ಭಾನುವಾರ, ಮೇ 5ರಂದು ಧರ್ಮಶಾಲಾದಲ್ಲಿ ನಡೆದ ಐಪಿಎಲ್ 2024ರ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ 28 ರನ್ಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿತು.
ಗೆಲುವಿನ ಹೊರತಾಗಿಯೂ ಸಿಎಸ್ಕೆ ತಂಡದ ಬ್ಯಾಟರ್ಗಳು ವೈಫಲ್ಯ ಅನುಭವಿಸಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ. ರವೀಂದ್ರ ಜಡೇಜಾ 43 ರನ್ ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿದರು.

ಇನ್ನು 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಸಿಎಸ್ಕೆ ಮಾಜಿ ನಾಯಕ ಎಂಎಸ್ ಧೋನಿ ಅವರ ನಿರ್ಧಾರವು ತಂಡದ ಮಾಜಿ ಸಹ ಆಟಗಾರ ಹರ್ಭಜನ್ ಸಿಂಗ್ ಅವರನ್ನು ಗೊಂದಲಗೊಳಿಸಿತು.
ಎಂಎಸ್ ಧೋನಿ ಮತ್ತು ಟೀಮ್ ಮ್ಯಾನೇಜ್ಮೆಂಟ್ ನಿರ್ಧಾರವನ್ನು ಮಾಜಿ ಸ್ಪಿನ್ನರ್ ಟೀಕಿಸಿದರು ಮತ್ತು ಆ ಸ್ಥಾನದಲ್ಲಿ ವೇಗದ ಬೌಲರ್ನನ್ನು ಆಡಿಸಿದರೆ ಸಿಎಸ್ಕೆ ಉತ್ತಮವಾಗಿರುತ್ತದೆ ಎಂದು ಹೇಳಿದರು.

ಪ್ರಸಕ್ತ ಐಪಿಎಲ್ನಲ್ಲಿ ಎಂಎಸ್ ಧೋನಿ ಅದ್ಭುತ ಫಿನಿಷರ್ ಪಾತ್ರ ವಹಿಸಿದ್ದಾರೆ ಮತ್ತು 224.49ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಐಪಿಎಲ್ 2024ರಲ್ಲಿ ಧೋನಿ ಎದುರಿಸಿದ 49 ಎಸೆತಗಳಲ್ಲಿ 10 ಬೌಂಡರಿ ಮತ್ತು 9 ಸಿಕ್ಸರ್ಗಳನ್ನು ಬಾರಿಸಿದ್ದಾರೆ.
ಆದರೆ, 42 ವರ್ಷದ ಎಂಎಸ್ ಧೋನಿ ಕೆಳ-ಮಧ್ಯಮ ಕ್ರಮಾಂಕದಲ್ಲಿ ಸ್ವತಃ ಪಾತ್ರವನ್ನು ತೆಗೆದುಕೊಂಡಿದ್ದಾರೆ. ಇಲ್ಲಿ ಸಾಮಾನ್ಯವಾಗಿ ಬೆರಳೆಣಿಕೆಯಷ್ಟು ಎಸೆತಗಳನ್ನು ಮಾತ್ರ ಆಡುತ್ತಾರೆ ಮತ್ತು ಸಾಧ್ಯವಾದಷ್ಟು ಹೆಚ್ಚಿನ ರನ್ಗಳನ್ನು ಕಲೆಹಾಕಲು ಪ್ರಯತ್ನಿಸುತ್ತಾರೆ.

