ಐಪಿಎಲ್ 2024 ಆರಂಭಕ್ಕೆ ಮುನ್ನವೇ ಮುಂಬೈ ಇಂಡಿಯನ್ಸ್ ಚಿಂತೆ ಹೆಚ್ಚಾಗಿದೆ. ಮುಂಬೈ ತಂಡದಲ್ಲಿ ಇಷ್ಟು ದಿನ ಇದ್ದ ನಾಯಕತ್ವದ ಬದಲಾವಣೆ ಅಸಮಾಧನ ಈಗ ಒಂದು ಲೆಕಕ್ಕೆ ತಣ್ಣಗಾಗುತ್ತಿದ್ದಂತೆ ಕಾಣುತ್ತಿದೆ. ಇದರಿಂದ ಫ್ರಾಂಚೈಸಿ ನಿರಾಳವಾಗುತ್ತಿದ್ದರು. ಆದರೆ ಮುಂಬೈ ಇಂಡಿಯನ್ಸ್ ಕ್ಯಾಂಪ್ನಲ್ಲಿ ಮತ್ತೊಂದು ಚಿಂತೆಯ ಗೆರೆಗಳು ಮೂಡುವಂತಹ ಸುದ್ದಿ ಹೊರಬಿದ್ದಿದೆ.
ಮುಂಬೈ ಇಂಡಿಯನ್ಸ್ ಸ್ಟಾರ್ ಆಟಗಾರರನ್ನು ತನ್ನ ಒಡಲಿನಿಲ್ಲಿ ಪೋಷಿಸಿದೆ. ಈ ತಂಡದಲ್ಲಿ ಆಡಿದ ಬಳಿಕವೇ ಅದೆಷ್ಟೋ ಸ್ಟಾರ್ ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು. ಈ ಲೀಸ್ಟ್ ದೊಡ್ಡದಿದೆ. ಈ ತಂಡದ ಜೆರ್ಸಿ ಹಾಕಿಕೊಂಡು ಮೈದಾನಕ್ಕೆ ಇಳಿಯುವುದನ್ನೇ ಗೌರವ ಎಂದು ಆಟಗಾರರು ಸಹ ಭಾವಿಸುತ್ತಾರೆ.

ಆದರೆ ಕಳೆದ ಕೆಲವು ದಿನಗಳಿಂದ ಮುಂಬೈ ಇಂಡಿಯನ್ಸ್ ತಂಡದ ಪಡಸಾಲೆ ಅಸಮಾಧಾನದ ಹೊಗೆ ಮಾಲೀಕರ ಚಿಂತೆಯನ್ನು ದುಪಟ್ಟು ಮಾಡಿತ್ತು. ಈಗ ಮತ್ತೊಂದು ಚಿಂತೆ ನಿಶ್ಚಿತವಾಗಿ ಮುಂಬೈ ತಂಡದ ಚಿಂತೆಗೆ ಕಾರಣವಾಗಿದೆ. ಇದುವೇ ಆಟಗಾರರಿಗೆ ಗಾಯ..
ಇಂಡಿಯನ್ ಪ್ರೀಮಿಯರ್ ಲೀಗ್ನ 17ನೇ ಸೀಸನ್ಗೂ ಮುನ್ನ ಮುಂಬೈ ಇಂಡಿಯನ್ಸ್ ತಂಡಕ್ಕೆ ಪೆಟ್ಟು ಬಿದ್ದಿದೆ. ಮುಂಬೈ ಇಂಡಿಯನ್ಸ್ನ ಸ್ಟಾರ್ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ ಆರಂಭಿಕ ಪಂದ್ಯಗಳಿಂದ ಹೊರಗುಳಿಯುವುದು ಖಚಿತ ಎಂದು ಪರಿಗಣಿಸಲಾಗಿದೆ. ಸೂರ್ಯಕುಮಾರ್ ಯಾದವ್ ಅವರು ಹರ್ನಿಯಾ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗುತ್ತದೆ. ಈ ಶಸ್ತ್ರಚಿಕಿತ್ಸೆಯಿಂದಾಗಿ ಸೂರ್ಯಕುಮಾರ್ ಸುಮಾರು ಮೂರು ತಿಂಗಳ ಕಾಲ ಕ್ರಿಕೆಟ್ ಮೈದಾನದಿಂದ ದೂರ ಉಳಿಯಬಹುದು. ಮಾರ್ಚ್ ಕೊನೆಯ ವಾರದಲ್ಲಿ ಐಪಿಎಲ್ ಆರಂಭವಾಗಲಿರುವುದರಿಂದ ಸೂರ್ಯಕುಮಾರ್ ಯಾದವ್ ಆರಂಭಿಕ ಪಂದ್ಯಗಳಲ್ಲಿ ಆಡುವುದು ಕಷ್ಟ.

