ಐಪಿಎಲ್ ರಂಗು ಇನ್ನೇನು ಕೆಲವೇ ದಿನಗಳಲ್ಲಿ ಅಭಿಮಾನಿಗಳನ್ನು ಆವರಿಸಲಿದೆ. ಈ ಬಾರಿ ತಂಡಗಳು ಹಲವು ಮಾರ್ಪಾಡುಗಳನ್ನು ಮಾಡಿಕೊಂಡು ಮೈದಾನಕ್ಕೆ ಎಂಟ್ರಿ ನೀಡಲಿವೆ. ಇದರಲ್ಲಿ ಮುಂಬೈ ಇಂಡಿಯನ್ಸ್ ಸಹ ಒಂದು. ಸತತ ಎರಡು ಬಾರಿ ಗುಜರಾತ್ ಟೈಟನ್ಸ್ ತಂಡವನ್ನು ಫೈನಲ್ಗೆ ಕೊಂಡಯ್ಯುವಲ್ಲಿ ಸಫಲರಾಗಿದ್ದ ಹಾರ್ದಿಕ್ ಪಾಂಡ್ಯ, ಈಗ ಮುಂಬೈ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಮುಂಬೈ ಇಂಡಿಯನ್ಸ್ ಹಾರ್ದಿಕ್ ಪಾಂಡ್ಯ ಅವರನ್ನು ಟ್ರೇಡ್ ಮಾಡಿ ತಮ್ಮ ತಂಡಕ್ಕೆ ಸೇರಿಸಿಕೊಂಡಿತ್ತು. ಈ ಮೂಲಕ ಎರಡು ಬಾರಿ ಫೈನಲ್ ಪ್ರವೇಶಿಸಿದ್ದ ಗುಜರಾತ್ ಟೈಟನ್ಸ್ ತಂಡಕ್ಕೆ ಪೆಟ್ಟು ಬಿದ್ದಿದೆ. ಹಾರ್ದಿಕ್ ಪಾಂಡ್ಯ ನಾಯಕರಾಗಿ ಗುಜರಾತ್ ತಂಡವನ್ನು ಸಮರ್ಥವಾಗಿ ಮುನ್ನಡೆಸಿದ್ದರು. ಈಗ ಅವರ ಅನುಪಸ್ಥಿತಿ ತಂಡಕ್ಕೆ ಕಾಡಲಿದೆಯಾ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಹಾರ್ದಿಕ್ ಪಾಂಡ್ಯ ಅನುಪಸ್ಥಿತಿ ತಂಡಕ್ಕೆ ಕಾಡದು ಎಂದು ಗುಜರಾತ್ ತಂಡ ಹೇಳಿಕೊಂಡರೂ ಸಹ, ತಂಡದ ರಚನೆಯಲ್ಲಿ ಈ ಕೊರತೆ ಬಹುವಾಗಿ ಕಾಡುತ್ತದೆ. ಈ ತಂಡದ ನೂತನ ಸಾರಥಿ ಯಂಗ್ ಶುಭಮನ್ ಗಿಲ್ ಅವರ ಮೇಲೆ ಅಪಾರ ಭರವಸೆಯನ್ನು ಇಟ್ಟುಕೊಳ್ಳಲಾಗಿದೆ. ಗುಜರಾತ್ ಏನೇ ಹೇಳಬಹುದು ಆದರೆ, ಹಾರ್ದಿಕ್ ಅವರನ್ನು ರಿಪ್ಲೇಸ್ ಮಾಡುವ ಆಟಗಾರ ಅವರ ತಂಡದಲ್ಲಿ ಇಲ್ಲ. ಮುಂಬೈ ಇಂಡಿಯನ್ಸ್ ನೀಡಿದ ಮಾಸ್ಟರ್ ಸ್ಟ್ರೋಕ್ಗೆ ಗುಜರಾತ್ ತಬ್ಬಿಬ್ಬಾಗಿದೆ.
