2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದ ಬಳಿಕ ಕೆಎಲ್ ರಾಹುಲ್ ಮತ್ತು ಸಂಜೀವ್ ಗೋಯೆಂಕಾ ನಡುವಿನ ವಾಗ್ವಾದವು ಇಡೀ ಕ್ರಿಕೆಟ್ ಲೋಕವನ್ನು ಪ್ರಚೋದಿಸಿದ್ದು, ಎಲ್ಲಾ ಕಡೆಗಳಿಂದಲೂ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ಎಸ್ಆರ್ಹೆಚ್ ವಿರುದ್ಧದ ಹೀನಾಯ ಸೋಲಿನ ನಂತರ ಎಲ್ಎಸ್ಜಿ ತಂಡದ ನಾಯಕ ಕೆಎಲ್ ರಾಹುಲ್ ಅವರೊಂದಿಗೆ ಮೈದಾನದಲ್ಲೇ ಸಾರ್ವಜನಿಕವಾಗಿ ಕೋಪ ಮಾಡಿಕೊಂಡಿದ್ದಕ್ಕಾಗಿ ಹಲವು ಮಾಜಿ ಕ್ರಿಕೆಟಿಗರು ಎಲ್ಎಸ್ಜಿ ಮಾಲೀಕ ಸಂಜೀವ್ ಗೋಯೆಂಕಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇದೀಗ, ಕೆಎಲ್ ರಾಹುಲ್ ಅವರ ಭಾರತ ತಂಡದ ಸಹ ಆಟಗಾರ ಮೊಹಮ್ಮದ್ ಶಮಿ ಕೂಡ ಹೆಚ್ಚು ಚರ್ಚಿತವಾದ ಘಟನೆಯ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು, ಇದು ಬಹಿರಂಗವಾಗಿ ನಡೆದಿದ್ದು ನಾಚಿಕೆಗೇಡಿನ ಸಂಗತಿ ಎಂದು ಹೇಳಿದ್ದಾರೆ.
ಕ್ರಿಕ್ಬಝ್ ಜೊತೆಗಿನ ಮಾತುಕತೆಯಲ್ಲಿ ಮೊಹಮ್ಮದ್ ಶಮಿ, ಮೈದಾನದಲ್ಲಿ ಇಂತಹ ಘಟನೆ ನಡೆಯುವುದನ್ನು ನೋಡಲು ನಾಚಿಕೆ ಪಡುತ್ತೇನೆ ಎಂದು ತಿಳಿಸಲು ಯಾವುದೇ ಹಿಂಜರಿಕೆಯಿಲ್ಲ ಎಂದರು.
"ಆಟಗಾರರಿಗೆ ಗೌರವವಿದೆ ಮತ್ತು ನೀವು ಮಾಲೀಕರಾಗಿರುವುದರಿಂದ ನೀವು ಗೌರವಾನ್ವಿತ ವ್ಯಕ್ತಿಯಾಗಿದ್ದೀರಿ. ಅನೇಕ ಜನರು ನಿಮ್ಮನ್ನು ನೋಡುತ್ತಿದ್ದಾರೆ ಮತ್ತು ನಿಮ್ಮಿಂದ ಕಲಿಯುತ್ತಿದ್ದಾರೆ. ಕ್ಯಾಮೆರಾಗಳ ಮುಂದೆ ಈ ಸಂಗತಿಗಳು ನಡೆದರೆ, ಇದು ನಾಚಿಕೆಗೇಡಿನ ಸಂಗತಿ," ಎಂದು ಭಾರತ ತಂಡದ ವೇಗಿ ಮೊಹಮ್ಮದ್ ಶಮಿ ತಿರುಗೇಟು ನೀಡಿದ್ದಾರೆ.