ಇನ್ಸೈಡ್ ಸ್ಪೋರ್ಟ್ಸ್ ವರದಿ ಪ್ರಕಾರ, ಶಸ್ತ್ರಚಿಕಿತ್ಸೆಯ ನಂತರ ಸೂರ್ಯಕುಮಾರ್ ಯಾದವ್ ಮೈದಾನಕ್ಕೆ ಮರಳಲು 8 ರಿಂದ 9 ವಾರಗಳವರೆಗೆ ಬೇಕಾಗುತ್ತದೆ ಎಂದು ತಿಳಿದು ಬಂದಿದೆ.
ಸೂರ್ಯಕುಮಾರ್ ಯಾದವ್ ಆಸ್ಟ್ರೇಲಿಯಾ ವಿರುದ್ಧದ 5 ಟಿ20 ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲೂ ಸೂರ್ಯಕುಮಾರ್ ಯಾದವ್ ಅತ್ಯುತ್ತಮ ಫಾರ್ಮ್ ತೋರಿಸಿದ್ದರು. ಈ ಸರಣಿಯ ಕೊನೆಯ ಪಂದ್ಯದಲ್ಲಿ ಗಾಯಗೊಂಡಿದ್ದ ಸೂರ್ಯ ಇನ್ನು ಫಿಟ್ ಆಗಿಲ್ಲ. ಸೂರ್ಯಕುಮಾರ್ ಯಾದವ್ ಪಾದದ ಗಾಯದಿಂದ ಬಳಲುತ್ತಿರುವ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
ಟಿ20ಯಲ್ಲಿ ಸೂರ್ಯಕುಮಾರ್ ಟೀಮ್ ಇಂಡಿಯಾ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಭಾಗ. ಸೂರ್ಯಕುಮಾರ್ ಯಾದವ್ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದರು. ಈ ವರ್ಷ ನಡೆಯಲಿರುವ ಟಿ20 ವಿಶ್ವಕಪ್ನಲ್ಲಿ ಸೂರ್ಯಕುಮಾರ್ ಯಾದವ್ ಆಡುವುದು ಖಚಿತ ಎಂದು ಪರಿಗಣಿಸಲಾಗಿದೆ. ಇನ್ನು ಕಳೆದ ವರ್ಷ ಸೂರ್ಯ ಅವರ ಪ್ರದರ್ಶನ ಅಷ್ಟೋಂದು ಉತ್ತಮವಾಗಿರಲಿಲ್ಲ. ಇದರ ಹೊರತಾಗಿಯೂ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ನಲ್ಲಿ ಸ್ಥಾನ ಪಡೆದಿದ್ದ ಸ್ಕೈ ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವಿದ್ದರು.
ಸಂಜು ಸ್ಯಾಮ್ಸನ್ ಬದಲಿಗೆ ಸೂರ್ಯಕುಮಾರ್ ಯಾದವ್ ಅವರನ್ನು ವಿಶ್ವಕಪ್ ತಂಡಕ್ಕೆ ಸೇರಿಸಿಕೊಂಡ ನಿರ್ಧಾರಕ್ಕೆ ಸಾಕಷ್ಟು ಟೀಕೆಗಳು ಕೇಳಿ ಬಂದವು. ಆದರೆ, ಸೂರ್ಯಕುಮಾರ್ ಯಾದವ್ಗೆ ಮತ್ತೆ ಏಕದಿನ ಮಾದರಿಯಲ್ಲಿ ಅವಕಾಶ ಸಿಗುವುದು ತುಂಬಾ ಕಷ್ಟ ಎಂಬ ಅಭಿಪ್ರಾಯ ಈಗ ವ್ಯಕ್ತವಾಗಿದೆ. ಆದರೆ ಈಗಿರುವ ಪ್ರಶ್ನೆ ಸೂರ್ಯಕುಮಾರ್ ಐಪಿಎಲ್ನ ಎಷ್ಟು ಪಂದ್ಯಗಳನ್ನು ಮಿಸ್ ಮಾಡಿಕೊಳ್ಳಲಿದ್ದಾರೆ ಎಂಬುದೇ ಆಗಿದೆ.