಎಲ್ ಮೊದಲ ಪಂದ್ಯದ ಟಿಕೆಟ್ಗಳನ್ನು ಆನ್ಲೈನ್ನಲ್ಲಿ ಮಾರಾಟ ಮಾಡಲಾಗುತ್ತಿದೆ. ಟಿಕೆಟ್ ಖರೀದಿಸಲು ಅಭಿಮಾನಿಗಳು ಆನ್ಲೈನ್ನಲ್ಲಿ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದು, ಅವರಿಗೆ ನಿರಾಸೆ ಕಾದಿದೆ.

ಟಿಕೆಟ್ ಬುಕ್ಕಿಂಗ್ ಆರಂಭವಾದ ತಕ್ಷಣ ಸಾವಿರಾರು ಅಭಿಮಾನಿಗಳು ಆನ್ಲೈನ್ನಲ್ಲಿ ಸೈಟ್ ಓಪನ್ ಮಾಡಿ ಟಿಕೆಟ್ ಪಡೆಯಲು ಮುಂದಾಗಿದ್ದಾರೆ. ಐಪಿಎಲ್ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಆರ್ಸಿಬಿ ತಂಡಗಳ ಕಾದಾಟವನ್ನು ನೋಡಲು ಅಭಿಮಾನಿಗಳು ತಯಾರಾಗಿದ್ದಾರೆ. ಈ ಪಂದ್ಯದ ಟಿಕೆಟ್ 1700 ರೂಪಾಯಿ ಇಂದ ಆರಭವಾಗುತ್ತವೆ.
ಬುಕ್ಕಿಂಗ್ ಆರಂಭವಾದ ಕೆಲವೇ ದಿನಗಳಲ್ಲಿ ವೆಬ್ ಸೈಟ್ ಕೂಡ ಕ್ರ್ಯಾಶ್ ಆಗಿದೆ. ಪಂದ್ಯದ ಟಿಕೆಟ್ಗಳನ್ನು Paytm ಇನ್ಸೈಡರ್ನಲ್ಲಿ ಮಾರಾಟ ಮಾಡಲಾಗುತ್ತಿದೆ. ಇಲ್ಲಿ ಸಾವಿರಾರು ಅಭಿಮಾನಿಗಳು ಟಿಕೆಟ್ ಪಡೆಯಲು ಎಂಟ್ರಿ ನೀಡಿದ್ದರಿಂದ ಸೈಟ್ ಕ್ರ್ಯಾಶ್ ಆಗಿದೆ. ಅಲ್ಲದೆ ವೆಬ್ಸೈಟ್ ಕೆಲಸ ಮಾಡುವುದನ್ನು ನಿಲ್ಲಿಸಿದೆ. ಈ ಬಗ್ಗೆ ಪೇಟಿಎಂ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದೆ. ವೆಬ್ಸೈಟ್ನಲ್ಲಿ ತಾಂತ್ರಿಕ ದೋಷವಿದ್ದು, ಶೀಘ್ರ ಸರಿಪಡಿಸಲಾಗುವುದು ಎಂದು ಬಹಿರಂಗ ಪಡಿಸಿದೆ.
ಐಪಿಎಲ್ ಟಿಕೆಟ್ಗಳ ದರವು ಹಲವು ಶ್ರೇಣಿಗಳಲ್ಲಿದ್ದು, ಎಲ್ಲ ಅಭಿಮಾನಿಗಳಿಗೆ ಟಿಕೆಟ್ ದರ ಕೈಗೆಟುಕುವಂತೆ ಇರಬೇಕು ಎಂಬ ಆಸೆ ಆಯೋಜಕರದ್ದು. ಇದರಿಂದ 1700 ರಿಂದ 7500 ರೂ.ವರೆಗಿನ ಟಿಕೆಟ್ಗಳಿವೆ. ಆದರೆ ಸಾವಿರಾರು ಅಭಿಮಾನಿಗಳಿಗೆ ಟಿಕೆಟ್ ಸಿಗುತ್ತಿಲ್ಲ. ಟಿಕೆಟ್ ಸಿಗದಿರುವ ಬಗ್ಗೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಲವು ಪೋಸ್ಟ್ ಗಳನ್ನು ಹಂಚಿಕೊಂಡಿದ್ದಾರೆ. ಟಿಕೆಟ್ ಸಿಗದೇ ಅಭಿಮಾನಿಗಳು ತೀವ್ರ ಹತಾಶರಾಗಿದ್ದಾರೆ.
ಮಾರ್ಚ್ 22 ರಂದು ಚೆನ್ನೈನಲ್ಲಿ ಸಿಎಸ್ಕೆ ಮತ್ತು ಆರ್ಸಿಬಿ ನಡುವಿನ ಪಂದ್ಯ ನಡೆಯಲಿದೆ. ದಾಖಲೆಗಳನ್ನು ಗಮನಿಸಿದರೆ ಈ ಎರಡು ತಂಡಗಳ ನಡುವೆ ಇದುವರೆಗೆ ಒಟ್ಟು 31 ಪಂದ್ಯಗಳು ನಡೆದಿವೆ. ಈ ಅವಧಿಯಲ್ಲಿ ಚೆನ್ನೈ 20 ಪಂದ್ಯಗಳನ್ನು ಗೆದ್ದಿದ್ದು, ಬೆಂಗಳೂರು 10 ಪಂದ್ಯಗಳನ್ನು ಗೆದ್ದಿದೆ.
ಈಗಾಗಲೇ ಮಹಿಳಾ ಪ್ರೀಮಿಯರ್ ಲೀಗ್ ಮುಕುಟವನ್ನು ಆರ್ಸಿಬಿ ತಂಡ ಗೆದ್ದಿದ್ದರಿಂದ ಜೋಶ್ ಹೆಚ್ಚಾಗಿದೆ. ಹಿಂದಿನ ಎಲ್ಲ ಅಂಕಿ ಅಂಶಗಳನ್ನು ಬದಿಗೊತ್ತಿ ನೋಡುವುದಾದರೆ ಈ ಬಾರಿ ಆರ್ಸಿಬಿ ತಂಡದ ಆಟಗಾರರು ಅಂಗಳದಲ್ಲಿ ಸಂಘಟಿತ ಆಟದ ಪ್ರದರ್ಶನ ನೀಡಿ ಅಬ್ಬರಿಸಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಶತಾಯ ಗತಾಯ ಈ ಬಾರಿ ಕಪ್ ಗೆಲ್ಲಲು ಆರ್ಸಿಬಿ ರೂಪುರೇಷೆ ಮಾಡಿಕೊಂಡಿದೆ.