ಗುಜರಾತ್ ಟೈಟನ್ಸ್ ತಂಡದ ಅನುಭವಿ ವೇಗಿ, ಇಂತಹ ಪರಿಸ್ಥಿತಿಯನ್ನು ನಿಭಾಯಿಸಲು ಉತ್ತಮ ಮಾರ್ಗಗಳಿವೆ ಎಂದು ಭಾವಿಸಿದರು ಮತ್ತು ಮಾತುಕತೆ ಡ್ರೆಸ್ಸಿಂಗ್ ರೂಮ್ ಅಥವಾ ಹೋಟೆಲ್ನಲ್ಲಿ ನಡೆಯಬಹುದಿತ್ತು ಎಂದು ತಿಳಿಸಿದರು.
"ನೀವು ತಂಡದ ನಾಯಕನಿಂದ ಉತ್ತರ ಪಡೆಯಲು ಹಲವು ವಿಭಿನ್ನ ಮಾರ್ಗಗಳಿವೆ. ನೀವು ಡ್ರೆಸ್ಸಿಂಗ್ ರೂಮ್ ಅಥವಾ ಹೋಟೆಲ್ನಲ್ಲಿ ಅದೇ ಕೆಲಸವನ್ನು ಮಾಡಬಹುದಿತ್ತು, ಅದನ್ನು ಮೈದಾನದಲ್ಲಿ ಮಾಡುವ ಅಗತ್ಯವಿಲ್ಲ. ಇದನ್ನು ಮಾಡುವ ಮೂಲಕ ನೀವು ಕೆಂಪುಕೋಟೆಯಲ್ಲಿ ಧ್ವಜವನ್ನು ಹಾರಿಸಿದಂತಲ್ಲ," ಎಂದು ಭಾರತೀಯ ಸ್ಟಾರ್ ವೇಗಿ ಮೊಹಮ್ಮದ್ ಶಮಿ ಕಿಡಿಕಾರಿದರು.
ಪಂದ್ಯದಲ್ಲಿ ಕೆಟ್ಟ ದಿನ ಹೊಂದಿದ ನಂತರ ಕೆಎಲ್ ರಾಹುಲ್ ಅವರಿಗೆ ಅರ್ಹವಾದ ಗೌರವವನ್ನು ತೋರಿಸದಿರುವುದನ್ನು ನೋಡಿ ಮೊಹಮ್ಮದ್ ಶಮಿ ಅಸಮಾಧಾನಗೊಂಡರು.
"ಕೆಎಲ್ ರಾಹುಲ್ ನಾಯಕ, ಸಾಮಾನ್ಯ ಆಟಗಾರನಲ್ಲ. ಇದು ತಂಡದ ಆಟ, ಯೋಜನೆ ಯಶಸ್ವಿಯಾಗದಿದ್ದರೆ, ಅದು ದೊಡ್ಡ ವಿಷಯವಲ್ಲ. ಆಟದಲ್ಲಿ ಏನು ಬೇಕಾದರೂ ನಡೆಯಬಹುದು. ಒಳ್ಳೆಯ ಅಥವಾ ಕೆಟ್ಟ ದಿನಗಳು ಇರಬಹುದು ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಆದರೆ ಪ್ರತಿಯೊಬ್ಬ ಆಟಗಾರನಿಗೆ ಗೌರವವಿದೆ ಮತ್ತು ಮಾತನಾಡಲು ಒಂದು ಮಾರ್ಗವಿದೆ. ಇದು ತುಂಬಾ ತಪ್ಪು ಸಂದೇಶವನ್ನು ರವಾನಿಸುತ್ತದೆ," ಎಂದು ಮೊಹಮ್ಮದ್ ಶಮಿ ಹೇಳಿದ್ದಾರೆ.
ಈ ಘಟನೆಯು ಚರ್ಚೆಯ ಬಿಸಿ ವಿಷಯವಾದ ನಂತರ, ಕೆಎಲ್ ರಾಹುಲ್ ಇನ್ನು ಮುಂದೆ ಲಕ್ನೋ ಸೂಪರ್ ಜೈಂಟ್ಸ್ ನಾಯಕನಾಗಿ ಮುಂದುವರಿಯುವುದಿಲ್ಲ ಎಂದು ವರದಿಯಾಗಿದೆ.