ನಾಯಕ ಶುಭ್ಮನ್ ಗಿಲ್ ಮತ್ತು ವೃದ್ಧಿಮಾನ್ ಸಹಾ ಇನ್ನಿಂಗ್ಸ್ ಆರಂಭಿಸ ಬಹುದು. ಮಧ್ಯಮ ಕ್ರಮಾಂಕದಲ್ಲಿ ಕೇನ್ ವಿಲಿಯಮ್ಸನ್ ಮತ್ತು ಸಾಯಿ ಸುದರ್ಶನ್ ಕಾಣಿಸಿಕೊಳ್ಳುವುದು ಬಹುತೇಕ ಪಕ್ಕಾ. ಮೇಲ್ನೋಟಕ್ಕಂತೂ ಅಗ್ರ ಕ್ರಮಾಂಕ ಸ್ಥಿರವಾಗಿದೆ. ನ್ಯೂಜಿಲೆಂಡ್ ಸ್ಟಾರ್ ಪ್ಲೇಯರ್ ಕೇನ್ ಆಗಮನ ಗುಜರಾತ್ ತಂಡದ ಬ್ಯಾಟಿಂಗ್ ವಿಭಾಗಕ್ಕೆ ಬೂಸ್ಟ್ ನೀಡಿದೆ.
ಡೇವಿಡ್ ಮಿಲ್ಲರ್, ಶಾರುಖ್ ಖಾನ್ ಮತ್ತು ರಾಹುಲ್ ತೆವಾಟಿಯಾ ಅವರನ್ನು ಮ್ಯಾಚ್ ಫಿನಿಶರ್ಗಳ ಪಾತ್ರದಲ್ಲಿ ನೋಡುವುದು ಬಹುತೇಕ ಪಕ್ಕಾ. ಈ ಸ್ಟಾರ್ ಪ್ಲೇಯರ್ಗಳು ಕಳೆದ ಋತುವಿನಲ್ಲಿ ತಮ್ಮ ಕ್ಷಮತೆಯನ್ನು ಸಾಬೀತು ಪಡಿಸಿದ್ದರು. ಸ್ಪಿನ್ ವಿಭಾಗದಲ್ಲಿ ಆಫ್ಘಾನ್ ಸ್ಪಿನ್ ಬೌಲರ್ ರಶೀದ್ ಖಾನ್ ಎದುರಾಳಿಗಳನ್ನು ಕಾಡಲು ಸಿದ್ಧರಾಗಿದ್ದಾರೆ.

ಮೋಹಿತ್ ಶರ್ಮಾ, ಉಮೇಶ್ ಯಾದವ್ ಮತ್ತು ಸ್ಪೆನ್ಸರ್ ಜಾನ್ಸನ್ ತಮ್ಮ ವೇಗದ ದಾಳಿಯ ಮೂಲಕ ವಿಕೆಟ್ ಬೇಟೆ ನಡೆಸಬಲ್ಲರು. ಭಾರೀ ಹಣ ನೀಡಿ ಖರೀದಿಸಿದ ಜಾನ್ಸನ್ ಅವರು ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವುದು ಫಿಕ್ಸ್ ಎಂದೇ ಹೇಳಲಾಗುತ್ತಿದೆ.
ಗುಜರಾತ್ ಟೈಟಾನ್ಸ್ನ ಸಂಭಾವ್ಯ ತಂಡ- ಶುಭ್ಮನ್ ಗಿಲ್ (ನಾಯಕ), ವೃದ್ಧಿಮಾನ್ ಸಹಾ (ವಿಕೆಟ್ಕೀಪರ್), ಸಾಯಿ ಸುದರ್ಶನ್, ಕೇನ್ ವಿಲಿಯಮ್ಸನ್, ಡೇವಿಡ್ ಮಿಲ್ಲರ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೋಹಿತ್ ಶರ್ಮಾ, ಉಮೇಶ್ ಯಾದವ್ ಮತ್ತು ಸ್ಪೆನ್ಸರ್ ಜಾನ್ಸನ್.