ಕಳೆದ ಆವೃತ್ತಿಯಲ್ಲಿ ಎಂಎಸ್ ಧೋನಿ ಕೆಲವು ಪಂದ್ಯಗಳಲ್ಲಿ 8ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದರು ಮತ್ತು ಇದೀಗ ಅದೇ ಟ್ರೆಂಡ್ ಮುಂದುವರೆದಿದೆ. ಭಾನುವಾರದಂದು ತಮ್ಮ ಟಿ20 ಕ್ರಿಕೆಟ್ ವೃತ್ತಿಜೀವನದಲ್ಲಿ ಮೊದಲ ಬಾರಿಗೆ 9ನೇ ಸ್ಥಾನದಲ್ಲಿ ಬ್ಯಾಟಿಂಗ್ಗೆ ಬಂದರು.
ಪಂಜಾಬ್ ಕಿಂಗ್ಸ್ ತಂಡದ ಹರ್ಷಲ್ ಪಟೇಲ್ ಅವರ ನಿಧಾನಗತಿಯ ಎಸೆತವನ್ನು ಆಫ್ ಸ್ಟಂಪ್ ಬ್ಯಾಕ್ಗೆ ತಳ್ಳುವ ಪ್ರಯತ್ನದಲ್ಲಿ ವಿಫಲರಾಗಿ ಎಂಎಸ್ ಧೋನಿ ಗೋಲ್ಡನ್ ಡಕ್ಗೆ ಔಟಾದರು.
ಮಾಜಿ ನಾಯಕ ಎಂಎಸ್ ಧೋನಿ ಸಿಎಸ್ಕೆ ತಂಡದಲ್ಲಿ ನಿರ್ಧಾರ ತೆಗೆದುಕೊಳ್ಳುವವರಾಗಿದ್ದಾರೆ ಎಂದು ಹರ್ಭಜನ್ ಸಿಂಗ್ ಹೇಳಿದರು. ವೇಗದ-ಬೌಲಿಂಗ್ ಆಲ್ರೌಂಡರ್ ಶಾರ್ದೂಲ್ ಠಾಕೂರ್ ಅವರ ನಂತರ 9ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿದ್ದಕ್ಕೆ ಎಂಎಸ್ ಧೋನಿ ನಿರ್ಧಾರವನ್ನು ಟೀಕಿಸಿದರು.
ಸ್ವತಃ ಎಂಎಸ್ ಧೋನಿಗೆ 9ನೇ ಕ್ರಮಾಂಕದ ಮೇಲೆ ಬ್ಯಾಟಿಂಗ್ ಮಾಡಲು ಸಾಧ್ಯವಾಗದಿದ್ದರೆ, ಸಿಎಸ್ಕೆ ಮ್ಯಾನೇಜ್ಮೆಂಟ್ ಅವರ ಬದಲಿಗೆ ವೇಗಿಯನ್ನು ಆಡಿಸಬೇಕು ಎಂದು ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
"ಎಂಎಸ್ ಧೋನಿ ಅವರು 9ನೇ ಸ್ಥಾನದಲ್ಲಿ ಬ್ಯಾಟ್ ಮಾಡಲು ಬಯಸಿದರೆ ಆಡಬಾರದು. ಆಡುವ 11ರ ಬಳಗದಲ್ಲಿ ಅವರಿಗಿಂತ ವೇಗದ ಬೌಲರನನ್ನು ಸೇರಿಸಿಕೊಳ್ಳುವುದು ಉತ್ತಮ. ಧೋನಿ ತಂಡದಲ್ಲಿ ನಿರ್ಧಾರ ತೆಗೆದುಕೊಳ್ಳುವವರಾಗಿದ್ದಾರೆ ಮತ್ತು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬರದೆ ತಮ್ಮ ತಂಡವನ್ನು ನಿರಾಸೆಗೊಳಿಸಿದ್ದಾರೆ," ಎಂದು ಸಿಎಸ್ಕೆ ಮಾಜಿ ಆಟಗಾರ ಹರ್ಭಜನ್ ಸಿಂಗ್ ಸ್ಟಾರ್ ಸ್ಪೋರ್ಟ್ಸ್ನಲ್ಲಿ ತಿಳಿಸಿದರು.
"ಎಂಎಸ್ ಧೋನಿಗಿಂತ ಮೊದಲು ಶಾರ್ದೂಲ್ ಠಾಕೂರ್ ಬ್ಯಾಟಿಂಗ್ಗೆ ಬಂದರು. ಅವರಿಗೆ ಧೋನಿಯಂತೆ ಶಾಟ್ ಬಾರಿಸಲು ಸಾಧ್ಯವಿಲ್ಲ ಮತ್ತು ಧೋನಿ ಏಕೆ ಈ ತಪ್ಪು ಮಾಡಿದರು ಎಂದು ನನಗೆ ಅರ್ಥವಾಗುತ್ತಿಲ್ಲ. ಅವರ ಅನುಮತಿಯಿಲ್ಲದೆ ಏನೂ ಆಗುವುದಿಲ್ಲ ಮತ್ತು ಅವರನ್ನು ಕೆಳಗಿಳಿಸುವ ಈ ನಿರ್ಧಾರವನ್ನು ಬೇರೆಯವರು ತೆಗೆದುಕೊಂಡಿದ್ದಾರೆ ಎಂದರೆ ನಾನು ಒಪ್ಪಿಕೊಳ್ಳಲು ಸಿದ್ಧನಿಲ್ಲ," ಎಂದು ಹರ್ಭಜನ್ ಸಿಂಗ್ ಹೇಳಿದರು.
ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ರಸ್ತುತ ಐಪಿಎಲ್ 2024ರ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಶುಕ್ರವಾರ, ಮೇ 10ರಂದು ಅಹಮದಾಬಾದ್ನಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಎದುರಿಸಲಿದೆ.